ಮಾಥೆರಾನ್‌ನಲ್ಲಿ ಕೈರಿಕ್ಷಾಗಳ ಮೇಲೆ ನಿಷೇಧ ಹೇರಿದ ಸುಪ್ರೀಂ ಕೋರ್ಟ್‌ – SC Bans Hand Pull Carts

ಆರು ತಿಂಗಳಲ್ಲಿ ಕ್ರಮ ಕೈಗೊಳ್ಳಲು ಸರಕಾರಕ್ಕೆ ಆದೇಶ

ಮಾಥೆರಾನ್ (ರಾಯಗಡ ಜಿಲ್ಲೆ) – ಮಾನವರಿಂದ ಎಳೆಯಲ್ಪಡುವ ಕೈರಿಕ್ಷಾಗಳನ್ನು ಆರು ತಿಂಗಳೊಳಗೆ ನಿಲ್ಲಿಸಬೇಕು ಮತ್ತು ಈ ವೃತ್ತಿಯಲ್ಲಿರುವವರಿಗಾಗಿ ಪುನರ್ವಸತಿ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಭೂಷಣ ಗವಾಯಿ ಅವರ ನೇತೃತ್ವದ ನ್ಯಾಯಾಲಯ, ಸ್ವಾತಂತ್ರ್ಯ ಬಂದು 78 ವರ್ಷಗಳ ನಂತರವೂ ಇಂತಹ ರಿಕ್ಷಾಗಳನ್ನು ಮುಂದುವರಿಸುವುದು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಜನರು ಕುಳಿತಿರುವ ವಾಹನವನ್ನು ಇನ್ನೊಬ್ಬರು ಎಳೆಯುವುದು ಅಮಾನವೀಯ ಪದ್ಧತಿಯಾಗಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಹೇಳಿದೆ.

ಮಾಥೆರಾನ್‌ನಲ್ಲಿ ನಾಲ್ಕು ಮತ್ತು ಎರಡು ಚಕ್ರಗಳ ವಾಹನಗಳಿಗೆ ನಿಷೇಧವಿದೆ. 2004ರಲ್ಲಿ, ಕೈರಿಕ್ಷಾ ಚಾಲಕರಿಗೆ ಮಾತ್ರ ಇ-ರಿಕ್ಷಾ ಪರವಾನಗಿ ನೀಡಬೇಕು ಮತ್ತು ರಿಕ್ಷಾಗಳ ಸಂಖ್ಯೆಯನ್ನು 20ಕ್ಕೆ ಸೀಮಿತಗೊಳಿಸಬೇಕು ಎಂದು ನ್ಯಾಯಾಲಯ ನಿರ್ಧರಿಸಿತ್ತು. ಆ ಸಮಯದಲ್ಲಿ ಪರವಾನಗಿ ವಿತರಣೆಯಲ್ಲಿನ ಅಕ್ರಮಗಳಿಗಾಗಿ ನ್ಯಾಯಾಲಯವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.