ಮಹಾರಾಷ್ಟ್ರದಲ್ಲಿ ‘ಕವಿ ಕಾಳಿದಾಸ ಸಂಸ್ಕೃತ ಸಾಧನಾ’ ಪ್ರಶಸ್ತಿಯ ಕಡೆಗಣನೆ ಮುಂದುವರಿಕೆ; 4 ವರ್ಷಗಳ ಪ್ರಶಸ್ತಿಗಳು ಬಾಕಿ!

ಮುಂಬಯಿ ಆಗಸ್ಟ್ 8 – ಕಾಂಗ್ರೆಸ್ ಸರಕಾರದಂತೆ ಭಾಜಪ ಸರಕಾರದ ಅವಧಿಯಲ್ಲೂ ಮಹಾರಾಷ್ಟ್ರದಲ್ಲಿ ಸಂಸ್ಕೃತ ಭಾಷೆಯ ಕಡೆಗಣನೆ ಮುಂದುವರಿದಿದೆ. ಸಂಸ್ಕೃತ ಭಾಷೆಯ ಉನ್ನತಿಗಾಗಿ 2012 ರಿಂದ ಮಹಾರಾಷ್ಟ್ರದಲ್ಲಿ ‘ಕವಿ ಕಾಳಿದಾಸ ಸಂಸ್ಕೃತ ಸಾಧನಾ’ ಪ್ರಶಸ್ತಿಯನ್ನು ಪ್ರಾರಂಭಿಸಲಾಗಿದೆ; ಆದರೆ ಈ ಪ್ರಶಸ್ತಿಯನ್ನು ಸಂಸ್ಕೃತ ದಿನದಂದು ನೀಡುವ ಸರಕಾರದ ನಿರ್ಧಾರ ಕೇವಲ ಕಾಗದದ ಮೇಲಷ್ಟೇ ಉಳಿದಿದೆ. ಪ್ರಶಸ್ತಿ ಪ್ರಾರಂಭವಾದಾಗಿನಿಂದ ಇದುವರೆಗೆ ಒಂದೇ ಒಂದು ಬಾರಿಯೂ ಈ ಪ್ರಶಸ್ತಿಯನ್ನು ಸಂಸ್ಕೃತ ದಿನದಂದು ನೀಡಿಲ್ಲ. ಪ್ರಸ್ತುತ 2021 ರಿಂದ ‘ಕವಿ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿಗಳು’ ಬಾಕಿ ಇವೆ.

1. ನಾಗಪುರದ ‘ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯ’ದಿಂದ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಮಹಾರಾಷ್ಟ್ರ ಸರಕಾರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಇದಕ್ಕಾಗಿ ಅನುದಾನವನ್ನು ನೀಡಲಾಗುತ್ತದೆ ಮತ್ತು ಶಿಕ್ಷಣ ನಿರ್ದೇಶನಾಲಯದಿಂದ ಈ ಪ್ರಶಸ್ತಿ ಪ್ರಕ್ರಿಯೆಯನ್ನು ನಿರ್ವಹಿಸಲಾಗುತ್ತದೆ; ಆದರೆ ಈ ಎಲ್ಲ ಹಂತಗಳಲ್ಲಿ ಪ್ರಶಸ್ತಿ ನೀಡುವ ಬಗ್ಗೆ ತೀವ್ರ ನಿರ್ಲಕ್ಷ್ಯ ಕಂಡುಬರುತ್ತಿದೆ.

2. ಸಂಸ್ಕೃತ ದಿನದಂದೇ ಮಾತ್ರವಲ್ಲ; ಅನೇಕ ವರ್ಷಗಳಿಂದ ಪ್ರಶಸ್ತಿಗಳನ್ನು ನೀಡಿಯೇ ಇಲ್ಲ. 2015 ರಿಂದ 2020 ರವರೆಗಿನ 6 ವರ್ಷಗಳ ಪ್ರಶಸ್ತಿಗಳನ್ನು 2021 ರಲ್ಲಿ ನೀಡಲಾಯಿತು. ಇದಕ್ಕೂ ಮೊದಲು 2-3 ವರ್ಷಗಳ ಪ್ರಶಸ್ತಿಗಳನ್ನು ಸಹ ಒಟ್ಟಿಗೆ ನೀಡಲಾಗಿದೆ. ಈ ಪ್ರಶಸ್ತಿಗಳಿಗೆ ಅಗತ್ಯವಿರುವ 18 ಲಕ್ಷ 17 ಸಾವಿರ 957 ರೂಪಾಯಿಗಳ ಮೊತ್ತವನ್ನು ಸರಕಾರದಿಂದ ವಿಶ್ವವಿದ್ಯಾಲಯಗಳಿಗೆ ಹಲವು ವರ್ಷಗಳ ಕಾಲ ನೀಡಲಾಗಿಲ್ಲ.

3. ಇತ್ತೀಚೆಗೆ ಈ ಅನುದಾನದ ಮೊತ್ತವನ್ನು ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ.
ಈ ರೀತಿಯಾಗಿ ಮಹಾರಾಷ್ಟ್ರದಲ್ಲಿ ‘ಕವಿ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ’ಯ ಕಾರ್ಯವಿಧಾನ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಮರಾಠಿಗೆ ರಾಜಭಾಷೆಯ ಸ್ಥಾನಮಾನ ದೊರೆತ ನಂತರ ಈಗ ಸಂಸ್ಕೃತದ ಸಂವರ್ಧನೆಗೂ ಪ್ರಯತ್ನಗಳು ಆಗಬೇಕು! ರಾಜ್ಯ ಸರಕಾರ ಬಾಕಿ ಇರುವ ‘ಸಂಸ್ಕೃತ ಸಾಧನಾ’ ಪ್ರಶಸ್ತಿಗಳನ್ನು ಆಯಾ ವರ್ಷದ ಪುರಸ್ಕೃತರಿಗೆ ನೀಡಿ ಆ ಪ್ರಶಸ್ತಿಗಳ ಕಡೆಗಣನೆಯನ್ನು ತಡೆಯಬೇಕು!