ಭಾರತದ ಗಮನಾರ್ಹ ಯಶಸ್ಸಿನಿಂದ ನೇಪಾಳಕ್ಕೂ ಲಾಭ ! – ರಾಮಚಂದ್ರ ಪೌಡೆಲ್, ನೇಪಾಳದ ರಾಷ್ಟ್ರಪತಿ Nepal President Statement

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಸ್ರಿ ಅವರ ಎರಡು ದಿನಗಳ ನೇಪಾಳ ಭೇಟಿ

ಕಾಠಮಂಡು (ನೇಪಾಳ) – ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಸ್ರಿ ಅವರು ಎರಡು ದಿನಗಳ ನೇಪಾಳ ಪ್ರವಾಸದಲ್ಲಿದ್ದಾರೆ. ಆಗಸ್ಟ್ 17 ರಂದು ಅವರು ನೇಪಾಳದ ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ಮತ್ತು ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಓಲಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಕುರಿತು ಚರ್ಚಿಸಲಾಯಿತು. ಈ ವೇಳೆ ರಾಷ್ಟ್ರಪತಿ ಪೌಡೆಲ್ ಅವರು ಮಿಸ್ರಿ ಅವರಿಗೆ, ಭಾರತವು ಸಾಮಾಜಿಕ, ಆರ್ಥಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಉದಯೋನ್ಮುಖ ಅಂತಾರಾಷ್ಟ್ರೀಯ ಶಕ್ತಿಯಾಗಿ ಗಮನಾರ್ಹ ಯಶಸ್ಸನ್ನು ಸಾಧಿಸುತ್ತಿದೆ. ಇದರಿಂದ ನೇಪಾಳಕ್ಕೂ ಲಾಭವಾಗಿದೆ ಎಂದು ತಿಳಿಸಿದರು.

ಭಾರತದ ‘ನೆರೆಹೊರೆ ಮೊದಲು’ ನೀತಿಗೆ ನೇಪಾಳದಿಂದ ಶ್ಲಾಘನೆ !

ಪೌಡೆಲ್ ಅವರು ಭಾರತ ಸರಕಾರದ ‘ನೆರೆಹೊರೆ ಮೊದಲು’ ನೀತಿಯನ್ನು ಶ್ಲಾಘಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೀತಿಯ ಪ್ರಕಾರ, ನೇಪಾಳವು ಭಾರತದ ನೆರೆಹೊರೆಯ ಆದ್ಯತೆಗಳಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಮಿಸ್ರಿ ಕೂಡ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಯವರ ಜೊತೆಗೆ ವಿದೇಶಾಂಗ ಸಚಿವೆ ಆರಜು ರಾಣಾ ದೇಉಬಾ, ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರನ್ನು ಕೂಡ ಮಿಸ್ರಿ ಭೇಟಿ ಮಾಡಿದರು. ಅಲ್ಲದೇ, ನೇಪಾಳ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಪುಷ್ಪಕಮಲ್ ದಹಲ್ ‘ಪ್ರಚಂಡ’ ಅವರನ್ನು ಕೂಡ ಭೇಟಿಯಾದರು.

ವಿದೇಶಾಂಗ ಕಾರ್ಯದರ್ಶಿ ಮಿಸ್ರಿ ಅವರ ನೇಪಾಳ ಭೇಟಿಯು, ಪ್ರಧಾನಿ ಕೆ.ಪಿ. ಓಲಿ ಅವರ ಸೆಪ್ಟೆಂಬರ್ ತಿಂಗಳ ಭಾರತ ಭೇಟಿಯ ಸಿದ್ಧತೆಯ ಒಂದು ಭಾಗವಾಗಿದೆ.