ಎನ್‌.ಸಿ.ಇ.ಆರ್‌.ಟಿ. ಪುಸ್ತಕದಲ್ಲಿ ಜೈಸಲ್ಮೇರವನ್ನು ಮರಾಠರ ಸಾಮ್ರಾಜ್ಯ ಎಂದು ತೋರಿಸಿದ್ದಕ್ಕೆ ರಾಜಮನೆತನದ ಸದಸ್ಯರ ಆಕ್ಷೇಪಣೆ‌

ಇದು ಇತಿಹಾಸದ ಬಗ್ಗೆ ದಾರಿ ತಪ್ಪಿಸುವ ಘಟನೆ ಎಂದು ಆರೋಪ

(ಎನ್‌.ಸಿ.ಇ.ಆರ್‌.ಟಿ. ಎಂದರೆ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ)

ಜೈಸಲ್ಮೇರ (ರಾಜಸ್ಥಾನ) – ಎನ್‌.ಸಿ.ಇ.ಆರ್‌.ಟಿ.ಯ ಎಂಟನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ (ಘಟಕ 3, ಪುಟ ಸಂಖ್ಯೆ 71) ಒಂದು ನಕಾಶೆ ಇದ್ದು, ಅದರಲ್ಲಿ ಜೈಸಲ್ಮೇರ್ ಅನ್ನು ಮರಾಠಾ ಸಾಮ್ರಾಜ್ಯದ ಭಾಗವೆಂದು ತೋರಿಸಲಾಗಿದೆ. ಇದು ಇತಿಹಾಸದ ಬಗ್ಗೆ ದಾರಿತಪ್ಪಿಸುವ, ಆಧಾರರಹಿತ ಮತ್ತು ಆಕ್ಷೇಪಾರ್ಹ ಘಟನೆಯಾಗಿದೆ ಎಂದು ಜೈಸಲ್ಮೇರ ರಾಜಮನೆತನದ ಸದಸ್ಯ ಚೈತನ್ಯ ರಾಜ ಸಿಂಗ್ ಅವರು ಹೇಳಿದ್ದಾರೆ. ಈ ಕುರಿತು, ಚೈತನ್ಯ ರಾಜ ಸಿಂಗ್ ಅವರು ‘ಎಕ್ಸ್’ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಈ ವಿಷಯದ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.

ಈ ಪೋಸ್ಟ್‌ನಲ್ಲಿ ಚೈತನ್ಯ ರಾಜ ಸಿಂಗ್ ಅವರು,

1. ಎನ್‌.ಸಿ.ಇ.ಆರ್‌.ಟಿ.ಯಂತಹ ಸಂಸ್ಥೆಯ ಪಠ್ಯಪುಸ್ತಕಗಳಲ್ಲಿ ಇಂತಹ ಅನಧಿಕೃತ ಮತ್ತು ಐತಿಹಾಸಿಕ ಪುರಾವೆಗಳಿಲ್ಲದ ಮಾಹಿತಿ ನೀಡುವುದು, ಆ ಸಂಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಂತಹ ವಿಷಯಗಳು ನಮ್ಮ ಭವ್ಯ ಇತಿಹಾಸ ಮತ್ತು ಜನರ ಭಾವನೆಗಳಿಗೆ ಧಕ್ಕೆ ತರುತ್ತವೆ. ಇದು ಕೇವಲ ಒಂದು ಪಠ್ಯಪುಸ್ತಕದ ತಪ್ಪಲ್ಲ. ಇದು ನಮ್ಮ ಪೂರ್ವಜರ ಬಲಿದಾನ, ಸಾರ್ವಭೌಮತ್ವ ಮತ್ತು ಶೌರ್ಯದ ಅವಮಾನಕರ ಚಿತ್ರಣವಾಗಿದೆ ಎಂದು ಇದರಿಂದ ತಿಳಿಯುತ್ತದೆ.

2. ಜೈಸಲ್ಮೇರ್ ಸಂಸ್ಥಾನದ ಬಗ್ಗೆ ಲಭ್ಯವಿರುವ ಅಧಿಕೃತ ಮತ್ತು ಐತಿಹಾಸಿಕ ಮಾಹಿತಿಗಳು ಹಾಗೂ ಮೂಲಗಳಲ್ಲಿ ಮರಾಠರ ಆಳ್ವಿಕೆ, ಆಕ್ರಮಣ, ತೆರಿಗೆ ಸಂಗ್ರಹ ಅಥವಾ ಜೈಸಲ್ಮೇರ್ ಮೇಲೆ ಮರಾಠರ ಪ್ರಭಾವದ ಯಾವುದೇ ಉಲ್ಲೇಖ ಕಂಡು ಬರುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಸರಕಾರಿ ದಾಖಲೆಗಳಲ್ಲಿ ಜೈಸಲ್ಮೇರ್ ಮೇಲೆ ಮರಾಠರ ಪ್ರಭಾವ ಇರಲಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.

3. ಇದು ಕೇವಲ ಐತಿಹಾಸಿಕ ಸತ್ಯಗಳನ್ನು ಸರಿಪಡಿಸುವ ವಿಷಯವಲ್ಲ. ಇದು ನಮ್ಮ ಗೌರವ, ಸ್ವಾಭಿಮಾನ ಮತ್ತು ರಾಷ್ಟ್ರೀಯ ಪಠ್ಯಕ್ರಮದ ಪ್ರಾಮಾಣಿಕತೆಯನ್ನು ಕಾಪಾಡುವ ಅವಶ್ಯಕತೆಯಾಗಿದೆ. ಈ ವಿಷಯದ ಬಗ್ಗೆ ಶೀಘ್ರದಲ್ಲೇ ಸೂಕ್ತ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು, ಎಂದು ನಾವು ಅಪೇಕ್ಷಿಸುತ್ತೇವೆ.