ದೇವಸ್ಥಾನದ ಅರ್ಚಕರು ನಿರ್ದಿಷ್ಟ ಜಾತಿ ಅಥವಾ ವಂಶದವರಾಗಿರುವುದು ಅಗತ್ಯ ಧಾರ್ಮಿಕ ಸಂಪ್ರದಾಯವಲ್ಲ : ಕೇರಳ ಉಚ್ಚ ನ್ಯಾಯಾಲಯದ ತೀರ್ಪು Kerala High Court Order

ತಂತ್ರ ವಿದ್ಯಾಲಯ’ದ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್

ತಿರುವನಂತಪುರಂ (ಕೇರಳ) – ದೇವಸ್ಥಾನದ ಅರ್ಚಕರು ನಿರ್ದಿಷ್ಟ ಜಾತಿ ಅಥವಾ ವಂಶಕ್ಕೆ ಸೇರಿದವರಾಗಿರುವುದು ಯಾವುದೇ ಅಗತ್ಯ ಧಾರ್ಮಿಕ ಸಂಪ್ರದಾಯವಲ್ಲ. ಅರ್ಚಕರ ನೇಮಕಾತಿಯು ಕೇವಲ ಸಾಂಪ್ರದಾಯಿಕ ವಿಧಾನದಲ್ಲಿ ಮಾತ್ರ ಆಗಬೇಕು ಮತ್ತು ಅದನ್ನು ಯಾವುದೇ ಕಾನೂನು ಅಥವಾ ನಿಯಮದಿಂದ ಬದಲಾಯಿಸಲಾಗದು ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಲಾಗದು ಎಂದು ಹೇಳಿ ಕೇರಳ ಉಚ್ಚ ನ್ಯಾಯಾಲಯವು ಅಖಿಲ ಕೇರಳ ತಂತ್ರಿ ಸಮಾಜವು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಈ ಅರ್ಜಿಯು, ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಕೇರಳ ದೇವಸ್ವಂ ನೇಮಕಾತಿ ಮಂಡಳಿಯಿಂದ ‘ತಂತ್ರ ವಿದ್ಯಾಲಯ’ ಎಂದು ಮಾನ್ಯತೆ ಪಡೆದ ಸಂಸ್ಥೆಗಳ ವಿರುದ್ಧವಾಗಿತ್ತು. ಕೇರಳ ದೇವಸ್ವಂ ಮಂಡಳಿಯವರು ದೇವಸ್ಥಾನಗಳಲ್ಲಿ ಅರೆಕಾಲಿಕ ಶಾಂತಿ (ಅರ್ಚಕ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಂತ್ರ ವಿದ್ಯಾಪೀಠಗಳಿಂದ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯಗೊಳಿಸಿದ್ದರು. ಅದರ ವಿರುದ್ಧ ಅಖಿಲ ಕೇರಳ ತಂತ್ರಿ ಸಮಾಜವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

ಜಾತಿ ವಿಶೇಷಕ್ಕೆ ಸಂಬಂಧಿಸಿದ ಹಕ್ಕಿನ ನಿರಾಕರಣೆ.

ಕೇವಲ ಸಾಂಪ್ರದಾಯಿಕ ಅರ್ಚಕರಿಂದ ತರಬೇತಿ ಪಡೆದ ವ್ಯಕ್ತಿಗಳು ಮಾತ್ರ ಅರ್ಚಕರಾಗಬಹುದು ಎಂದು ಅರ್ಜಿದಾರರು ವಾದಿಸಿದ್ದರು; ಆದರೆ ನ್ಯಾಯಾಲಯವು ಈ ಹಕ್ಕನ್ನು ನಿರಾಕರಿಸಿತು. ನ್ಯಾಯಾಲಯವು, ಈ ಹಕ್ಕಿಗೆ ವಾಸ್ತವಿಕವಾಗಿಯೂ ಅಥವಾ ಕಾನೂನುಬದ್ಧವಾಗಿಯೂ ಯಾವುದೇ ಆಧಾರವಿಲ್ಲ ಎಂದು ಹೇಳಿತು. ಆಧ್ಯಾತ್ಮಿಕ ಕಾರ್ಯಕ್ಕೆ ಸಂಬಂಧಿಸದ ವ್ಯಕ್ತಿಗಳನ್ನು ಅರ್ಚಕರನ್ನಾಗಿ ಮಾಡುವುದರಿಂದ ಅರ್ಜಿದಾರರ ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ದೊರೆತಿರುವ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗಿವೆ ಎಂಬ ಹೇಳಿಕೆಯೂ ತಪ್ಪಾಗಿದೆ.

ತಂತ್ರ ವಿದ್ಯಾಲಯಗಳ ಪಠ್ಯಕ್ರಮ ವೈದಿಕ ಸಂಪ್ರದಾಯಕ್ಕೆ ಅನುಗುಣವಾಗಿದೆ

ಕೇರಳ ದೇವಸ್ವಂ ಮಂಡಳಿಯು ರೂಪಿಸಿದ ಪಠ್ಯಕ್ರಮವು ವೈದಿಕ ಗ್ರಂಥಗಳು, ಧಾರ್ಮಿಕ ವಿಧಿಗಳು, ಪೂಜಾ ಪದ್ಧತಿ ಮತ್ತು ಉಪಾಸನೆಗಳ ಸ್ವರೂಪವನ್ನು ಒಳಗೊಂಡಿದೆ, ಇವುಗಳನ್ನು ಯೋಗ್ಯ ವಿದ್ವಾಂಸರು ಮತ್ತು ತಂತ್ರಿಗಳು (ಅರ್ಚಕರು) ಕಲಿಸುತ್ತಾರೆ ಎಂದು ನ್ಯಾಯಾಲಯವು ಹೇಳಿದೆ. ಈ ಪಠ್ಯಕ್ರಮಗಳ ಅವಧಿಯು 1 ವರ್ಷದಿಂದ 5 ವರ್ಷಗಳವರೆಗೆ ಇರುತ್ತದೆ. ಸಲ್ಲಿಸಿದ ದಾಖಲೆಗಳಿಂದ ತಿರುವಾಂಕೂರು ಮತ್ತು ಕೇರಳ ದೇವಸ್ವಂ ಮಂಡಳಿಗಳು ಯಾವುದೇ ಸಂಸ್ಥೆಗೆ ಮಾನ್ಯತೆ ನೀಡುವ ಮೊದಲು ದೃಢ ಮತ್ತು ಕಠಿಣ ಸಾಂಸ್ಥಿಕ ಪ್ರಕ್ರಿಯೆಯನ್ನು ನಿಗದಿಪಡಿಸಿವೆ ಎನ್ನುವುದು ಸ್ಪಷ್ಟವಾಗುತ್ತದೆ.