ಧರ್ಮಸ್ಥಳ ಪ್ರಕರಣದಲ್ಲಿ ಭಾಜಪದಿಂದ ‘ಧರ್ಮಯುದ್ಧ’ ಹೆಸರಿನಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ Dharmasthala Mass Murder Case

ಬೆಂಗಳೂರು – ಭಾಜಪ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಸರಕಾರದ ಕಾರ್ಯವೈಖರಿಯನ್ನು ಖಂಡಿಸಿದ್ದು, ಇದನ್ನು ‘ಸುಸಂಘಟಿತ ಪಿತೂರಿ’ ಎಂದು ಕರೆದು, ಪಕ್ಷದ ವತಿಯಿಂದ ‘ಧರ್ಮಯುದ್ಧ’ ಎಂಬ ಹೆಸರಿನಲ್ಲಿ ರಾಜ್ಯವ್ಯಾಪಿ ಪ್ರತಿಭಟನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಅವರು, ಮುಂದಿನ ವಾರ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಹಿಂದೂ ಕಾರ್ಯಕರ್ತರ ಮೇಲೆ ತಕ್ಷಣದ ಕ್ರಮ; ಆದರೆ ಧರ್ಮಸ್ಥಳ ವಿರೋಧಿಗಳ ಮೇಲೆ ಯಾವುದೇ ಕ್ರಮವಿಲ್ಲ

ವಿಜಯೇಂದ್ರ ಅವರು ಮಾತನಾಡಿ, ಧರ್ಮಸ್ಥಳದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಅಪಪ್ರಚಾರವು ಕೋಟ್ಯಂತರ ಭಕ್ತರ ಶ್ರದ್ಧೆಗೆ ಧಕ್ಕೆ ತರುತ್ತಿದೆ ಎಂದು ಹೇಳಿದರು. ಇದನ್ನು ವಿರೋಧಿಸಿ ಪ್ರತಿಕ್ರಿಯಿಸಿದ ಹಿಂದೂ ಕಾರ್ಯಕರ್ತರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ; ಆದರೆ ಧರ್ಮಸ್ಥಳಕ್ಕೆ ಅಪಖ್ಯಾತಿ ತರುತ್ತಿರುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ ಸರಕಾರಕ್ಕೆ ಇಲ್ಲವೇ? ಅಥವಾ ಸರಕಾರವೇ ಈ ಅಭಿಯಾನವನ್ನು ಬೆಂಬಲಿಸುತ್ತಿದೆಯೇ? ರಾಜ್ಯ ಸರಕಾರ ಮತ್ತು ಪೊಲೀಸರ ನಿಷ್ಕ್ರಿಯತೆಯು ದೊಡ್ಡ, ಸಂಘಟಿತ ಪಿತೂರಿಯ ಭಾಗವಾಗಿದೆ. ಈ ಮೂಲಕ ಗೌರವಾನ್ವಿತ ಸಂಸ್ಥೆಯೊಂದನ್ನು ಗುರಿಯಾಗಿಸಿಕೊಂಡಿದೆ. ಇದು ಪೂರ್ವಯೋಜಿತ ಪಿತೂರಿಯಾಗಿದೆ. ಕರ್ನಾಟಕದ ಭಕ್ತರು “ಇದರ ಹಿಂದೆ ಯಾರಿದ್ದಾರೆ ಮತ್ತು ಸರಕಾರ ಅವರನ್ನು ಏಕೆ ರಕ್ಷಿಸುತ್ತಿದೆ?” ಎಂದು ಪ್ರಶ್ನಿಸುತ್ತಿದ್ದಾರೆ.

ಧರ್ಮಸ್ಥಳ ಪ್ರಕರಣ?

ಧರ್ಮಸ್ಥಳವು ರಾಜ್ಯದಲ್ಲಿ ಜೈನರು ಮತ್ತು ಹಿಂದೂಗಳ ಪವಿತ್ರ ಯಾತ್ರಾಸ್ಥಳವಾಗಿದೆ. ಒಬ್ಬ ಮಾಜಿ ಸ್ವಚ್ಛತಾ ಸಿಬ್ಬಂದಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುತ್ತಾ, 1995 ರಿಂದ 2014 ರ ಅವಧಿಯಲ್ಲಿ ಧರ್ಮಸ್ಥಳದ ಪರಿಸರದಲ್ಲಿ ಅನೇಕ ಶವಗಳನ್ನು ಹೂಳಲು ತನ್ನನ್ನು ಒತ್ತಾಯಿಸಲಾಗಿತ್ತು ಎಂದು ಹೇಳಿದ್ದಾರೆ. ಈ ಶವಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಶವಗಳೂ ಸೇರಿದ್ದವು ಹಾಗೂ ಕೆಲವರ ಮೇಲೆ ಲೈಂಗಿಕ ದೌರ್ಜನ್ಯದ ಗುರುತುಗಳೂ ಕಂಡುಬಂದಿದ್ದವು ಎಂದು ಹೇಳಿದ್ದಾನೆ. ಈ ಸಂದರ್ಭದಲ್ಲಿ ಸರಕಾರ ರಚಿಸಿದ ವಿಶೇಷ ತನಿಖಾ ದಳ (ಎಸ್ಐಟಿ) ಸಂಬಂಧಪಟ್ಟ ಸ್ಥಳದಲ್ಲಿ ಅಗೆದ ನಂತರ ಏನೂ ಪತ್ತೆಯಾಗಿಲ್ಲ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅವರನ್ನು ಕೊಲೆ ಮಾಡುವುದರ ಹಿಂದೆ ಧರ್ಮಸ್ಥಳ ದೇವಾಲಯದ ಕೈವಾಡವಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಪ್ರಚಾರದಲ್ಲಿ ದೇವಸ್ಥಾನದ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅದರ ಉದ್ದೇಶ ದೇವಸ್ಥಾನದ ಕಡೆಗೇ ಇರುವುದರಿಂದ ಹಿಂದೂಗಳಲ್ಲಿ ಆಕ್ರೋಶದ ಭಾವನೆ ಮೂಡಿದೆ.