ದೇಶದ ಅತ್ಯಂತ ಪ್ರಾಚೀನ ಅಂಬರನಾಥದ ಶಿವಮಂದಿರದಲ್ಲಿ ಬಿರುಕು, ಶಿಲ್ಪಗಳು ಭಗ್ನ; ಆದರೆ ಸಂರಕ್ಷಣೆಯ ಕಡೆಗೆ ಪುರಾತತ್ವ ಇಲಾಖೆಯ ನಿರ್ಲಕ್ಷ್ಯ !

ದೇವಾಲಯದ ಮೇಲಿನ ಒಡೆದ ಶಿಲ್ಪ

ಮುಂಬಯಿ, ಅಕ್ಟೋಬರ್ ೨೧ (ವರದಿ) – ೯೫೦ ವರ್ಷಗಳಷ್ಟು ಪ್ರಾಚೀನ ಮತ್ತು ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟಿರುವ ಸ್ಮಾರಕವಾಗಿರುವ ಥಾಣೆ ಜಿಲ್ಲೆಯ ಅಂಬರನಾಥದಲ್ಲಿರುವ ಶಿವಮಂದಿರಕ್ಕೆ ಬಿರುಕುಗಳು ಕಾಣಿಸಿಕೊಂಡಿವೆ. ಅನೇಕ ಸ್ಥಳಗಳಲ್ಲಿ ದೇವಾಲಯದ ಅವಶೇಷಗಳು ಒಡೆದಿವೆ, ದೇವಾಲಯದ ಮೇಲಿನ ಅನೇಕ ಶಿಲ್ಪಗಳು ಭಗ್ನಗೊಂಡಿವೆ. ಇಷ್ಟೊಂದು ದುಸ್ಥಿತಿಯಾದರೂ ಭಾರತೀಯ ಪುರಾತತ್ವ ಇಲಾಖೆಯು ಈ ದೇವಾಲಯದ ಸಂರಕ್ಷಣೆಗಾಗಿ ಯಾವುದೇ ಯೋಜನೆಯನ್ನು ಮಾಡಿಲ್ಲ. ಈ ದೇವಾಲಯವು ದೇಶದ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ.

ದೇವಾಲಯದ ಒಡೆದ ಭಾಗ

‘ಸನಾತನ ಪ್ರಭಾತ’ದ ಪ್ರತಿನಿಧಿ ಶ್ರೀ. ಪ್ರೀತಮ ನಾಚಣಕರ್ ಅವರು ಮಾಹಿತಿ ಹಕ್ಕಿನ ಅಡಿಯಲ್ಲಿ ಸಲ್ಲಿಸಿದ ಅರ್ಜಿಯಿಂದಾಗಿ ಅಂಬರನಾಥ ದೇವಾಲಯದ ಸಂರಕ್ಷಣೆ ಅಥವಾ ದುರಸ್ತಿಗಾಗಿ ಪುರಾತತ್ವ ಇಲಾಖೆಯಿಂದ ಯಾವುದೇ ರೀತಿಯ ಸಮೀಕ್ಷೆಯನ್ನು ಮಾಡಲಾಗಿಲ್ಲ ಎಂಬ ಮಾಹಿತಿಯನ್ನು ಕೇಂದ್ರ ಪುರಾತತ್ವ ಇಲಾಖೆಯ ಮುಂಬಯಿಯ ವಿಭಾಗೀಯ ಕಚೇರಿಯಿಂದ ನೀಡಲಾಗಿದೆ.

ದೇವಾಲಯದ ಒಡೆದ ಭಾಗ

ದೇವಾಲಯದ ದುಸ್ಥಿತಿ ಹೀಗಿದೆ !

ಈ ದೇವಾಲಯದ ಮೇಲೆ ಭಗವಾನ್ ಶ್ರೀವಿಷ್ಣು, ಗಣಪತಿ, ನರಸಿಂಹ ಮತ್ತು ಇತರ ದೇವತೆಗಳು ನೃತ್ಯ ಮಾಡುತ್ತಿರುವ ಶಿಲ್ಪಗಳಿವೆ. ಇವುಗಳಲ್ಲಿ ಬಹುತೇಕ ಶಿಲ್ಪಗಳು ಒಡೆದಿವೆ. ಕೆಲವು ಶಿಲ್ಪಗಳ ಶಿರಗಳು ಮುರಿದಿವೆ, ಇನ್ನೂ ಕೆಲವದರ ಅಂಗಾಂಗಗಳು ಮುರಿದಿವೆ. ಅನೇಕ ಸ್ಥಳಗಳಲ್ಲಿ ದೇವಾಲಯದ ಕೆಲವು ಭಾಗಗಳು ಒಡೆದಿವೆ. ಕಳೆದ ಹಲವು ವರ್ಷಗಳಿಂದ ಈ ದೇವಾಲಯದ ಸಂರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಪ್ರಸ್ತುತ ಈ ದೇವಾಲಯದ ಸ್ಥಿತಿ ಅತ್ಯಂತ ಬಿಗಡಾಯಿಸಿದೆ.