ಇಸ್ಲಾಂ ಧರ್ಮ ತೊರೆದು ಲಿಂಗಾಯತ ಪಂಥ ಸ್ವೀಕರಿಸಿ ನಿಜಲಿಂಗ, ಮಠಾಧೀಶ ಸ್ಥಾನ ತ್ಯೆಜಿಸಿದರು

  • ಚಾಮರಾಜನಗರದ ಗುರುಮಲ್ಲೇಶ್ವರ ದಾಸೋಹ ಮಠದ ಪ್ರಕರಣ

  • ವ್ಯಾಪಕ ಟೀಕೆಗಳು ನಂತರ ತ್ಯಾಗ ಪತ್ರ

ಚಾಮರಾಜನಗರ – ಸುಮಾರು ಒಂದೂವರೆ ತಿಂಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಚೌಡಹಳ್ಳಿ ಗ್ರಾಮದಲ್ಲಿರುವ ಗುರುಮಲ್ಲೇಶ್ವರ ದಾಸೋಹ ಮಠದ ಮಠಾಧೀಶರಾಗಿ ನಿಜಲಿಂಗ ಸ್ವಾಮಿಗಳು ಅಧಿಕಾರ ಸ್ವೀಕರಿಸಿದ್ದರು. ಆದರೆ, ಅವರು ಇಸ್ಲಾಂ ಧರ್ಮಕ್ಕೆ ಸೇರಿದವರಾಗಿದ್ದು, ನಂತರ ಲಿಂಗಾಯತ ಧರ್ಮವನ್ನು ಸ್ವೀಕರಿಸಿದ್ದಾರೆ ಎಂಬ ವಿಷಯ ಬಹಿರಂಗವಾಯಿತು. ಅವರ ಮೂಲ ಹೆಸರು ಮೊಹಮ್ಮದ್ ನಿಸಾರ್ ಎಂಬುದು ತಿಳಿದುಬಂದ ನಂತರ ಭಾರಿ ವಿವಾದ ಉಂಟಾಯಿತು. ವಿವಾದದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೂಲತಃ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಪುರದಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದ ಮೊಹಮ್ಮದ್ ನಿಸಾರ್, ನಂತರ ಲಿಂಗಾಯತ ಧರ್ಮವನ್ನು ಸ್ವೀಕರಿಸಿ ಲಿಂಗದೀಕ್ಷೆ ಪಡೆದಿದ್ದರು. ಬಳಿಕ, ಅವರು ನಿಜಲಿಂಗ ಸ್ವಾಮಿ ಎಂಬ ಹೆಸರನ್ನು ಪಡೆದು ಆಧ್ಯಾತ್ಮಿಕ ಜೀವನವನ್ನು ಆಯ್ದುಕೊಂಡಿದ್ದರು.

ಈ ವಿಷಯ ಬಹಿರಂಗವಾದ ಕೂಡಲೇ, ಈ ಬಗ್ಗೆ ಮಾಹಿತಿ ಗೊತ್ತಿದ್ದರೂ ಮಠದವರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ ಎಂದು ಅನೇಕ ಭಕ್ತರು ಆರೋಪ ಮಾಡಿದರು. ಈ ಘಟನೆಯು ಭಕ್ತರ ಶ್ರದ್ಧೆಗೆ ಧಕ್ಕೆ ತಂದಿದೆ ಎಂದು ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ವಿರೋಧ ಹೆಚ್ಚಾದ ಕಾರಣ, ನಿಜಲಿಂಗ ಅವರು ತಮ್ಮ ಮಠಾಧೀಶ ಹುದ್ದೆಗೆ ರಾಜೀನಾಮೆ ನೀಡಿ, ಮಠದಿಂದ ಹೊರಟುಹೋದರು.