ಇಂಡಿ ಮೈತ್ರಿಕೂಟದ 107 ಸಂಸದರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಪತ್ರ!

  • ನ್ಯಾಯಮೂರ್ತಿ ಸ್ವಾಮಿನಾಥನ್ ವಿರುದ್ಧ ಮಹಾಭಿಯೋಗಕ್ಕೆ ಆಗ್ರಹಿಸಿದ ಪ್ರಕರಣ

  • ಹಿಂದೂತ್ವನಿಷ್ಠ ನ್ಯಾಯವಾದಿ ವಿನೀತ ಜಿಂದಾಲ್ ಅವರಿಂದ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮನವಿ

ನವ ದೆಹಲಿ – ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿರುದ್ಧ ಇಂಡಿ (I.N.D.I.A) ಮೈತ್ರಿಕೂಟದ 107 ಸಂಸದರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಲಿಖಿತ ಮನವಿ ಸಲ್ಲಿಸಿ, ಅವರನ್ನು ಹುದ್ದೆಯಿಂದ ತೆಗೆದುಹಾಕಲು ಮಹಾಭಿಯೋಗ ಪ್ರಸ್ತಾವನೆಯನ್ನು ತರುವಂತೆ ಒತ್ತಾಯಿಸಿದ್ದಾರೆ. ಇದನ್ನು ಗಮನಿಸಿದ ಹಿರಿಯ ಹಿಂದೂತ್ವನಿಷ್ಠ ನ್ಯಾಯವಾದಿ ವಿನೀತ ಜಿಂದಾಲ್ ಅವರು, ಮದ್ರಾಸ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಈ ಬೇಡಿಕೆ ಇಟ್ಟಿರುವ ಸಂಸದರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಕುರಿತು ನ್ಯಾಯವಾದಿ ಜಿಂದಾಲ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.

ಹಿಂದುತ್ವನಿಷ್ಠ ನ್ಯಾಯವಾದಿ ವಿನೀತ ಜಿಂದಾಲ್

ಈ ವಿಡಿಯೋದಲ್ಲಿ ಅವರು, “ಯಾವುದೇ ನ್ಯಾಯಾಧೀಶರು ನೀಡಿದ ತೀರ್ಪು ತಪ್ಪೆಂದು ಕಂಡುಬಂದಲ್ಲಿ, ಅದರ ವಿರುದ್ಧ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಆದರೆ ಈ 107 ಮಂದಿ ನೇರವಾಗಿ ನ್ಯಾಯಮೂರ್ತಿ ಸ್ವಾಮಿನಾಥನ್ ವಿರುದ್ಧ ಮಹಾಭಿಯೋಗಕ್ಕೆ ಆಗ್ರಹಿಸಿ ಲೋಕಸಭೆಯ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಇದು ಭಾರತೀಯ ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಾಧೀಶರ ಮೇಲೆ ಒತ್ತಡ ಹೇರುವ ಹಾಗೂ ಹಿಂದೂಗಳಿಗೆ ಸಿಗುವ ಸಾಂವಿಧಾನಿಕ ಹಕ್ಕುಗಳ ಮೇಲೆ ಪ್ರಹಾರ ಮಾಡುವ ಪಿತೂರಿಯಾಗಿದೆ,” ಎಂದು ಹೇಳಿದರು.

ಏನಿದು ಪ್ರಕರಣ?

ತಮಿಳುನಾಡಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಧಿಕಾರಿಗಳಿಗೆ ಮಧುರೈ ಜಿಲ್ಲೆಯ ಪವಿತ್ರ ‘ತಿರುಪರಂಕುಂದ್ರಂ’ ಬೆಟ್ಟದ ಮೇಲಿರುವ ದೀಪಸ್ತಂಭದಲ್ಲಿ ದೀಪ ಹಚ್ಚಲು ವ್ಯವಸ್ಥೆ ಮಾಡುವಂತೆ ನ್ಯಾಯಮೂರ್ತಿ ಸ್ವಾಮಿನಾಥನ್ ಸೂಚನೆ ನೀಡಿದ್ದರು. ಈ ಸ್ಥಳದ ಕುರಿತು ದೇವಸ್ಥಾನ ಮತ್ತು ಪಕ್ಕದ ದರ್ಗಾದ ನಡುವೆ ವಿವಾದವಿದೆ. ಡಿಸೆಂಬರ್ 1, 2025 ರಂದು ನೀಡಿದ ಆದೇಶದಲ್ಲಿ, ದೀಪ ಹಚ್ಚುವ ಜವಾಬ್ದಾರಿ ದೇವಸ್ಥಾನದ್ದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು. ದೀಪ ಬೆಳಗುವುದರಿಂದ ದರ್ಗಾ ಅಥವಾ ಮುಸ್ಲಿಂ ಸಮುದಾಯದ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು. ರಾಜ್ಯ ಸರಕಾರವು ಈ ಆದೇಶವನ್ನು ನಿರ್ಲಕ್ಷಿಸಿದಾಗ, ಡಿಸೆಂಬರ್ 3 ರಂದು ನ್ಯಾಯಾಲಯವು ಮತ್ತೊಂದು ಆದೇಶ ಹೊರಡಿಸಿ ಭಕ್ತರೇ ಸ್ವತಃ ದೀಪ ಹಚ್ಚಲು ಅನುಮತಿ ನೀಡಿತ್ತು.