‘ಆಧಾರ್ ಕಾರ್ಡ್’ ಇದೆ ಎಂಬ ಕಾರಣಕ್ಕೆ ನುಸುಳುಕೋರರಿಗೆ ಮತದಾನದ ಹಕ್ಕು ನೀಡಬೇಕೇ? CJI Suryakant Statement

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರಿಂದ ವಿಶೇಷ ಆಳವಾದ ಪರಿಶೀಲನಾ ಪ್ರಕ್ರಿಯೆ ಕುರಿತು ಪ್ರಶ್ನೆ

ನವದೆಹಲಿ – ಕೆಲವು ಜನರು ಇತರ ದೇಶಗಳಿಂದ ಭಾರತಕ್ಕೆ ಬಂದು, ಇಲ್ಲಿ ಕೆಲಸ ಮಾಡಿ, ಇಲ್ಲಿಯೇ ವಾಸಿಸುತ್ತಾರೆ ಎಂದು ಭಾವಿಸೋಣ. ಕೆಲವರು ರಿಕ್ಷಾ ಚಾಲಕರಾಗಿ ಕೆಲಸ ಮಾಡಿದರೆ, ಇನ್ನು ಕೆಲವರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಒಂದು ವೇಳೆ ನೀವು ಅವರಿಗೆ ಆಧಾರ್ ಕಾರ್ಡ್ ನೀಡಿದರೆ, ಅದು ಅವರಿಗೆ ರಿಯಾಯತಿ ದರದಲ್ಲಿ ಧಾನ್ಯ ಅಥವಾ ಯಾವುದೇ ಇತರ ಪ್ರಯೋಜನವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದು ನಮ್ಮ ಸಾಂವಿಧಾನಿಕ ಮೌಲ್ಯ ವ್ಯವಸ್ಥೆಯ ಭಾಗವಾಗಿದೆ, ಇದು ನಮ್ಮ ಸಾಂವಿಧಾನಿಕ ನೈತಿಕತೆಯಾಗಿದೆ; ಆದರೆ ಈ ಸೌಲಭ್ಯ ಸಿಕ್ಕಿದೆ ಎಂಬ ಕಾರಣಕ್ಕೆ ಅವರಿಗೆ ಈಗ ಮತದಾನದ ಹಕ್ಕನ್ನೂ ನೀಡಬೇಕೇ? ಎಂಬ ಪ್ರಶ್ನೆಯನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಮತದಾರರ ಪಟ್ಟಿಗಳ ವಿಶೇಷ ಆಳವಾದ ಪರಿಶೀಲನಾ ಪ್ರಕ್ರಿಯೆಯ ಮೇಲಿನ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕೇಳಿದರು. ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳ ಪರ ವಾದ ಮಂಡಿಸುತ್ತಿದ್ದ ಹಿರಿಯ ನ್ಯಾಯವಾದಿ ಕಪಿಲ ಸಿಬಲ್ ಅವರು ಆಧಾರ್ ಕಾರ್ಡ್ ಹೊಂದಿದ್ದರೂ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿದ ವಿಷಯವನ್ನು ಪ್ರಸ್ತಾಪಿಸಿದಾಗ, ಮುಖ್ಯ ನ್ಯಾಯಮೂರ್ತಿಗಳು ಈ ಪ್ರಶ್ನೆಯನ್ನು ಕೇಳಿದರು.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು, ಆಧಾರ್ ಕಾರ್ಡ್ ಅನ್ನು ಕಾನೂನಿನ ಮೂಲಕ ರಚಿಸಲಾಗಿದೆ ಮತ್ತು ಅದು ಕಾನೂನುಬದ್ಧವಾಗಿದೆ. ಹಾಗಾಗಿ ಅದರ ಆಧಾರದ ಮೇಲೆ ಸೌಲಭ್ಯಗಳು ಅಥವಾ ರಿಯಾಯಿತಿಗಳು ಲಭಿಸುತ್ತವೆ. ಅಂತಿಮವಾಗಿ ಆಧಾರ್ ಕಾರ್ಡ್ ಅನ್ನು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಲಾಗಿದೆ. ಆದ್ದರಿಂದ, ಇದರ ಬಗ್ಗೆ ಯಾರೂ ವಿವಾದ ಮಾಡಬೇಕಾದ ಕಾರಣವಿಲ್ಲ ಎಂದು ಹೇಳಿದರು.

ಪ್ರಾಮಾಣಿಕ ಪ್ರಕರಣಗಳಲ್ಲಿನ ಲೋಪಗಳನ್ನು ಸರಿಪಡಿಸಲಾಗುವುದು!

ಬಿಹಾರದಲ್ಲಿ ನಡೆದ ವಿಶೇಷ ಆಳವಾದ ಪರಿಶೀಲನಾ ಪ್ರಕ್ರಿಯೆಯ ಉದಾಹರಣೆಯನ್ನು ಉಲ್ಲೇಖಿಸಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ಮಾತನಾಡಿ, ಈ ವಿಷಯದಲ್ಲಿ ಬಹಳ ಕಡಿಮೆ ಆಕ್ಷೇಪಣೆಗಳಿವೆ. ಒಂದು ವೇಳೆ ಯಾವುದೇ ವ್ಯಕ್ತಿ ನಿಜವಾದ ನಿವಾಸಿಯಾಗಿದ್ದು, ಭಾರತದ ನಾಗರಿಕರಾಗಿದ್ದರೂ ಸಹ, ಅವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದರೆ, ನಾವು ಅಂತಹ ಪ್ರಕರಣಗಳಿಗಾಗಿ ಆಸಕ್ತಿಯಿಂದ ಕಾಯುತ್ತಿದ್ದೇವೆ, ಇದರಿಂದ ನಾವು ಈ ಲೋಪದೋಷಗಳನ್ನು ಸರಿಪಡಿಸಬಹುದು ಎಂದು ಹೇಳಿದರು.

ವಿಶೇಷ ಆಳವಾದ ಪರಿಶೀಲನಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ!

ಚುನಾವಣಾ ಆಯೋಗಕ್ಕೆ ವಿಶೇಷ ಆಳವಾದ ಪರಿಶೀಲನೆ ನಡೆಸುವ ಅಧಿಕಾರವು ಸಾಂವಿಧಾನಿಕವಾಗಿ ಮತ್ತು ಶಾಸನಬದ್ಧವಾಗಿ ಲಭ್ಯವಿದೆ ಮತ್ತು ನ್ಯಾಯಾಲಯವು ಈ ಪ್ರಕ್ರಿಯೆಯನ್ನು ತಡೆಯುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ದೃಢವಾಗಿ ಹೇಳಿದರು. ಅದೇ ಸಮಯದಲ್ಲಿ, ಯಾವುದೇ ಅಕ್ರಮ ಕಂಡುಬಂದರೆ, ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಬಿಹಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಈ ಪ್ರಕ್ರಿಯೆಯನ್ನು ಪರಿಷ್ಕರಿಸಿದ ನಂತರ ಮತದಾರರ ಪಟ್ಟಿಯ ನವೀಕರಣದ ವಿರುದ್ಧ ಒಂದೇ ಒಂದು ಆಕ್ಷೇಪಣೆಯೂ ದಾಖಲಾಗಿಲ್ಲ. ಅಲ್ಲಿ ಕೋಟ್ಯಂತರ ಮತದಾರರ ಹೆಸರನ್ನು ಕೈಬಿಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ನಾವು ಪ್ರಕ್ರಿಯೆಯನ್ನು ಸುಗಮಗೊಳಿಸಲು ಕೆಲವು ನಿರ್ದೇಶನಗಳನ್ನು ನೀಡಿದೆವು. ಕೊನೆಗೆ ಏನಾಯಿತು? ಮತದಾರರ ಪಟ್ಟಿಯಿಂದ ಹೊರಗಿಡಲ್ಪಟ್ಟವರಲ್ಲಿ ಮರಣ ಹೊಂದಿದವರು ಅಥವಾ ಬೇರೆಡೆಗೆ ವಲಸೆ ಹೋದವರು ಕಂಡುಬಂದರು. ಯಾರೂ ಯಾವುದೇ ಆಕ್ಷೇಪಣೆ ಸಲ್ಲಿಸಲಿಲ್ಲ. ನಮಗೆ ಯಾವುದೇ ಪ್ರತಿಕೂಲ ಪರಿಣಾಮಗಳು ಕಂಡುಬರಲಿಲ್ಲ ಎಂದು ಹೇಳಿದರು.