ನಕ್ಸಲ್ ವಿರೋಧಿ ಕಾರ್ಯಾಚರಣೆ ನಿಲ್ಲಿಸುವಂತೆ 3 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ! – Stop Anti-Naxal Operations

  • ನಕ್ಸಲ್‌ವಾದಿ ಹಿಡಮಾ ಹತ್ಯೆಯ ನಂತರ ಛತ್ತೀಸ್‌ಗಢದಲ್ಲಿ ನಕ್ಸಲವಾದಿ ಸಂಘಟನೆಗಳಲ್ಲಿ ಭೀತಿ!

  • ಫೆಬ್ರವರಿ 15 ರವರೆಗೆ ಕದನ ವಿರಾಮಕ್ಕೆ ಬೇಡಿಕೆ

ರಾಯಪುರ (ಛತ್ತೀಸ್‌ಗಢ) – ಕುಖ್ಯಾತ ನಕ್ಸಲ್‌ವಾದಿ ಮಾಡವಿ ಹಿಡಮಾ ಹತ್ಯೆಯ ನಂತರ ಛತ್ತೀಸ್‌ಗಢದಲ್ಲಿ ನಕ್ಸಲ್ ಚಳುವಳಿಯ ಬೆನ್ನೆಲುಬು ಮುರಿದಿದೆ. ಭದ್ರತಾ ಪಡೆಗಳ ನಕ್ಸಲರ ವಿರುದ್ಧದ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಇದರಿಂದ ನಕ್ಸಲರು ಭಯಭೀತರಾಗಿ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ಈ 3 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಫೆಬ್ರವರಿ 15, 2026 ರವರೆಗೆ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ವಿನಂತಿಸಿದ್ದಾರೆ. ಈ ಕದನ ವಿರಾಮದ ಅವಧಿಯಲ್ಲಿ ಗುಂಡಿನ ದಾಳಿ ನಡೆಯಬಾರದು ಎಂದು ಬೇಡಿಕೆ ಇಟ್ಟಿದ್ದಾರೆ. ‘ಈ ಅವಧಿಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರಿಸಿದರೆ, ನಕ್ಸಲರು ಸಹ ತಿರುಗೇಟು ನೀಡುತ್ತಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ. (ಇದರಿಂದ ಭದ್ರತಾ ಪಡೆಗಳೊಂದಿಗೆ ಹೋರಾಡುವ ನಕ್ಸಲರ ಹಠ ಇನ್ನೂ ಹೋಗಿಲ್ಲ, ಎಂದು ತಿಳಿಯುವುದೇ ? – ಸಂಪಾದಕರು)

1. ನಕ್ಸಲರು ಪತ್ರಿಕಾ ಪ್ರಕಟಣೆಯಲ್ಲಿ, ‘ಇತ್ತೀಚೆಗೆ ನಮ್ಮ ಕೆಲವು ಪ್ರಮುಖ ನಾಯಕರು ಸಾವನ್ನಪ್ಪಿರುವುದರಿಂದ, ಸಂಘಟನೆಯು ಆಂತರಿಕ ಪುನರ್ರಚನೆಯ ಹಂತದಲ್ಲಿದೆ. ಆದ್ದರಿಂದ, ಫೆಬ್ರವರಿ 15, 2026 ರವರೆಗೆ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಶೋಧ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು.’ ಸರಕಾರವು ಕದನ ವಿರಾಮವನ್ನು ಒಪ್ಪಿದರೆ, ಚರ್ಚೆಗೆ ಸಿದ್ಧ ಎಂದು ನಕ್ಸಲರು ಹೇಳಿದ್ದಾರೆ.

2. ಸೋನುದಾದಾ, ಸತೀಶದಾದ್ ಮತ್ತು ಚಂದಣ್ಣ ಈ ಕುಖ್ಯಾತ ನಕ್ಸಲ್‌ವಾದಿಗಳು ಈ ಕದನ ವಿರಾಮವನ್ನು ಬೆಂಬಲಿಸಿದ್ದಾರೆ. ‘ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಲು ಬಯಸುತ್ತಾರೆ; ಆದರೆ ಅದಕ್ಕಾಗಿ ಸ್ವಲ್ಪ ಸಮಯ ಬೇಕು. ಈ ಅವಧಿಯಲ್ಲಿ ಜನಪ್ರತಿನಿಧಿಗಳು ಮತ್ತು ಕೆಲವು ಪತ್ರಕರ್ತರನ್ನು ಸಂಪರ್ಕಿಸಲು ಅವಕಾಶ ನೀಡಬೇಕು. ಇದರಿಂದ ಅವರನ್ನು ಭೇಟಿ ಮಾಡಿ ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ನಿಗದಿತ ದಿನಾಂಕವನ್ನು ಘೋಷಿಸಲು ಸಾಧ್ಯವಾಗುತ್ತದೆ,’ ಎಂದು ಅವರು ಹೇಳಿದ್ದಾರೆ.

3. ಸರಕಾರವು ಮಾರ್ಚ್ 31, 2026 ರೊಳಗೆ ನಕ್ಸಲ್‌ವಾದವನ್ನು ಶಮನಗೊಳಿಸುವ ಗುರಿಯನ್ನು ಹೊಂದಿದೆ. ನಕ್ಸಲರ ಈ ಬೇಡಿಕೆಯ ಬಗ್ಗೆ ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರು, ‘ಇನ್ನು ಕೆಲವೇ ತಿಂಗಳುಗಳ ಕಾಯುವಿಕೆ ಇದೆ. ಮಾರ್ಚ್ 31, 2026 ರೊಳಗೆ ನಕ್ಸಲ್‌ವಾದವು ಸಂಪೂರ್ಣವಾಗಿ ಕೊನೆಗೊಳ್ಳಲಿದೆ’ ಎಂದು ಹೇಳಿದ್ದಾರೆ.