ಮಧ್ಯಪ್ರದೇಶ: ಪೊಲೀಸ್ ತರಬೇತಿ ಕೇಂದ್ರಗಳಲ್ಲಿ ಶ್ರೀಮದ್ಭಗವದ್ಗೀತೆ ಪಾಠ!

ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶ ಪೊಲೀಸ್ ಇಲಾಖೆಯು ರಾಜ್ಯದ ಎಲ್ಲಾ ಪೊಲೀಸ್ ತರಬೇತಿ ಕೇಂದ್ರಗಳಲ್ಲಿ ಭಗವದ್ಗೀತೆಯ ಪಠಣವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಇದರ ಅನುಷ್ಠಾನವು ಈಗಾಗಲೇ ಪ್ರಾರಂಭವಾಗಿದೆ. ಈ ಉಪಕ್ರಮದ ಉದ್ದೇಶವು ಹೊಸದಾಗಿ ನೇಮಕಗೊಂಡ ಪೊಲೀಸರಿಗೆ ವೃತ್ತಿಪರ ತರಬೇತಿಯನ್ನು ನೀಡುವುದು ಮಾತ್ರವಲ್ಲದೆ, ಅವರಿಗೆ ನೈತಿಕ ಮೌಲ್ಯಗಳು ಮತ್ತು ಆಧ್ಯಾತ್ಮಿಕತೆಯನ್ನು ಕಲಿಸುವುದಾಗಿದೆ.

೧. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಜಾ ಬಾಬು ಸಿಂಗ್ ಅವರು ಈ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ಉಪಕ್ರಮದಿಂದಾಗಿ, ಪೊಲೀಸ್ ತರಬೇತಿಗೆ ಹೊಸ ದಿಕ್ಕು ಸಿಗುತ್ತಿದೆ ಮತ್ತು ಸೈನಿಕರ ಜೀವನಕ್ಕೆ ನೈತಿಕ ಅಡಿಪಾಯ ಸಿಗುತ್ತಿದೆ. ಶ್ರೀರಾಮಚರಿತಮಾನಸ ಮತ್ತು ಶ್ರೀಮದ್ಭಗವದ್ಗೀತೆಗಳು ಜೀವನದ ನಿಜವಾದ ತತ್ವವನ್ನು ಹೇಳುತ್ತವೆ ಮತ್ತು ನೈತಿಕ ಜೀವನವನ್ನು ನಡೆಸಲು ಕಲಿಸುತ್ತವೆ ಎಂದು ಅವರ ಅಭಿಪ್ರಾಯವಿದೆ.

೨. ಈ ಪೊಲೀಸರಿಗೆ ಕರ್ತವ್ಯನಿಷ್ಠೆ ಮತ್ತು ಆದರ್ಶ ನಡವಳಿಕೆಗಾಗಿ ಗೀತೆಯ ತತ್ವಶಾಸ್ತ್ರವನ್ನು ಹೇಳಲಾಗುವುದು. ಗೀತೆಯಲ್ಲಿನ ಕರ್ಮಯೋಗ, ನಿಷ್ಕಾಮ ಕರ್ಮ ಮತ್ತು ಸಮತ್ವಭಾವದ ಸಿದ್ಧಾಂತಗಳನ್ನು ಅವರಿಗೆ ಪರಿಚಯಿಸಲಾಗುವುದು. ಇದರಿಂದ ಪೊಲೀಸರು ಸಂಕಷ್ಟದ ಸಮಯದಲ್ಲಿ ಯೋಗ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಒತ್ತಡದ ಪರಿಸ್ಥಿತಿಯಲ್ಲಿ ಶಾಂತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ಮೂಲಕ ಅವರ ಸೇವಾ ಮತ್ತು ಸಮರ್ಪಣಾ ಭಾವ ಇನ್ನಷ್ಟು ಬಲಗೊಳ್ಳುವುದು.

೩. ದೈನಂದಿನ ಕಠಿಣ ತರಬೇತಿ ಮತ್ತು ಕರ್ತವ್ಯಗಳ ನಂತರ ತರಬೇತಿ ನಿರತ ಪೊಲೀಸರು ಒಂದೆಡೆ ಸೇರಿದಾಗ, ಹಳದಿ ಕುರ್ತಾ ಧರಿಸಿದ ಒಬ್ಬ ವ್ಯಕ್ತಿ ಅವರಿಗೆ ಶ್ರೀಮದ್ಭಗವದ್ಗೀತೆಯ ಶ್ಲೋಕಗಳು ಮತ್ತು ಅವುಗಳ ಅರ್ಥಗಳನ್ನು ವಿವರಿಸುತ್ತಾರೆ. ಪ್ರಸ್ತುತ, ಸುಮಾರು ೪ ಸಾವಿರ ಯುವಕರು ಮತ್ತು ಯುವತಿಯರು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಾಗಿ ೯ ತಿಂಗಳ ತರಬೇತಿಯನ್ನು ಪಡೆಯುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಮಧ್ಯಪ್ರದೇಶದ ಪೊಲೀಸರ ಶ್ಲಾಘನೀಯ ಕ್ರಮ! ದೇಶದ ಪ್ರತಿಯೊಂದು ಕ್ಷೇತ್ರಕ್ಕೂ ಇಂತಹ ಧರ್ಮಶಿಕ್ಷಣವನ್ನು ನೀಡಬೇಕು. ಮೊದಲು ರಾಜಕಾರಣಿಗಳಿಗೆ ಧಾರ್ಮಿಕ ಶಿಕ್ಷಣ ನೀಡಬೇಕು. ನಂತರ ಆಡಳಿತ ಮತ್ತು ಇತರ ಸರಕಾರಿ ವ್ಯವಸ್ಥೆಗಳಿಗೆ ಧರ್ಮಶಿಕ್ಷಣವನ್ನು ನೀಡಬೇಕು!
  • ಪಾಪ ಮಾಡಿದರೆ ಯಾವ ಫಲ ಸಿಗುತ್ತದೆ ಎಂಬುದನ್ನೂ ಕೂಡ ಗೀತೆಯನ್ನು ಕಲಿಸುವಾಗ ತಿಳಿಸಿದರೆ ಪೊಲೀಸರಿಂದ ಭವಿಷ್ಯದಲ್ಲಿ ಅಕ್ರಮ ಕೃತ್ಯಗಳು ನಡೆಯುವುದಿಲ್ಲ!