ಅಕ್ರಮ ಕಟ್ಟಡದ ವಿರುದ್ಧ ಪ್ರತಿಭಟಿಸುತ್ತಿದ್ದ ೮೧ ವರ್ಷದ ವೃದ್ಧನನ್ನು ಹತ್ಯೆ ಗೈದ ತೃಣಮೂಲ ಕಾಂಗ್ರೆಸ್‌ನ ಮಾಜಿ ನಾಯಕ!

ಬಂಗಾಳದ ಬರಾಕಪುರದಲ್ಲಿ ನಡೆದ ಘಟನೆ

ಕೋಲಕಾತಾ (ಬಂಗಾಳ) – ಉತ್ತರ ೨೪ ಪರಗಣ ಜಿಲ್ಲೆಯ ಬರಾಕಪುರದಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ತುಳಸಿ ಅಧಿಕಾರಿ ಎಂಬ ೮೧ ವರ್ಷದ ವೃದ್ಧನನ್ನು ಹತ್ಯೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯವಾದಿ ಮತ್ತು ತೃಣಮೂಲ ಕಾಂಗ್ರೆಸ್‌ನ ಮಾಜಿ ನಾಯಕ ರವೀಂದ್ರನಾಥ ಭಟ್ಟಾಚಾರ್ಯ ಎಂಬುವವರನ್ನು ಬಂಧಿಸಲಾಗಿದೆ. ಭಟ್ಟಾಚಾರ್ಯ ಅವರು ‘ಬರಾಕಪುರ ಬಾರ್ ಅಸೋಸಿಯೇಷನ್’ನ ಕಾರ್ಯದರ್ಶಿ ಮತ್ತು ಉತ್ತರ ಬರಾಕಪುರ ನಗರಸಭೆಯ ವಾರ್ಡ್ ಸಂಖ್ಯೆ ೨೩ ರ ಪ್ರತಿನಿಧಿಯಾಗಿದ್ದರು; ಆದರೆ ಅವರನ್ನು ೬ ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

ಯಾವ ಪ್ರಕರಣ?

ಬರಾಕಪುರದ ಮಣಿರಾಮಪುರದಲ್ಲಿರುವ ಭಟ್ಟಾಚಾರ್ಯ ಅವರ ಮನೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿದ್ದ ೩ ಅಂತಸ್ತಿನ ಅಕ್ರಮ ಕಟ್ಟಡವನ್ನು ತುಳಸಿ ಅಧಿಕಾರಿ ಅವರು ವಿರೋಧಿಸಿದ್ದರು. ಫೆಬ್ರವರಿ ೭ ರಂದು ಅಕ್ರಮ ಕಟ್ಟಡದ ವಿರುದ್ಧ ನಡೆದ ಪ್ರತಿಭಟನಾ ಸ್ಥಳದಲ್ಲಿ ಅಧಿಕಾರಿ ಅವರು ಉಪಸ್ಥಿತರಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಸಮಯದಲ್ಲಿ ಭಟ್ಟಾಚಾರ್ಯ ಹಲ್ಲೆ ಮಾಡಿದರು. ಆಗ ಅಧಿಕಾರಿ ಅವರು ತಮ್ಮ ಮಗ ಹೇಮಂತನನ್ನು ರಕ್ಷಿಸಲು ಮಧ್ಯಪ್ರವೇಶಿಸಿದಾಗ, ಭಟ್ಟಾಚಾರ್ಯ ಅವರು ಅಧಿಕಾರಿ ಅವರಿಗೆ ಕಾಲಿನಿಂದ ಒದ್ದರು. ಇದರಿಂದಾಗಿ ಅವರು ಕೆಳಗೆ ಬಿದ್ದರು. ಗಾಯಗೊಂಡ ಅಧಿಕಾರಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ನ್ಯಾಯ ಸಿಗದಿದ್ದರೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ! – ಭಾಜಪ

ಭಾಜಪ ಈ ಹತ್ಯೆಯ ವಿರುದ್ಧ ಪ್ರತಿಭಟನೆ ಆರಂಭಿಸಿದ್ದು, ಭಟ್ಟಾಚಾರ್ಯ ಅವರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದೆ. ಸೆರೆಮನೆಯಲ್ಲಿ ಭಟ್ಟಾಚಾರ್ಯ ಅವರಿಗೆ ‘ಅತಿ ಗಣ್ಯ ವ್ಯಕ್ತಿ’ಯಂತೆ ಸತ್ಕಾರ ನೀಡಲಾಗುತ್ತಿದೆ ಎಂದು ಭಾಜಪ ಆರೋಪಿಸಿದೆ. ನ್ಯಾಯ ಸಿಗದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಭಾಜಪ ಎಚ್ಚರಿಕೆ ನೀಡಿದೆ.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್‌ನ ಮಾಜಿ ನಾಯಕರು ಇಂತಹ ಹತ್ಯೆಗಳನ್ನು ಮಾಡುತ್ತಿರುವುದು ಆಶ್ಚರ್ಯದ ವಿಷಯವೇನಲ್ಲ; ಏಕೆಂದರೆ ತೃಣಮೂಲದ ಇತಿಹಾಸ ಮತ್ತು ವರ್ತಮಾನವೇ ಹೀಗಿದೆ. ಈ ಪಕ್ಷದ ಜನರ ಮಾನಸಿಕತೆಯನ್ನು ಗಮನಿಸಿ, ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರ ಇದನ್ನು ನಿಷೇಧಿಸಲು ಧೈರ್ಯ ಮಾಡುತ್ತದೆಯೇ?