ದೇವರನ್ನೇ ಏನಾದರೂ ಮಾಡಲು ಕೇಳುವಂತೆ ಅರ್ಜಿದಾರನಿಗೆ ಸಲಹೆ ನೀಡಿದ ಸರ್ವೋಚ್ಚ ನ್ಯಾಯಾಲಯ!

ಖಜುರಾಹೊ(ಮಧ್ಯಪ್ರದೇಶ): ಭಗ್ನಗೊಂಡ ಶ್ರೀ ವಿಷ್ಣುವಿನ ಮೂರ್ತಿಯನ್ನು ಬದಲಾಯಿಸುವಂತೆ ಬೇಡಿಕೆ

ಛಾಯಾಚಿತ್ರಗಳು: ಭಗ್ನಗೊಂಡ ಶ್ರೀ ವಿಷ್ಣುವಿನ ಮೂರ್ತಿಯ ಚಿತ್ರ

(ಈ ಚಿತ್ರವನ್ನು ಧಾರ್ಮಿಕ ಭಾವನೆಗಳನ್ನು ನೋಯಿಸಲು ಪ್ರಕಟಿಸಲಾಗಿಲ್ಲ, ಬದಲಾಗಿ ವಾಸ್ತವವನ್ನು ತಿಳಿಸಲು ಪ್ರಸಾರ ಮಾಡಲಾಗಿದೆ.)

ಖಜುರಾಹೊ (ಮಧ್ಯಪ್ರದೇಶ) – ಇಲ್ಲಿನ ಶ್ರೀ ವಾಮನ ದೇವಸ್ಥಾನದಲ್ಲಿರುವ 7 ಅಡಿ ಎತ್ತರದ ಭಗ್ನಗೊಂಡಿರುವ ಶ್ರೀ ವಿಷ್ಣುವಿನ ಮೂರ್ತಿಯನ್ನು ಬದಲಾಯಿಸಿ ಬೇರೆ ಮೂರ್ತಿಯನ್ನು ಪ್ರತಿಷ್ಠಾಪಿಸಲು ಆದೇಶಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ. ಈ ಮೂರ್ತಿ ಸದ್ಯ ಇರುವ ಸ್ಥಿತಿಯಲ್ಲೇ ಇರಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಭಕ್ತರು ಪೂಜೆ ಮಾಡಲು ಬಯಸಿದರೆ, ಅವರು ಇನ್ನೊಂದು ದೇವಸ್ಥಾನಕ್ಕೆ ಹೋಗಬಹುದು. ಇದು ಕೇವಲ ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿಯಾಗಿದೆ. ‘ಹೋಗಿ ದೇವರಿಗೇ ಏನಾದರೂ ಮಾಡಲು ಹೇಳಿ. ನೀವು ನಿಮ್ಮನ್ನು ಶ್ರೀ ವಿಷ್ಣುವಿನ ಪರಮ ಭಕ್ತ ಎಂದು ಕರೆದುಕೊಳ್ಳುತ್ತೀರಾ, ಹಾಗಿದ್ದರೆ ದೇವರಿಗೆ ಪ್ರಾರ್ಥಿಸಿ ಮತ್ತು ಧ್ಯಾನ ಮಾಡಿ,’ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಅರ್ಜಿದಾರರಿಗೆ ಸಲಹೆ ನೀಡಿತು. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು ಅರ್ಜಿದಾರ ರಾಕೇಶ್ ದಲಾಲ್ ಅವರ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು.

ನ್ಯಾಯಾಲಯವು, ಈ ಪ್ರಕರಣವು ಭಾರತೀಯ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಈ ಸ್ಥಳವು ವಿಶ್ವ ಪರಂಪರೆಯ ತಾಣವಾಗಿದೆ. ನೀವು ಶೈವ ಪಂಥದ ವಿರೋಧಿಗಳಲ್ಲದಿದ್ದರೆ, ಅಲ್ಲಿಗೆ ಹೋಗಿ ಪೂಜೆ ಮಾಡಬಹುದು. ಅಲ್ಲಿ ಭವ್ಯವಾದ ಶಿವಲಿಂಗವಿದೆ. ಅದು ಖಜುರಾಹೊದಲ್ಲಿನ ಅತಿ ದೊಡ್ಡ ಲಿಂಗಗಳಲ್ಲಿ ಒಂದಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?

ಮೊಘಲರ ದಾಳಿಯಲ್ಲಿ ಶ್ರೀ ವಾಮನ ದೇವಸ್ಥಾನದ ಶ್ರೀ ವಿಷ್ಣುವಿನ ಮೂರ್ತಿಯನ್ನು ವಿರೂಪಗೊಳಿಸಲಾಗಿತ್ತು. ಅಂದಿನಿಂದ ಈ ಮೂರ್ತಿ ಅದೇ ಸ್ಥಿತಿಯಲ್ಲಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಸ್ಥಾಪಿಸಲಾದ ಶ್ರೀ ವಿಷ್ಣುವಿನ ಮೂರ್ತಿಯ ತಲೆಯನ್ನು ತುಂಡಿರಿಸಲಾಗಿದೆ. ಅನೇಕ ಸಾಮಾಜಿಕ ಸಂಘಟನೆಗಳು ಮತ್ತು ಸ್ಥಳೀಯ ನಾಗರಿಕರು ಮೂರ್ತಿಯ ಪುನರುಜ್ಜೀವನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಭಕ್ತರ ಪೂಜೆ ಮಾಡುವ ಹಕ್ಕನ್ನು ರಕ್ಷಿಸಲು ಮತ್ತು ದೇವಸ್ಥಾನದ ಪಾವಿತ್ರ್ಯವನ್ನು ಪುನರುಜ್ಜೀವನಗೊಳಿಸಲು ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದ ಹಸ್ತಕ್ಷೇಪಕ್ಕೆ ಮನವಿ ಮಾಡಿದ್ದರು. ಅರ್ಜಿದಾರ ರಾಕೇಶ್ ದಲಾಲ್ ಅವರು ಮೂರ್ತಿಯ ಸ್ಥಾನದಲ್ಲಿ ಹೊಸ ಮೂರ್ತಿ ಪ್ರತಿಷ್ಠಾಪಿಸುವಂತೆ ಮನವಿ ಮಾಡಿದ್ದರು. ಸರ್ವೋಚ್ಚ ನ್ಯಾಯಾಲಯದ ನಿರ್ಧಾರದ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಅವರು ಭಾಜಪ ಅಧಿಕಾರದಲ್ಲಿದ್ದರೂ ಈ ಪರಿಸ್ಥಿತಿ ದುಃಖಕರವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

‘ರಾಷ್ಟ್ರೀಯ ವೀರ್ ಕಿಸಾನ್ ಮಜ್ದೂರ್ ಸಂಘ ದೆಹಲಿ’ ಯ ರಾಷ್ಟ್ರೀಯ ಅಧ್ಯಕ್ಷ ರಾಕೇಶ್ ದಲಾಲ್ ಅವರು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಸಲ್ಲಿಸಿದ್ದರು. ದಲಾಲ್ ಅವರು ಈ ದೇವಸ್ಥಾನದ ಹೊರಗೆ ಹಲವು ಬಾರಿ ಉಪವಾಸ ಸತ್ಯಾಗ್ರಹ ಮಾಡಿದ್ದರು ಮತ್ತು ಸ್ಥಳೀಯ ಜನರಲ್ಲಿ ಜಾಗೃತಿ ಮೂಡಿಸಲು ಧಾರ್ಮಿಕ ವಿಧಿಗಳನ್ನು ಸಹ ಮಾಡಿದ್ದರು.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರಕಾರವು ಭಗ್ನಗೊಂಡ ಮೂರ್ತಿಯನ್ನು ತೆಗೆದುಹಾಕಿ, ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕ್ರಮಗಳನ್ನು ಕೈಗೊಳ್ಳುವುದು ಆವಶ್ಯಕವಾಗಿದೆ.