ಕುಂಭ ಸಂಪ್ರದಾಯದ ಬಗ್ಗೆ ಮಾಹಿತಿ ಇಲ್ಲದ ನಟ ಸಯಾಜಿ ಶಿಂದೆ ಅವರು ಕುಂಭಮೇಳ ಮತ್ತು ಸಂತ-ಮಹಾತ್ಮರ ಬಗ್ಗೆ ಮಾತನಾಡಬಾರದು!

ಮಹಂತ್ ಸುಧೀರ್‌ದಾಸ್ ಮಹಾರಾಜ್ ಅವರಿಂದ ಹೇಳಿಕೆ!

ನಾಸಿಕ್ – ಕುಂಭಮೇಳ ಎಂದರೇನು ? ಎಂಬುದು ನಟ ಸಯಾಜಿ ಶಿಂದೆ ಅವರಿಗೆ ತಿಳಿದಿಲ್ಲ. ನಾಸಿಕ್‌ನಲ್ಲಿ 400 ಆಲದ ಮರಗಳನ್ನು ಕಡಿಯುತ್ತಿಲ್ಲ. ಶಿಂದೆ ಅವರನ್ನು ದಾರಿ ತಪ್ಪಿಸಿ ಅಲ್ಲಿಗೆ ಕರೆತರಲಾಗಿದೆ ಎಂದು ತೋರುತ್ತಿದೆ. ಸಯಾಜಿ ಶಿಂದೆ ಅವರು ಸಂತ-ಮಹಾತ್ಮರು ಮತ್ತು ಕುಂಭಮೇಳದ ಬಗ್ಗೆ ವೈಯಕ್ತಿಕ ಟೀಕೆ ಮಾಡಬಾರದು. ಪ್ರತಿಭಟನೆ ಮಾಡುವುದು ಅವರ ಹಕ್ಕಾಗಿದೆ; ಆದರೆ ಕುಂಭಮೇಳ ಮತ್ತು ಸಂತ-ಮಹಾತ್ಮರ ಬಗ್ಗೆ ಅವರು ಮಾತನಾಡಬಾರದು. ಅವರಿಗೆ ಕುಂಭ ಸಂಪ್ರದಾಯದ ಬಗ್ಗೆ ಮಾಹಿತಿ ಇಲ್ಲ ಎಂದು ಅಖಿಲ ಭಾರತ ಪಂಚರಾಮಾನಂದಿ ನಿರ್ವಾಣಿ ಅಖಾಡದ ಮಹಂತ್ ಸುಧೀರದಾಸ ಮಹಾರಾಜ್ ಹೇಳಿದ್ದಾರೆ. ಇಲ್ಲಿ ನಡೆಯಲಿರುವ ಸಿಂಹಸ್ಥ ಕುಂಭಮೇಳಕ್ಕಾಗಿ ಪ್ರಸ್ತಾಪಿಸಲಾದ ಮರಗಳ ಕಡಿತವನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯನ್ನು ನಟ ಸಯಾಜಿ ಶಿಂದೆ ಬೆಂಬಲಿಸಿದ್ದರು. ಶಿಂದೆ ಅವರನ್ನು ಟೀಕಿಸುವ ಸಂದರ್ಭದಲ್ಲಿ ಮಹಂತ್ ಸುಧೀರ್‌ದಾಸ್ ಮಹಾರಾಜ್ ಮಾತನಾಡುತ್ತಿದ್ದರು.

ಏನಿದು ಪ್ರಕರಣ?

ನಟ ಸಯಾಜಿ ಶಿಂದೆ ಅವರು, “ಕುಂಭಮೇಳವು ಸಾಧು-ಸಂತರದ್ದಾಗಿದೆ. ಒಳ್ಳೆಯ ಮನುಷ್ಯರೂ ಕೂಡ ಸಾಧುಗಳಿರುತ್ತಾರೆ. ನಾವು ಒಂದು ಕೋಣೆಯಲ್ಲಿ 10 ಜನರು ಇರಬಹುದಾದರೆ, ಈ ಜಾಗದಲ್ಲಿ ಇತರ ಸಾಧುಗಳು ಇರಲು ಸಾಧ್ಯವಿಲ್ಲವೇ? ಸಾಧುಗಳು ಬಂದು ಹೋದರೆ ಏನೂ ವ್ಯತ್ಯಾಸವಾಗುವುದಿಲ್ಲ. ಮರಗಳು ಹೋದರೆ ನಾಸಿಕ್ ನಿವಾಸಿಗಳಿಗೆ ಹಾನಿಯಾಗುತ್ತದೆ. ಇಲ್ಲಿ ಒಂದು ಮರ ಕೂಡ ಕಡಿಯಬಾರದು. ಎಲ್ಲಾ ಮರಗಳನ್ನು ಉಳಿಸಬೇಕು. ಮರಗಳು ನಮ್ಮ ತಂದೆ-ತಾಯಿ ಇದ್ದಂತೆ. ಈ ಸ್ಥಳದಲ್ಲಿ ಮರ ಕಡಿಯಲು ನಿಖರವಾದ ಕಾರಣವೇನು? ಇದಕ್ಕೆ ಕುಂಭಮೇಳ ಸಚಿವ ಗಿರೀಶ ಮಹಾಜನ್ ಅವರು ಉತ್ತರ ನೀಡಬೇಕು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.” ಎಂದು ಹೇಳಿದರು.

ಮೇಲಿನ ಪ್ರಕರಣದ ಬಗ್ಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು, “ಸಾಧುಗ್ರಾಮದ ಯೋಜನೆಯನ್ನು ಸಾಧು-ಸಂತರಿಗಾಗಿ ಅಲ್ಲ, ಬದಲಾಗಿ ಬೇರೆ ಕಾರಣಗಳಿಗಾಗಿ ಮುಂದಕ್ಕೆ ತಳ್ಳಲಾಗುತ್ತಿದೆ. ತಪೋವನದಲ್ಲಿ ಮರಗಳನ್ನು ಕಡಿದರೆ ಅಮೃತ ಸ್ನಾನದ ಸಂತೋಷ ಉಳಿಯುವುದಿಲ್ಲ. ತಪೋವನದ ಅನೇಕ ಹಳೆಯ ಮರಗಳನ್ನು ಕಡಿದು ಅಲ್ಲಿ ಸಾಧುಗ್ರಾಮವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಅಂತಹ ಮಹಾತ್ಮರು ಯಾರು? ಅವರು ಕುಂಭಸ್ನಾನ ಮಾಡಲು ಹೋಗಿ ಮರಗಳನ್ನು ಕಡಿಯುವ ಪಾಪವನ್ನು ತಮ್ಮ ತಲೆ ಮೇಲೆ ಹೊತ್ತುಕೊಂಡು ಬರುತ್ತಾರೆ. ಆದ್ದರಿಂದ, ಮರಗಳನ್ನು ಕಡಿದು ಸಾಧುಗ್ರಾಮ ಬೇಡ. ಮರಗಳನ್ನು ಕಡಿಯುವುದು ಪಾಪವಾಗಿದೆ. ತಪೋವನದ ಅನೇಕ ವೃಕ್ಷಗಳ ಬಳಿ ಹಲವು ಸಾಧು-ಮಹಾತ್ಮರು ತಪಸ್ಸನ್ನು ಮಾಡಿರಬಹುದು,” ಎಂದು ಹೇಳಿದರು.