ಭಾರತದಲ್ಲಿ ಇರುವುದು ಶೇಖ್ ಹಸೀನಾ ಅವರ ವೈಯಕ್ತಿಕ ನಿರ್ಧಾರ! – S. Jaishankar

ಬಾಂಗ್ಲಾದೇಶವು ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಮರಳಿ ಕಳುಹಿಸುವ ಬೇಡಿಕೆಯ ಕುರಿತು ಭಾರತದ ನಿಲುವು

ನವದೆಹಲಿ – ಬಾಂಗ್ಲಾದೇಶದ ಸರಕಾರವು ದೇಶದ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರನ್ನು ಭಾರತದಿಂದ ಢಾಕಾಗೆ ಮರಳಿ ಕಳುಹಿಸಬೇಕು ಎಂದು ಬೇಡಿಕೆ ಸಲ್ಲಿಸಿದೆ. ಈ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು, “ಭಾರತದಲ್ಲಿ ನೆಲೆಸುವುದು ಶೇಖ್ ಹಸೀನಾ ಅವರ ವೈಯಕ್ತಿಕ ನಿರ್ಧಾರವಾಗಿದೆ ಮತ್ತು ಈ ನಿರ್ಧಾರದ ಹಿಂದಿನ ಹಿನ್ನೆಲೆಯು ಬಾಂಗ್ಲಾದೇಶದ ಪರಿಸ್ಥಿತಿಯಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಶೇಖ್ ಹಸೀನಾ ಅವರಿಗೆ ಕಳೆದ ತಿಂಗಳು ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಎಸಗಿದ ಆರೋಪದ ಮೇಲೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಬಾಂಗ್ಲಾದೇಶದ ಈ ಬೇಡಿಕೆಗೆ ಭಾರತವು ಇದುವರೆಗೆ ಯಾವುದೇ ಪ್ರತಿಕ್ರಿಯಿಸಿಲ್ಲ.

೧. ಹಿಂದುಸ್ತಾನ್ ಟೈಮ್ಸ್ ನೇತೃತ್ವ ಸಮ್ಮೇಳನದಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಶೇಖ್ ಹಸೀನಾ ಅವರು ಭಾರತದಲ್ಲಿ ನೆಲೆಸುವ ಕಾಲಾವಧಿಯ ಕುರಿತು ಪ್ರಶ್ನಿಸಿದಾಗ, ಅವರು ಮಾತನಾಡಿ, ಶೇಖ್ ಹಸೀನಾ ಅವರು ವಿಶಿಷ್ಟ ಪರಿಸ್ಥಿತಿಯಲ್ಲಿ ಭಾರತಕ್ಕೆ ಬಂದಿದ್ದಾರೆ ಮತ್ತು ಭಾರತದಲ್ಲಿಯೇ ಉಳಿಯುವ ಅಥವಾ ಇಲ್ಲಿಂದ ಹೋಗುವ ನಿರ್ಧಾರವನ್ನು ಅವರೇ ತೆಗೆದುಕೊಳ್ಳಬೇಕಾಗುತ್ತದೆ. ಭಾರತವು ಬಾಂಗ್ಲಾದೇಶದ ಹಿತೈಷಿಯಾಗಿದೆಯೆಂದು ಹೇಳಿದರು.

೨. ವಿದೇಶಾಂಗ ಸಚಿವರು ತಮ್ಮ ಮಾತು ಮುಂದುವರಿಸಿ, ಭಾರತವು ಬಾಂಗ್ಲಾದೇಶದಲ್ಲಿ ಸ್ಥಿರತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಣೆಯನ್ನು ನಿರೀಕ್ಷಿಸುತ್ತದೆ. ಚುನಾವಣೆಗಳಿಗೆ ಸಂಬಂಧಿಸಿದ ವಿಷಯವಿದ್ದರೆ, ಮೊದಲನೆಯದಾಗಿ ಅಲ್ಲಿ ನಿಷ್ಪಕ್ಷಪಾತ ಚುನಾವಣೆಗಳು ನಡೆಯುವುದು ಅತ್ಯಗತ್ಯವಾಗಿವೆ. ಬಾಂಗ್ಲಾದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯಿಂದ ಹೊರಹೊಮ್ಮುವ ನಾಯಕತ್ವವು ಭಾರತದೊಂದಿಗಿನ ಸಂಬಂಧಗಳ ಕುರಿತು ಸಮತೋಲಿತ ಮತ್ತು ಪ್ರಬುದ್ಧ ದೃಷ್ಟಿಕೋನವನ್ನು ಹೊಂದಿರುತ್ತದೆ, ಎಂದು ತಿಳಿಸಿದರು.

ಭಾರತವು ಎಲ್ಲ ಪ್ರಮುಖ ರಾಷ್ಟ್ರಗಳೊಂದಿಗೆ ಸಂಬಂಧ ದೃಢಪಡಿಸುವುದು ಅಗತ್ಯ! ವಿದೇಶಾಂಗ ಸಚಿವರು

ರಷ್ಯಾದ ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯಿಂದ ಭಾರತ-ಅಮೆರಿಕ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದೇ? ಎಂಬ ಪ್ರಶ್ನೆಗೆ ವಿದೇಶಾಂಗ ಸಚಿವರು ಮಾತನಾಡಿ, ‘ಭಾರತವು ಅನೇಕ ಸ್ತರಗಳಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳುತ್ತದೆ ಮತ್ತು ಆಯ್ಕೆಗಳನ್ನು ಆರಿಸುವ ಸ್ವಾತಂತ್ರ್ಯವು ಮುಖ್ಯವಾಗಿದೆ. ಪ್ರಸ್ತುತ, ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದವು ಪ್ರಮುಖವಾಗಿದೆ. ಪುಟಿನ್ ಅವರ ಭೇಟಿಯು ಅಮೆರಿಕದೊಂದಿಗೆ ನಡೆಯುವ ವ್ಯಾಪಾರ ಮಾತುಕತೆಗಳಿಗೆ ಅಡ್ಡಿಯಾಗುತ್ತದೆ ಎಂಬ ಊಹಾಪೋಹವನ್ನು ಅವರು ತಳ್ಳಿಹಾಕಿದರು. ಭಾರತದಂತಹ ಉದಯೋನ್ಮುಖ ದೇಶವು ಎಲ್ಲಾ ಪ್ರಮುಖ ರಾಷ್ಟ್ರಗಳೊಂದಿಗೆ ದೃಢವಾದ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.