ಹಠಾತ್ ಸಾವುಗಳಿಗೂ ಕೊರೊನಾ ಲಸಿಕೆಗೂ ಯಾವುದೇ ಸಂಬಂಧವಿಲ್ಲ! – ‘ಏಮ್ಸ್’ ಸ್ಪಷ್ಟನೆ : AIIMS Study

(ಏಮ್ಸ್ – ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ – ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ)

ನವದೆಹಲಿ – ಕಳೆದ ಕೆಲವು ವರ್ಷಗಳಲ್ಲಿ ಯುವಕರು ಹಠಾತ್ತಾಗಿ ಸಾವನ್ನಪ್ಪುತ್ತಿರುವ ಘಟನೆಗಳು ಗಣನೀಯವಾಗಿ ಹೆಚ್ಚುತ್ತಿರುವುದು ಕಂಡುಬಂದಿದೆ. ಕೆಲವರು ಇದನ್ನು ಕೊರೊನಾ ಲಸಿಕೆಗೆ ಜೋಡಿಸುತ್ತಿದ್ದರು; ಆದರೆ ‘ಏಮ್ಸ್’ ನಡೆಸಿದ ವಿವರವಾದ ಅಧ್ಯಯನವು ಈ ವಿಷಯದ ಮೇಲಿನ ಎಲ್ಲಾ ಚರ್ಚೆಗಳಿಗೆ ಪೂರ್ಣವಿರಾಮ ಹಾಕಿದೆ. ಯುವಕರಲ್ಲಿನ ಹಠಾತ್ ಸಾವು ಮತ್ತು ಕೊರೊನಾ ಲಸಿಕೆಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ‘ಏಮ್ಸ್’ ಸ್ಪಷ್ಟಪಡಿಸಿದೆ. ಸುಮಾರು ಒಂದು ವರ್ಷ ಕಾಲ ನಡೆದ ಅಧ್ಯಯನದಿಂದ ಇದು ಸ್ಪಷ್ಟವಾಗಿದೆ ಎಂದು ಏಮ್ಸ್ ಹೇಳಿದೆ.

ಏಮ್ಸ್‌ನ ಈ ವರದಿಯು ‘ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್’ನಲ್ಲಿ ಪ್ರಕಟವಾಗಿದೆ. ಹಠಾತ್ ಸಾವುಗಳಿಗೆ ಲಸಿಕೆ ಕಾರಣವಲ್ಲ, ಬದಲಿಗೆ ಇತರ ಆರೋಗ್ಯ ಸಂಬಂಧಿತ ಸಮಸ್ಯೆಗಳೇ ಕಾರಣ ಎಂದು ಅದರಲ್ಲಿ ತಿಳಿಸಲಾಗಿದೆ.

. ‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್’ ಮತ್ತು ‘ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್’ ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳು ನಡೆಸಿದ ತಪಾಸಣೆಯಲ್ಲೂ ಭಾರತದ ಕೊರೊನಾ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದು ಸ್ಪಷ್ಟವಾಗಿದೆ.

. ‘ಏಮ್ಸ್’ ಸಂಶೋಧನೆಯಲ್ಲಿ ೧೮ ರಿಂದ ೪೫ ವರ್ಷ ವಯಸ್ಸಿನ ಯುವಕರನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ. ಕೊರೊನಾ ಲಸಿಕೆ ಪಡೆದವರು ಮತ್ತು ಲಸಿಕೆ ಪಡೆಯದವರಲ್ಲಿ ಹಠಾತ್ ಸಾವಿನ ಅಪಾಯ ಅಥವಾ ಸಾವು ಸಂಭವಿಸುವ ರೀತಿ ಒಂದೇ ಆಗಿತ್ತು ಎಂಬ ಪ್ರಮುಖ ಅಂಶ ಈ ತಪಾಸಣೆಯಲ್ಲಿ ಕಂಡುಬಂದಿದೆ. ಆದ್ದರಿಂದ, ಯುವಕರ ಈ ಆಕಸ್ಮಿಕ ಸಾವುಗಳಿಗೂ ಲಸಿಕೆಗೂ ನೇರ ಸಂಬಂಧವಿಲ್ಲ ಎಂಬುದು ಸಾಬೀತಾಗಿದೆ.

. ಅಧ್ಯಯನದ ಪ್ರಕಾರ, ಯುವಕರಲ್ಲಿ ಹಠಾತ್ ಸಾವಿಗೆ ಅತ್ಯಂತ ದೊಡ್ಡ ಮತ್ತು ಪ್ರಮುಖ ಕಾರಣ ‘ಕೊರೊನರಿ ಆರ್ಟರಿ’ (Coronary Artery) ಕಾಯಿಲೆ ಎಂದು ಕಂಡುಬಂದಿದೆ. ಈ ಕಾಯಿಲೆಯಿಂದಾಗಿ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಸುವ ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗಿ ಅವು ಕಿರಿದಾಗುತ್ತವೆ ಅಥವಾ ಗಟ್ಟಿಯಾಗುತ್ತವೆ. ಇದರಿಂದ ಹೃದಯಕ್ಕೆ ಪೂರೈಕೆಯಾಗುವ ಆಮ್ಲಜನಕಯುಕ್ತ ರಕ್ತದ ಪ್ರಮಾಣ ಕಡಿಮೆಯಾಗಿ ಹೃದಯಾಘಾತ ಸಂಭವಿಸುತ್ತದೆ.

. ಈ ಅಧ್ಯಯನವನ್ನು ಮೇ ೨೦೨೩ ರಿಂದ ಏಪ್ರಿಲ್ ೨೦೨೪ ರ ಅವಧಿಯಲ್ಲಿ ನಡೆಸಲಾಗಿದ್ದು, ಹಠಾತ್ತಾಗಿ ಸಾವನ್ನಪ್ಪಿದ ಒಟ್ಟು ೧೮೦ ಪ್ರಕರಣಗಳನ್ನು ಇದರಲ್ಲಿ ಪರಿಶೀಲಿಸಲಾಗಿದೆ.

. ಹಠಾತ್ ಸಾವುಗಳಿಗೆ ‘ಕೊರೊನರಿ ಆರ್ಟರಿ’ ಕಾಯಿಲೆಯೇ ಮುಖ್ಯ ಕಾರಣವಾಗಿರುವುದರಿಂದ, ಯುವಕರು ತಮ್ಮ ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ, ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.