ಮಧ್ಯಪ್ರದೇಶದ ನವೋದಯ ಶಾಲೆಯಲ್ಲಿ ಪೋಷಕರ ಸಹಿತ ವಿದ್ಯಾರ್ಥಿಗಳ ಮತಾಂತರ ! : Gwalior School Conversion

  • ಮೂವರ ವಿರುದ್ಧ ದೂರು ದಾಖಲು

  • ಉದ್ಯೋಗ ಮತ್ತು ಹಣದ ಆಮಿಷ

  • ಬೈಬಲ್ ಮತ್ತು ಇತರ ಪ್ರಚಾರ ಸಾಮಗ್ರಿಗಳು ವಶಕ್ಕೆ

ಡಾಬ್ರಾ (ಗ್ವಾಲಿಯರ್) – ಇಲ್ಲಿನ ‘ನವೊ ಕ್ರಾಂತಿ’ ಎಂಬ ನವೋದಯ ಶಾಲೆಯಲ್ಲಿ ವಿದ್ಯಾರ್ಥಿಗಳ ಮತ್ತು ಪೋಷಕರಿಗೆ ಉದ್ಯೋಗ ಮತ್ತು ಹಣದ ಆಮಿಷ ತೋರಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ಯಾಮನಾರಾಯಣ್, ರೇವಿಕಾ ನಂದಾ ಮತ್ತು ಡೆನ್ಜಿಲ್ ಎಂಬ ಮೂವರ ವಿರುದ್ಧ ‘ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021’ ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. (ಮತಾಂತರಗೊಂಡ ಕ್ರೈಸ್ತರು ತಮ್ಮ ಮೂಲ ಹಿಂದೂ ಹೆಸರುಗಳನ್ನು ಉಳಿಸಿಕೊಳ್ಳುತ್ತಾರೆ ಏಕೆಂದರೆ ಇದು ಹಿಂದೂ ಸಮಾಜದಲ್ಲಿ ಉಳಿದು ಹಿಂದೂಗಳನ್ನು ಮತಾಂತರ ಮಾಡಲು ಅವರಿಗೆ ಸುಲಭವಾಗುತ್ತದೆ ಎಂಬುದನ್ನು ಗಮನಿಸಿ! – ಸಂಪಾದಕರು)

ದೂರುದಾರರು, ತಮ್ಮ ಮಗ ಶಾಲೆಯಲ್ಲಿ ಯೇಸುಕ್ರಿಸ್ತನ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದ ನಂತರ ತಾವು ಆಗಸ್ಟ್ 25ರಂದು ಶಾಲೆಗೆ ಭೇಟಿ ನೀಡಿದಾಗ ಅಲ್ಲಿ ಅವರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಬೈಬಲ್ ಮತ್ತು ಇತರ ಪ್ರಚಾರ ಸಾಮಗ್ರಿಗಳನ್ನು ವಿತರಿಸುತ್ತಿರುವುದು ಕಂಡುಬಂದಿದೆ. ಅವರು ವಿದ್ಯಾರ್ಥಿಗಳಿಗೆ ಮತಾಂತರದ ಆಮಿಷವನ್ನೂ ಒಡ್ಡಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿಯೂ ಹರಿದಾಡುತ್ತಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಯಿಂದ ಬೈಬಲ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಉಪವಿಭಾಗೀಯ ದಂಡಾಧಿಕಾರಿಗಳ ತನಿಖೆಯಲ್ಲಿ ಶಾಲೆಯಲ್ಲಿನ ಗಂಭೀರ ಅವ್ಯವಹಾರಗಳು ಬಹಿರಂಗ

ಈ ಪ್ರಕರಣದ ಗಾಂಭೀರ್ಯತೆಯನ್ನು ಗಮನಿಸಿ, ಉಪವಿಭಾಗೀಯ ದಂಡಾಧಿಕಾರಿಗಳು 3 ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದರು. ಈ ತನಿಖೆಯಲ್ಲಿ ಶಾಲೆಯಲ್ಲಿ ಅನೇಕ ಅವ್ಯವಹಾರಗಳು ಕಂಡುಬಂದಿವೆ. ಶಾಲೆಯ ನಿರ್ದೇಶಕ ಇಬ್ರಾಹಿಂ ಕ್ರಾಂತಿ ಮತ್ತು ಪ್ರಾಂಶುಪಾಲ ಅನಿಲ ನಿಗಮ ಅವರ ವಿಚಾರಣೆ ನಡೆಯುತ್ತಿದೆ. ಈ ಶಾಲೆಯನ್ನು 2012ರಿಂದ ‘ನವ ಕ್ರಾಂತಿ ಸಮಿತಿ’ ನಡೆಸುತ್ತಿದ್ದು, 2025ರಲ್ಲಿ ಶಾಲೆಯ ಮಾನ್ಯತೆಯನ್ನು ಮತ್ತೆ ವಿಸ್ತರಿಸಲಾಗಿತ್ತು. ಪ್ರಸ್ತುತ ಶಾಲೆಯಲ್ಲಿ 70 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ತನಿಖೆಯಲ್ಲಿ ಶಾಲೆಯ ಆವರಣದಲ್ಲಿ ಒಂದು ಸ್ವಯಂಸೇವಾ ಸಂಸ್ಥೆಯು ವೃತ್ತಿಪರ ತರಬೇತಿ ಕೇಂದ್ರವನ್ನು ನಡೆಸುತ್ತಿತ್ತು, ಆದರೆ ಅಲ್ಲಿ ಯಾವುದೇ ತರಬೇತಿ ಪಡೆದ ಶಿಕ್ಷಕರು ಇರಲಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ವಸತಿ ಕೊಠಡಿಗಳಲ್ಲಿ ಇಬ್ಬರು ಹೊರಗಿನ ವ್ಯಕ್ತಿಗಳು ಅಕ್ರಮವಾಗಿ ವಾಸಿಸುತ್ತಿದ್ದರು. ಈ ಪ್ರಕರಣವು ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿದ್ದು, ಶಿಕ್ಷಣ ಇಲಾಖೆ ಮತ್ತು ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಾರೆ.

ಸಂಪಾದಕೀಯ ನಿಲುವು

  • ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಹಿಂದೂ ವಿರೋಧಿ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದನ್ನು ಗಮನಿಸಿದರೆ, ಅಲ್ಲಿನ ಭಾಜಪ ಸರಕಾರವು ಹಿಂದೂಗಳನ್ನು ಗುರಿಯಾಗಿಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಆವಶ್ಯಕವಾಗಿದೆ !
  • ಹಿಂದೂಗಳಿಗೆ ಧರ್ಮ ಶಿಕ್ಷಣದ ಕೊರತೆಯಿಂದ ಅವರು ಕ್ರೈಸ್ತರ ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಹಿಂದೂಗಳ ಧಾರ್ಮಿಕ ಸಂಘಟನೆಗಳು ಎಲ್ಲಾ ಹಿಂದೂಗಳಿಗೆ ಧರ್ಮ ಶಿಕ್ಷಣ ನೀಡಲು ಈಗ ಧೃಡವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು!