ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ನೀಡಿದ ಹೇಳಿಕೆಗಳು ‘ದ್ವೇಷಪೂರಿತ ಭಾಷಣ’! – ಮದ್ರಾಸ್ ಉಚ್ಚ ನ್ಯಾಯಾಲಯ

ಚೆನ್ನೈ (ತಮಿಳುನಾಡು) – ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ನೀಡಿರುವ ಹೇಳಿಕೆಗಳು ದ್ವೇಷಪೂರಿತ ಭಾಷಣದ (ಹೇಟ್ ಸ್ಪೀಚ್) ವ್ಯಾಪ್ತಿಗೆ ಬರುತ್ತವೆ ಎಂದು ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠವು ಹೇಳಿದೆ.

ಉಚ್ಚ ನ್ಯಾಯಾಲಯವು ಹೇಳಿರುವುದೇನೆಂದರೆ, ದುಃಖದ ವಿಷಯವೆಂದರೆ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಲಿಲ್ಲ, ಬದಲಿಗೆ ಅದಕ್ಕೆ ಪ್ರತಿಕ್ರಿಯಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಇಂದಿನ ಪರಿಸ್ಥಿತಿಯಲ್ಲಿ ದ್ವೇಷಪೂರಿತ ಭಾಷಣ ಮಾಡುವವರು ಪಾರಾಗುತ್ತಿದ್ದಾರೆ ಮತ್ತು ಪ್ರಶ್ನೆ ಕೇಳುವವರು ಕಾನೂನನ್ನು ಎದುರಿಸಬೇಕಾಗುತ್ತಿದೆ. ಸನಾತನವನ್ನು ಕೊನೆಗಾಣಿಸುವುದು ಎಂಬ ಪದಗಳ ಅರ್ಥವು ಕೇವಲ ವಿರೋಧವಲ್ಲ, ಬದಲಿಗೆ ಅದನ್ನು ನಂಬುವವರ ಅಸ್ತಿತ್ವವನ್ನೇ ಪ್ರಶ್ನಿಸುವುದಾಗಿದೆ, ಇದು ದ್ವೇಷಪೂರಿತ ಭಾಷಣದ ವರ್ಗಕ್ಕೆ ಸೇರುತ್ತದೆ. ಸ್ಟಾಲಿನ್ ಅವರ ಈ ಹೇಳಿಕೆಯು ನರಮೇಧ ಅಥವಾ ಸಾಂಸ್ಕೃತಿಕ ನರಮೇಧದ ಸಂಕೇತವನ್ನು ನೀಡುತ್ತದೆ. ತಮಿಳು ಪದ ‘ಸನಾತನ ಓಜಿಪ್ಪು’ ಎಂಬ ಪದದ ಅರ್ಥವು ಕೇವಲ ವಿರೋಧವಲ್ಲ, ಬದಲಿಗೆ ಸಂಪೂರ್ಣವಾಗಿ ನಾಶಮಾಡುವುದು ಎಂದಾಗಿದೆ.

ಭಾಜಪ ನಾಯಕನ ವಿರುದ್ಧದ ಪ್ರಕರಣ ರದ್ದು

೨೦೨೩ ರಲ್ಲಿ ಉದಯನಿಧಿ ಅವರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಗೆ ಹೋಲಿಸಿ, ಅದನ್ನು ನಾಶಪಡಿಸಬೇಕೆಂದು ಹೇಳಿದ್ದರು. ಭಾಜಪ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಸ್ಟಾಲಿನ್ ಅವರ ಭಾಷಣದ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದರು. ಮಾಳವೀಯ ಅವರು, ಈ ಹೇಳಿಕೆಯು ದೇಶದ ಶೇ. ೮೦% ರಷ್ಟು ಸನಾತನ ಧರ್ಮವನ್ನು ನಂಬುವವರ ವಿರುದ್ಧವಾಗಿದೆಯೇ? ಎಂದು ಪ್ರಶ್ನಿಸಿದ್ದರು. ಈ ಕಾರಣಕ್ಕಾಗಿ ಸ್ಟಾಲಿನ್ ಅವರ ಡಿಎಂಕೆ ಪಕ್ಷದ ಓರ್ವ ನಾಯಕನು ಮಾಳವೀಯ ಅವರ ವಿರುದ್ಧ ದೂರು ನೀಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಮಾಳವೀಯ ಅವರು ಸ್ಟಾಲಿನ್ ಅವರ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರ ವಿರುದ್ಧ ಮಾಳವೀಯ ಅವರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈಗ ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠವು ಈ ಪ್ರಕರಣವನ್ನು ರದ್ದುಗೊಳಿಸಿದೆ. ಮಾಳವೀಯ ಅವರು ಸ್ಟಾಲಿನ್ ಅವರ ಹೇಳಿಕೆಗೆ ಕೇವಲ ಪ್ರತಿಕ್ರಿಯೆ ನೀಡಿದ್ದರು ಎಂದು ನ್ಯಾಯಾಲಯ ಹೇಳಿದೆ. ಇಂತಹ ಪ್ರತಿಕ್ರಿಯೆಯ ಮೇಲೆ ಮೊಕದ್ದಮೆ ನಡೆಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಉದಯನಿಧಿ ಅವರಿಗೆ ಸರ್ವೋಚ್ಚ ನ್ಯಾಯಾಲಯ ಕೂಡ ಛೀಮಾರಿ ಹಾಕಿತ್ತು!

ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷ ಮಾರ್ಚ್ ೪ ರಂದು ಉದಯನಿಧಿ ಸ್ಟಾಲಿನ್ ಅವರಿಗೆ ಛೀಮಾರಿ ಹಾಕಿತ್ತು. ಉದಯನಿಧಿ ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು. ಉದಯನಿಧಿ ಅವರು ಸಾಮಾನ್ಯ ವ್ಯಕ್ತಿಯಲ್ಲ, ಅವರು ತಮ್ಮ ಹೇಳಿಕೆಯ ಪರಿಣಾಮಗಳ ಬಗ್ಗೆ ಯೋಚಿಸಬೇಕಾಗಿತ್ತು ಎಂದು ನ್ಯಾಯಾಲಯ ಕಠೋರವಾಗಿ ಹೇಳಿತ್ತು.

ಸಂಪಾದಕೀಯ ನಿಲುವು

ಈ ಅಪರಾಧಕ್ಕಾಗಿ ನ್ಯಾಯಾಲಯವು ಉದಯನಿಧಿ ಅವರಿಗೆ ಜೀವಾವಧಿ ಶಿಕ್ಷೆಯನ್ನೇ ವಿಧಿಸಬೇಕೆಂದು ಹಿಂದೂಗಳಿಗೆ ಅನಿಸುತ್ತಿದೆ!