ಬೆಂಗಳೂರು: ಎಟಿಎಂಗಳಿಗಾಗಿ ಸಾಗಿಸುತ್ತಿದ್ದ 7 ಕೋಟಿ ರೂಪಾಯಿ ದರೋಡೆ : Bengaluru Robbery

ರಿಸರ್ವ್ ಬ್ಯಾಂಕ್ ನ ಅಧಿಕಾರಿಗಳೆಂದು ಸೋಗು ಹಾಕಿದ ದರೋಡೆಕೋರರು

ಬೆಂಗಳೂರು – ಇಲ್ಲಿನ ಜಯನಗರ ಪ್ರದೇಶದಲ್ಲಿ ದರೋಡೆಕೋರರ ಗುಂಪೊಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಅಧಿಕಾರಿಗಳೆಂದು ವಂಚಿಸಿ, ಎ.ಟಿ.ಎಂ.ಗಳಿಗೆ ತುಂಬಲು ಸಾಗಿಸುತ್ತಿದ್ದ 7 ಕೋಟಿ ರೂಪಾಯಿಗಳನ್ನು ಕಳ್ಳತನ ಮಾಡಿದ್ದಾರೆ. ಜಯನಗರದ ಅಶೋಕ ಸ್ತಂಭದ ಬಳಿ ನವೆಂಬರ್ 18 ರಂದು, ಹಾಡುಹಗಲಿನಲ್ಲೇ ಈ ದರೋಡೆ ಸಂಭವಿಸಿದೆ.

ಎಚ್.ಡಿ.ಎಫ್.ಸಿ ಬ್ಯಾಂಕಿನ ಜೆ.ಪಿ.ನಗರ ಶಾಖೆಯಿಂದ ಸಿ.ಎಂ.ಎಸ್. ಕಂಪನಿಯ ವಾಹನವು ಎ.ಟಿ.ಎಂ.ಗಳಿಗೆ ತುಂಬಲು ಈ ಹಣವನ್ನು ತೆಗೆದುಕೊಂಡು ಹೋಗುತ್ತಿತ್ತು. ಅಶೋಕ ಸ್ತಂಭದ ಬಳಿ, ಇನೋವಾ ವಾಹನದಲ್ಲಿ ಬಂದ ದರೋಡೆಕೋರರು ಹಣವಿದ್ದ ವಾಹನದ ಮಾರ್ಗವನ್ನು ತಡೆದರು ಮತ್ತು ತಾವು ರಿಸರ್ವ್ ಬ್ಯಾಂಕ್ ನ ಅಧಿಕಾರಿಗಳೆಂದು ಹೇಳಿ, ದಾಖಲೆ ಪತ್ರಗಳು ಮತ್ತು ನಗದಿನ ಪರಿಶೀಲನೆ ನಡೆಸುವ ನೆಪ ಹೇಳಿ, ಸಿ.ಎಂ.ಎಸ್.ನ ಸಿಬ್ಬಂದಿಯನ್ನು ವಾಹನದಿಂದ ಕೆಳಗಿಳಿಸಿದರು. ಕ್ಷಣ ಮಾತ್ರದಲ್ಲಿ, ಅವರು ವಾಹನ ಮತ್ತು ಹಣವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಪೋಲೀಸರ ಮಾಹಿತಿಯ ಪ್ರಕಾರ, ಆರೋಪಿಗಳು ಸಿ.ಎಂ.ಎಸ್.ನ ಸಿಬ್ಬಂದಿಯನ್ನು ತಮ್ಮ ವಾಹನದಲ್ಲಿ ಕೂರಿಸಿಕೊಂಡು, ಹಣವನ್ನು ಕೂಡ ತಮ್ಮ ಇನೋವಾ ಕಾರಿನಲ್ಲಿ ತೆಗೆದುಕೊಂಡು ಡೇರಿ ಸರ್ಕಲ್ ಕಡೆಗೆ ಹೊರಟರು. ನಂತರ, ಅವರು ಸಿಬ್ಬಂದಿಯನ್ನು ಮೇಲ್ಸೇತುವೆಯ ಮೇಲೆ ಇಳಿಸಿ, ಬನ್ನೇರುಘಟ್ಟ ರಸ್ತೆಯ ಕಡೆಗೆ ವೇಗವಾಗಿ ಪರಾರಿಯಾದರು.

ದಕ್ಷಿಣ ವಿಭಾಗದ ಪೋಲೀಸರು ನಗರದಾದ್ಯಂತ ನಾಕಾಬಂದಿಯನ್ನು ಹಾಕಿದ್ದು, ಜಯನಗರ, ಡೇರಿ ಸರ್ಕಲ್ ಮತ್ತು ಬನ್ನೇರುಘಟ್ಟ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಪೋಲೀಸರು ಈ ಸಂಘಟಿತ ದರೋಡೆಕೋರರ ಗುಂಪನ್ನು ಪತ್ತೆಹಚ್ಚಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಸ್ತಿತ್ವದಲ್ಲಿದೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪೋಲೀಸರಿಗೆ ಮತ್ತು ರಾಜ್ಯ ಸರಕಾರಕ್ಕೆ ಇದು ನಾಚಿಕೆಗೇಡಿನ ಸಂಗತಿ.