ಭಕ್ತರ ಮೇಲೆ ಮುಗಿ ಬಿದ್ದ ತ್ರ್ಯಂಬಕೇಶ್ವರ ದೇವಸ್ಥಾನದ ಖಾಸಗಿ ಭದ್ರತಾ ಸಿಬ್ಬಂದಿ : 10 ಭಕ್ತರಿಗೆ ಗಾಯ!

ಹೆಚ್ಚಿದ ಜನಸಂದಣಿಯಿಂದಾಗಿ ಮುಖ ದರ್ಶನವನ್ನು ನಿಲ್ಲಿಸಿದ್ದರಿಂದ ನೂಗ್ಗಾಟ

ನಾಶಿಕ – ಸತತ 3 ದಿನಗಳ ರಜೆ ಇದ್ದುದರಿಂದ ಮಹಾದೇವನ ದರ್ಶನಕ್ಕಾಗಿ ಜಿಲ್ಲೆಯ ತ್ರ್ಯಂಬಕೇಶ್ವರಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಹೀಗಾಗಿ ಉತ್ತರ ದ್ವಾರದಿಂದ ಮುಖ ದರ್ಶನಕ್ಕಾಗಿ ಭಕ್ತರಿಗೆ ಸ್ವಲ್ಪ ಸಮಯ ಪ್ರವೇಶ ನೀಡಿ ನಂತರ ಅದನ್ನು ನಿಲ್ಲಿಸಲಾಯಿತು. ಇದರಿಂದ ಭಕ್ತರು ಆಕ್ರೋಶಗೊಂಡರು. ಅವರಲ್ಲಿ ಕೆಲವರು ವ್ಯವಸ್ಥಾಪಕರನ್ನು ತಳ್ಳಾಡಿದರು, ನಂತರ ದೇವಸ್ಥಾನದ ಖಾಸಗಿ ಭದ್ರತಾ ಸಿಬ್ಬಂದಿ ಭಕ್ತರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದರು. ಇದರಲ್ಲಿ 8 ರಿಂದ 10 ಭಕ್ತರು ಗಾಯಗೊಂಡಿದ್ದಾರೆ. ಭಕ್ತರನ್ನು ತಳ್ಳಾಟ, ನೂಕಾಟ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಈ ಕುರಿತು ಭಕ್ತರು ದುಃಖ ವ್ಯಕ್ತಪಡಿಸಿದ್ದಾರೆ.

ಜನಸಂದಣಿ ಹೆಚ್ಚಾದ ಕಾರಣ ದೇವಸ್ಥಾನದ ಆಡಳಿತ ಮಂಡಳಿ ದೇಣಿಗೆ ದರ್ಶನವನ್ನು ನಿಲ್ಲಿಸಿ ಮುಖ ದರ್ಶನವನ್ನು ಪ್ರಾರಂಭಿಸಿತು. ಉತ್ತರ ದ್ವಾರದಿಂದ ಪ್ರವೇಶ ನೀಡಿ ಪಶ್ಚಿಮ ದ್ವಾರದಿಂದ ಹೊರ ಹೋಗಲು ವ್ಯವಸ್ಥೆ ಮಾಡಲಾಗಿತ್ತು; ಆದರೆ ಈ ಆಕಸ್ಮಿಕ ವ್ಯವಸ್ಥೆಯಿಂದಾಗಿ ಭಕ್ತರ ನೂಕಾಟ, ತಳ್ಳಾಟ ಉಂಟಾಯಿತು. ಹೀಗಾಗಿ ದೊಡ್ಡ ಸರತಿ ಸಾಲು ನಿರ್ಮಾಣವಾಯಿತು. ಇದರಿಂದಾಗಿ ಉತ್ತರ ದ್ವಾರವನ್ನು ಮುಚ್ಚಲಾಯಿತು. ಈ ದ್ವಾರದ ಮುಂದೆ ನಿಂತಿದ್ದ ಭಕ್ತರು ಕೋಪಗೊಂಡರು. ಅವರಲ್ಲಿ ಕೆಲವರು ತಮ್ಮ ಕೈಯಲ್ಲಿದ್ದ ನೀರಿನ ಬಾಟಲಿಗಳನ್ನು ಮುಚ್ಚಿದ ಉತ್ತರ ದ್ವಾರಕ್ಕೆ ಎಸೆದರು ಮತ್ತು ಜೋರಾಗಿ ತಳ್ಳಿದರು. ಇದರಿಂದ ಕೋಪಗೊಂಡ ಒಳಗಿದ್ದ ಭದ್ರತಾ ಸಿಬ್ಬಂದಿ ಮತ್ತು ವ್ಯವಸ್ಥಾಪಕರು ಹೊರಗೆ ಬಂದರು. ಭಕ್ತರು ವ್ಯವಸ್ಥಾಪಕ ಸಮೀರ ವೈದ್ಯ ಅವರನ್ನು ತಳ್ಳಿದ ಕಾರಣ ಭದ್ರತಾ ಸಿಬ್ಬಂದಿ ರಸ್ತೆಯ ಮಧ್ಯದಲ್ಲಿಯೇ ಕೋಲುಗಳಿಂದ ಭಕ್ತರ ಮೇಲೆ ಹಲ್ಲೆ ನಡೆಸಿದರು. ಇದರಿಂದಾಗಿ ಆ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಲಿಖಿತ ದೂರು ಇಲ್ಲದ ಕಾರಣ ಕ್ರಮವಿಲ್ಲ! – ಪೊಲೀಸ

‘ಈ ಕುರಿತು ಭಕ್ತರು ಲಿಖಿತ ದೂರು ನೀಡದ ಕಾರಣ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ತ್ರ್ಯಂಬಕೇಶ್ವರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ ಮಹೇಶ ಕುಲಕರ್ಣಿ ತಿಳಿಸಿದ್ದಾರೆ.