ತ್ರಿನಿದಾದ ಮತ್ತು ಟೊಬಾಗೋದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಿರ್ಧಾರ! Ram Mandir Trinidad & Tobago

ಭಾರತದಿಂದ ರಾಮಲಲ್ಲಾನ ವಿಗ್ರಹ ತರಿಸಲಾಗುವುದು

ಪೋರ್ಟ್ ಆಫ್ ಸ್ಪೇನ್ (ತ್ರಿನಿದಾದ) – ಭಾರತದಿಂದ 14 ಸಾವಿರ ಕಿ.ಮೀ. ದೂರದಲ್ಲಿರುವ ಮತ್ತು ಕೇವಲ 14 ಲಕ್ಷ ಜನಸಂಖ್ಯೆ ಇರುವ ತ್ರಿನಿದಾದ ಮತ್ತು ಟೊಬಾಗೋ ಎಂಬ ಚಿಕ್ಕ ದೇಶವು ಭವ್ಯ ಶ್ರೀರಾಮ ಮಂದಿರ ನಿರ್ಮಾಣದ ನಿರ್ಧಾರವನ್ನು ಘೋಷಿಸಿದೆ. ಈ ದೇಶದಲ್ಲಿ ಸುಮಾರು 3 ಲಕ್ಷದ 50 ಸಾವಿರ ಹಿಂದೂ ಜನಸಂಖ್ಯೆ ಇದೆ. ಈ ದೇಶವು ಹಿಂದೂ ಧರ್ಮದ ಒಂದು ಪ್ರಮುಖ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ತ್ರಿನಿದಾದ ಮತ್ತು ಟೊಬಾಗೋ ದೇಶವನ್ನು ‘ರಾಮಾಯಣ ದೇಶ’ ಎಂದೂ ಕರೆಯಲಾಗುತ್ತದೆ. ಶ್ರೀರಾಮ ಮಂದಿರದ ಬಗ್ಗೆ ನಾಯಕರೊಂದಿಗೆ ಚರ್ಚೆ ನಡೆದಿದೆ ಎಂದು ತ್ರಿನಿದಾದ ಮತ್ತು ಟೊಬಾಗೋ ಸಚಿವ ಬ್ಯಾರಿ ಪದಾರಥ್ ಘೋಷಿಸಿದ್ದಾರೆ.

ದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ! – ಸಚಿವ ಬ್ಯಾರಿ ಪದಾರಥ್

ತ್ರಿನಿದಾದ ಮತ್ತು ಟೊಬಾಗೋದಲ್ಲಿ 19ನೇ ಶತಮಾನದಿಂದ ಹಿಂದೂ ಪರಂಪರೆ ತಲೆಮಾರುಗಳಿಂದ ನಡೆದು ಬಂದಿದೆ. ಇಲ್ಲಿನ ಮನೆಗಳಲ್ಲಿ ಇಂದಿಗೂ ಭಗವದ್ಗೀತೆ ಮತ್ತು ರಾಮಾಯಣವನ್ನು ಭಕ್ತಿಯಿಂದ ಓದಲಾಗುತ್ತದೆ. ಶ್ರೀರಾಮ ಮಂದಿರ ಯೋಜನೆಯಿಂದ ದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದು ಸರಕಾರ ವಿಶ್ವಾಸ ವ್ಯಕ್ತಪಡಿಸಿದೆ. ತ್ರಿನಿದಾದ ಮತ್ತು ಟೊಬಾಗೋ ಸರಕಾರವು ದೀಪಾವಳಿ ಹಬ್ಬದ ಸಮಯದಲ್ಲಿ ಈ ಘೋಷಣೆಯನ್ನು ಮಾಡಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಸರಕಾರವು ಶ್ರೀರಾಮ ಮಂದಿರ ಯೋಜನೆಗೆ ಸಂಪೂರ್ಣ ನೀಲನಕ್ಷೆಯನ್ನು ಸಲ್ಲಿಸಲಿದೆ. ಈ ವರ್ಷ ಅಯೋಧ್ಯೆಯಿಂದ ರಾಮಲಲ್ಲಾನ ವಿಗ್ರಹದ ಪ್ರತಿಕೃತಿಯನ್ನು ತರಲು ಸಹಾಯ ಮಾಡಿದವರೊಂದಿಗೆ ಕೂಡ ಸರಕಾರ ಚರ್ಚೆ ನಡೆಸಿದೆ ಎಂದು ಸಚಿವ ಬ್ಯಾರಿ ಪದಾರಥ್ ತಿಳಿಸಿದ್ದಾರೆ.

ಉತ್ತರ ಅಮೆರಿಕಾದ ಹಿಂದೂ ಭಕ್ತರಿಗೆ ಇದು ಒಂದು ಪ್ರಮುಖ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿರುತ್ತದೆ. ನ್ಯೂಯಾರ್ಕ್‌ನಲ್ಲಿರುವ ‘ಓವರ್‌ಸೀಸ್ ಫ್ರೆಂಡ್ಸ್ ಆಫ್ ದಿ ರಾಮಮಂದಿರ’ದ ಸಂಸ್ಥಾಪಕ ಪ್ರೇಮ್ ಭಂಡಾರಿ ಅವರು ಇಲ್ಲಿ ಅಯೋಧ್ಯ ನಗರಿ ಸ್ಥಾಪಿಸುವ ಪ್ರಸ್ತಾವನೆಯನ್ನು ತ್ರಿನಿದಾದ ಮತ್ತು ಟೊಬಾಗೋದ ಪ್ರಧಾನ ಮಂತ್ರಿ ಕಮಲಾ ಪ್ರಸಾದ್ ಬಿಸೇಸರ್ ಅವರಿಗೆ ಸಲ್ಲಿಸಿದ್ದಾರೆ. ಪ್ರಧಾನ ಮಂತ್ರಿ ಕಮಲಾ ಪ್ರಸಾದ್ ಬಿಸೇಸರ್ ಅವರು ಸ್ವತಃ ಭಾರತೀಯ ಮೂಲದವರಾಗಿದ್ದಾರೆ.