‘ರಾಜೀವ್ ಗಾಂಧಿ ಫೌಂಡೇಶನ್’ನ ವಿದೇಶಿ ನಿಧಿಗಳ ದಾಖಲೆಗಳನ್ನು ಕೇಳಿದ ಒರಿಸ್ಸಾ ಪೊಲೀಸರು !

ಭಯೋತ್ಪಾದಕರನ್ನು ಪ್ರೋತ್ಸಾಹಿಸುವ ಝಾಕಿರ್ ನಾಯಕ್ ಮತ್ತು ಚೀನಾ ಸರಕಾರದಿಂದ ಪಡೆದ ನಿಧಿಯ ಬಗ್ಗೆ ಪ್ರಶ್ನೆಗಳು

ಭುವನೇಶ್ವರ (ಒರಿಸ್ಸಾ) – ಒರಿಸ್ಸಾ ಪೊಲೀಸರು ‘ರಾಜೀವ್ ಗಾಂಧಿ ಫೌಂಡೇಶನ್’ (ಆರ್‌ಜಿಎಫ್) ಗೆ ನೋಟಿಸ್ ಕಳುಹಿಸಿ, ವಿದೇಶಿ ದೇಣಿಗೆಗಳು, ಬ್ಯಾಂಕ್ ಖಾತೆಗಳು ಮತ್ತು ವಿವಾದಾತ್ಮಕ ಮೂಲಗಳಿಂದ ಪಡೆದ ದೇಣಿಗೆಗಳ ಬಗ್ಗೆ ವಿವರವಾದ ದಾಖಲೆಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಭಾರತ ವಿರೋಧಿ ಹೇಳಿಕೆ ನೀಡಿದ ಆರೋಪದ ಮೇಲೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನೋಟಿಸ್ ಕಳುಹಿಸಲಾಗಿದೆ.

1. ರಾಹುಲ್ ಗಾಂಧಿಯವರು ‘ರಾಜೀವ್ ಗಾಂಧಿ ಫೌಂಡೇಶನ್’ನ ಮಂಡಳಿಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಅದರ ಇತರ ಸದಸ್ಯರು ಸೋನಿಯಾ ಗಾಂಧಿ (ಅಧ್ಯಕ್ಷರು), ಪ್ರಿಯಾಂಕಾ ಗಾಂಧಿ ವಾದ್ರಾ, ಪಿ. ಚಿದಂಬರಂ, ಸುಮನ್ ದುಬೆ, ಅಶೋಕ್ ಗಂಗೂಲಿ, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ವಿಜಯ ಮಹಾಜನ್ ಇವರುಗಳಿದ್ದಾರೆ.

2. ನೋಟಿಸ್‌ನಲ್ಲಿ, 2011 ರಲ್ಲಿ ವಿವಾದಾತ್ಮಕ ಇಸ್ಲಾಮಿಕ್ ಧರ್ಮೋಪದೇಶಕ ಝಾಕಿರ ನಾಯಕ್ ನಿಂದ ಮತ್ತು 2005-06 ರಲ್ಲಿ ಚೀನಾ ಸರಕಾರದಿಂದ ರಾಜೀವ ಗಾಂಧಿ ಫೌಂಡೇಶನ್‌ಗೆ ₹2 ಕೋಟಿ 64 ಲಕ್ಷ ದೇಣಿಗೆ ದೊರೆತಿತ್ತು ಎಂದು ಹೇಳಲಾಗಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸಿವ್ ಅಲೈಯನ್ಸ್ ಸರಕಾರದ ಅವಧಿಯಲ್ಲಿ, ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಮತ್ತು ಹಣಕಾಸು ಸಚಿವಾಲಯದ ನಿಧಿಗಳನ್ನು ಫೌಂಡೇಶನ್‌ಗೆ ವರ್ಗಾಯಿಸಲಾಗಿದೆ ಎಂದು ನೋಟಿಸ್ ಆರೋಪಿಸಿದೆ.

3. ರಾಮ ಹರಿ ಪೂಜಾರಿ ಎಂಬ ವ್ಯಕ್ತಿಯು ದಾಖಲಿಸಿದ ದೂರಿನಲ್ಲಿ, ರಾಹುಲ್ ಗಾಂಧಿಯವರ ಹೇಳಿಕೆಗಳು ದೇಶದ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡಿದೆ ಎಂದು ಹೇಳಲಾಗಿದೆ. ಅವರು ಭಾರತದ ವಿರುದ್ಧ ಯುದ್ಧ ಘೋಷಿಸುವ ಮೂಲಕ ದೇಶದ ವಿರುದ್ಧ ದಂಗೆ ಎದ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

4. ಜನವರಿ 15, 2025 ರಂದು ದೆಹಲಿಯ ಕೋಟ್ಲಾ ರಸ್ತೆಯಲ್ಲಿರುವ ಹೊಸ ಕಾಂಗ್ರೆಸ್ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುವಾಗ, ಭಾಜಪದವರು ಮತ್ತು ಆರ್‌ಎಸ್‌ಎಸ್‌ನವರು ದೇಶದ ಪ್ರತಿಯೊಂದು ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದರು. “ನಾವು ಈಗ ಭಾಝಪ ಮತ್ತು ಆರ್‌ಎಸ್‌ಎಸ್ ವಿರುದ್ಧ ಹೋರಾಡುತ್ತಿದ್ದೇವೆ” ಎಂದು ಅವರು ಹೇಳಿದರು. ಆನಂತರ ರಾಹುಲ ಗಾಂಧಿ ತೀವ್ರ ಟೀಕೆಗೆ ಗುರಿಯಾಗಿದ್ದರು.