ಭೋಪಾಲ್ (ಮಧ್ಯಪ್ರದೇಶ) ನಲ್ಲಿ ನಡೆಯುವ ‘ಆಲಮಿ ತಬ್ಲೀಘಿ ಇಜ್ತಿಮಾ’ (ಜಾಗತಿಕ ತಬ್ಲೀಘಿ ಸಮಾವೇಶ) ಮೇಲೆ ತೀವ್ರ ನಿಗಾ ಇರಿಸಿ! – ಸಾಧು-ಸಂತರ ಬೇಡಿಕೆ : Aalmi Tablighi Ijtema

ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ೪೦ ದೇಶಗಳ ಮುಸ್ಲಿಮರು ಭಾಗವಹಿಸುವರು

ಭೋಪಾಲ್ (ಮಧ್ಯಪ್ರದೇಶ) – ಮುಂಬರುವ ನವೆಂಬರ್ ೧೪ ರಿಂದ ೧೭ ರ ಅವಧಿಯಲ್ಲಿ ನಗರದಲ್ಲಿ ೭೮ನೇ ‘ಆಲಮಿ ತಬ್ಲೀಘಿ ಇಜ್ತಿಮಾ’ವನ್ನು ಆಯೋಜಿಸಲಾಗಿದೆ. ಈ ಅಂತರರಾಷ್ಟ್ರೀಯ ಧಾರ್ಮಿಕ ಸಮ್ಮೇಳನದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಬರೋಬ್ಬರಿ ೪೦ ದೇಶಗಳ ಮುಸ್ಲಿಂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ, ದೇಶದ ಸುರಕ್ಷತೆಯ ದೃಷ್ಟಿಯಿಂದ ಸಂಪೂರ್ಣ ಕಾರ್ಯಕ್ರಮದ ವೀಕ್ಷಣೆ ಮತ್ತು ವಿಡಿಯೋ ಚಿತ್ರೀಕರಣ ಮಾಡುವಂತೆ ಸಾಧು-ಸಂತರು ಆಗ್ರಹಿಸಿದ್ದಾರೆ. ಅವರ ಪ್ರಕಾರ, ಈ ಸಮಯದಲ್ಲಿ ಪ್ರತಿ ಪೆಂಡಾಲ್, ಪ್ರತಿ ವ್ಯಕ್ತಿ ಮತ್ತು ಪ್ರತಿ ಚಲನವಲನಗಳ ಮೇಲೆ ಆಡಳಿತವು ಸೂಕ್ಷ್ಮವಾಗಿ ಗಮನಹರಿಸಬೇಕು. (ಸಾಧು-ಸಂತರಿಗೆ ಅನಿಸುವುದು ಆಡಳಿತಕ್ಕೆ ಏಕೆ ಅನಿಸುವುದಿಲ್ಲ? – ಸಂಪಾದಕರು)

ಸಾಧು-ಸಂತರು ಆಡಳಿತವನ್ನು ಭೇಟಿ ಮಾಡಿದರು!

ಅಖಿಲ ಭಾರತ ಸಾಧು-ಸಂತ ಸನ್ಯಾಸಿ ಪರಿಷತ್ತಿನ ಅಧ್ಯಕ್ಷರಾದ ಮಹಾಮಂಡಲೇಶ್ವರ ಅನಿಲಾನಂದ ಮಹಾರಾಜರು ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ, ಮಹಾಕುಂಭದಂತಹ ದೊಡ್ಡ ಧಾರ್ಮಿಕ ಸಮಾರಂಭಗಳಲ್ಲಿ ಸರಕಾರ ಮತ್ತು ಆಡಳಿತಕ್ಕೆ ಪ್ರತಿ ಪೆಂಡಾಲ್‌ಗೂ ಪ್ರವೇಶಿಸಲು ಅವಕಾಶವಿರುತ್ತದೆ, ಅದೇ ರೀತಿ ಇಜ್ತಿಮಾದ ಪೆಂಡಾಲ್‌ಗಳಲ್ಲಿಯೂ ಸಹ ಅದೇ ರೀತಿಯ ದಾಖಲಾತಿ ಮತ್ತು ನಿಗಾ ಇರಬೇಕು ಎಂದು ಹೇಳಿದರು. ಧಾರ್ಮಿಕ ಕಾರ್ಯಕ್ರಮಗಳ ಹೆಸರಿನಲ್ಲಿ ದೇಶದ್ರೋಹಿ ಹೇಳಿಕೆಗಳು ಅಥವಾ ಚಟುವಟಿಕೆಗಳು ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ; ಆದ್ದರಿಂದ, ಆಡಳಿತವು ಎಚ್ಚರಿಕೆಯ ಹೆಜ್ಜೆ ಇಡಬೇಕು.

ಮಹಾಕುಂಭದಂತೆ ನಿಗಾ ಇಡುವ ಬೇಡಿಕೆ

ಇಜ್ತಿಮಾದ ಮೇಲೆ ಮಹಾಕುಂಭದ ಮಾದರಿಯಲ್ಲೇ ನಿಗಾ ಇರಬೇಕು. ಮಹಾಕುಂಭದಲ್ಲಿ ಡ್ರೋನ್ ವೀಕ್ಷಣೆ ಮತ್ತು ವಿಡಿಯೋ ಚಿತ್ರೀಕರಣ ಮಾಡಲು ಸಾಧ್ಯವಾದರೆ, ಇಜ್ತಿಮಾದಲ್ಲಿ ಏಕೆ ಸಾಧ್ಯವಿಲ್ಲ? ಈ ವಿಷಯದ ಕುರಿತು ನಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಧಿಕೃತ ಬೇಡಿಕೆ ಪತ್ರವನ್ನು ಸಲ್ಲಿಸುತ್ತೇವೆ, ಎಂದು ಸಂತರು ಆಗ್ರಹಿಸಿದ್ದಾರೆ.

ಕೇವಲ ೩ ದೇಶಗಳಲ್ಲಿ ಮಾತ್ರ ಸಮಾವೇಶ!

ವಿಶ್ವದಾದ್ಯಂತ ಕೇವಲ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾರತದಲ್ಲಿ (ಭೋಪಾಲ್‌ನಲ್ಲಿ) ಮಾತ್ರ ‘ಆಲಮಿ ತಬ್ಲೀಘಿ ಇಜ್ತಿಮಾ’ ಆಯೋಜಿಸಲಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಮುಸ್ಲಿಮರು ಈ ಧಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ.