ಕೆನಡಾ: ರಾಜನ ಮೇಲಿನ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಲು ಸಿಖ್ ವಕೀಲರ ನಿರಾಕರಣೆ

ಈ ರೀತಿಯ ಪ್ರಮಾಣ ವಚನ ಮಾಡುವಂತೆ ಹೇಳುವುದು ತಪ್ಪು ಎಂದು ಒಪ್ಪಿಕೊಂಡ ನ್ಯಾಯಾಲಯ

ಒಟ್ಟಾವಾ (ಕೆನಡಾ) – ಕೆನಡಾದ ಆಲ್ಬರ್ಟಾ ಪ್ರಾಂತ್ಯದಲ್ಲಿನ ಸರ್ವೋಚ್ಚ ನ್ಯಾಯಾಲಯವು ಐತಿಹಾಸಿಕ ತೀರ್ಪನ್ನು ನೀಡುವ ಮೂಲಕ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಾಂವಿಧಾನಿಕ ಸಂಪ್ರದಾಯಗಳಿಗಿಂತ ಹೆಚ್ಚಿನ ಆದ್ಯತೆ ನೀಡಿದೆ. ಆಲ್ಬರ್ಟಾ ಕೋರ್ಟ್ ಆಫ್ ಅಪೀಲ್, ತೀರ್ಪಿನಲ್ಲಿ, ಹೊಸದಾಗಿ ವಕೀಲ ವೃತ್ತಿಯನ್ನು ಪ್ರವೇಶಿಸುವ ವಕೀಲರನ್ನು ಕಿಂಗ್ ಚಾರ್ಲ್ಸ್ ಅವರ ಮೇಲಿನ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಲು ಒತ್ತಾಯಿಸುವುದು, ಅವರ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ. ಈ ತೀರ್ಪು ಎಡ್ಮಂಟನ್‌ನಲ್ಲಿನ ಸಿಖ್ ವಕೀಲರಾದ ಪ್ರಭಜೋತ್ ಸಿಂಗ್ ವಾಯರಿಂಗ್ ಅವರ ದೊಡ್ಡ ಕಾನೂನು ವಿಜಯವೆಂದು ಪರಿಗಣಿಸಲಾಗಿದೆ. ಅವರು ಧಾರ್ಮಿಕ ಕಾರಣಗಳಿಗಾಗಿ ರಾಜನ ಮೇಲಿನ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದರಿಂದ, ಅವರ ಬಾರ್ ಅಸೋಸಿಯೇಷನ್ ಪ್ರವೇಶವನ್ನು ತಡೆಯಲಾಗಿತ್ತು.

ಡಿಸೆಂಬರ್ ೧೬ ರಂದು ನೀಡಿದ ಈ ಸರ್ವಾನುಮತದ ತೀರ್ಪಿನಲ್ಲಿ, ಇಂತಹ ಕಡ್ಡಾಯ ಪ್ರಮಾಣ ವಚನವು ‘ಕೆನಡಿಯನ್ ಚಾರ್ಟರ್ ಆಫ್ ರೈಟ್ಸ್ ಅಂಡ್ ಫ್ರೀಡಮ್ಸ್’ ನಲ್ಲಿ ನೀಡಲಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯವು ಒಪ್ಪಿಕೊಂಡಿದೆ.