“ಬಾಂಗ್ಲಾದೇಶದ ಬದಲು ಭಾರತವು ತನ್ನ ಅಲ್ಪಸಂಖ್ಯಾತರ ಕಡೆಗೆ ಗಮನ ಹರಿಸಿದರೆ ಉತ್ತಮ!” Bangladesh Anti India Statement

ಬಾಂಗ್ಲಾದೇಶ: ಭಾರತ ವಿರೋಧಿ ಹೇಳಿಕೆ ನೀಡಿದ ವಿದೇಶಾಂಗ ಸಲಹೆಗಾರ ತೌಹೀದ್ ಹುಸೇನ್

ಢಾಕಾ(ಬಾಂಗ್ಲಾದೇಶ) – ನಾವು ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲಿನ ಕಾರ್ಯಾಚರಣೆಯ ಬಗ್ಗೆ ಹೇಳಿಕೆ ನೀಡುತ್ತಿಲ್ಲ. ಭಾರತೀಯ ಅಧಿಕಾರಿಗಳು ಕೂಡ ಇದೇ ನಿಲುವನ್ನು ತಾಳಬೇಕು ಎಂಬ ಅಪೇಕ್ಷೆ ಇದೆ. ನಮ್ಮ ನಾಗರೀಕರ ಮೇಲೆ ದೌರ್ಜನ್ಯ ನಡೆದರೆ ಅದರ ಕುರಿತು ಉಪಾಯ ಮಾಡುವುದಕ್ಕೆ ನಮ್ಮ ಬಳಿ ವ್ಯವಸ್ಥೆ ಇದೆ. ಭಾರತವು ಸ್ವತಃ ಅಲ್ಪಸಂಖ್ಯಾತರ ಕಡೆಗೆ ಗಮನ ನೀಡಿದರೆ ಒಳ್ಳೆಯದಾಗುವುದು. ನಾವು ನಮ್ಮ ಕೆಲಸ ಮಾಡುವೆವು, ಎಂದು ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರದ ವಿದೇಶಾಂಗ ಸಲಹೆಗಾರ ತೌಹೀದ್ ಹುಸೇನ್, ಹೇಳಿದರು.

ಭಾರತೀಯರ ಸುರಕ್ಷತೆಯಲ್ಲಿ ವಿಫಲವಾಗಿರುವ ಬಗ್ಗೆ ಯಾವುದೇ ಸಾಕ್ಷಿ ಇಲ್ಲ!

ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ, ಢಾಕಾದಲ್ಲಿರುವ ಭಾರತೀಯ ಹೈಕಮಿಷನ್‌ನ ರಾಜತಾಂತ್ರಿಕ ಅಧಿಕಾರಿಗಳ ಕುಟುಂಬ ಸದಸ್ಯರನ್ನು ವಾಪಸ್ ಕರೆಸಿಕೊಳ್ಳುವ ಭಾರತದ ನಿರ್ಧಾರಕ್ಕೆ ಹುಸೇನ್ ಆಕ್ಷೇಪ ವ್ಯಕ್ತಪಡಿಸಿದರು. “ನಾವು ಭಾರತೀಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ವಿಫಲರಾಗಿದ್ದೇವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ಭಾರತದ ಈ ನಿರ್ಧಾರ ನಮಗೆ ಸರಿಯೆಂದು ಅನಿಸುವುದಿಲ್ಲ,” ಎಂದು ಹುಸೇನ್ ಹೇಳಿದರು.

ಭಾರತ-ಬಾಂಗ್ಲಾ ಸಂಬಂಧಗಳು ಹಾಳಾಗಲು ನಾವು ಏನು ಮಾಡಿದ್ದೇವೆ?

ಭಾರತ ಮತ್ತು ಬಾಂಗ್ಲಾದೇಶದ ಸಂಬಂಧ ತಳಮಟ್ಟಕ್ಕೆ ತಲುಪಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಮ್ಮ ಕಡೆಯಿಂದ ಭಾರತದೊಂದಿಗಿನ ಸಂಬಂಧವನ್ನು ಹಾಳುಮಾಡುವ ಯಾವುದೇ ಪ್ರಯತ್ನ ನನಗೆ ತಿಳಿದಿಲ್ಲ; ಆದರೆ ಬಾಂಗ್ಲಾದೇಶ ಮತ್ತು ಭಾರತದ ಸಂಬಂಧ ಎರಡು ದೇಶಗಳಿಗಾಗಿ ಮಹತ್ವದ್ದಾಗಿದೆ ಮತ್ತು ಅದನ್ನು ಸರಿಪಡಿಸುವಲ್ಲಿ ಎರಡು ಕಡೆಯಿಂದ ಮುಂದೆ ನಡೆಯಬೇಕು. ಭಾರತದ ಜೊತೆಗೆ ಸಂಬಂಧ ಹದಗೆಡುವಂತಹ ಯಾವುದೇ ಕ್ರಮ ನಾವು ಕೈಗೊಳ್ಳಲಿಲ್ಲ. ದೆಹಲಿಯಲ್ಲಿರುವ ನನ್ನ ಸಹವರ್ತಿಗಳನ್ನು (ವಿದೇಶಾಂಗ ಸಚಿವರನ್ನು) ಕೇಳಿ ನೋಡಿ, ನಾವು ಯಾವುದಾದರೂ ಕಠಿಣ ಕ್ರಮ ಕೈಗೊಂಡಿದ್ದೇವೆಯೇ? ಸಂಬಂಧಗಳು ಹದಗೆಡಲು ನಾವೇನು ಮಾಡಿದ್ದೇವೆ?” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಶೇಖ್ ಹಸೀನಾ ಅವರು ಭಾರತದಲ್ಲಿದ್ದಾಗ ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು, ಆದರೆ ಹಾಗಾಗಲಿಲ್ಲ ಎಂದು ಹುಸೇನ್ ಬೇಸರ ವ್ಯಕ್ತಪಡಿಸಿದರು.

ಪಾಕಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕಿದೆ !

ಇಸ್ಲಾಮಾಬಾದ್ ಮತ್ತು ಢಾಕಾ ನಡುವಿನ ಸಂಬಂಧದ ಬಗ್ಗೆ ಹುಸೇನ್ ಮಾತನಾಡುತ್ತಾ, “ಶೇಖ್ ಹಸೀನಾ ಅವರ ಆಡಳಿತಾವಧಿಯಲ್ಲಿ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಉದ್ದೇಶಪೂರ್ವಕವಾಗಿಯೇ ಕೆಡಿಸಲಾಗಿತ್ತು. ಪಾಕಿಸ್ತಾನದೊಂದಿಗೆ ನಮಗೆ ಕೆಲವು ಪ್ರಶ್ನೆಗಳಿದ್ದು, ಆ ಬಗ್ಗೆ ಚರ್ಚೆ ನಡೆಯುತ್ತಿದೆ. ಇತರ ದೇಶಗಳಂತೆ ನಾವು ಪಾಕಿಸ್ತಾನದೊಂದಿಗೂ ಸಾಮಾನ್ಯ ಸಂಬಂಧವನ್ನು ಹೊಂದಲು ಬಯಸುತ್ತೇವೆ,” ಎಂದು ಹೇಳಿದರು. ಯಾವುದೇ ದೇಶದ ಜೊತೆಗೆ ಒಳ್ಳೆಯ ಸಂಬಂಧ ಹೊಂದುವುದು ತಪ್ಪೇ? ಎಂದು ಅವರು ಪ್ರಶ್ನಿಸಿದರು. ನೆರೆಯ ದೇಶ ಎಂದು ಪಾಕಿಸ್ತಾನದ ಜೊತೆಗೆ ಸಾಮಾನ್ಯ ಸಂಬಂಧ ಹೊಂದಬೇಕಿದೆ. ಇತರ ದೇಶಗಳಂತೆ ನಾವು ಕೂಡ ಎಲ್ಲಾ ದೇಶದ ಜೊತೆಗೆ ಒಳ್ಳೆಯ ಸಂಬಂಧ  ಬಯಸುತ್ತೇವೆ ಎಂದು ಅವರು ಹೇಳಿದರು.