ಮೇಘಾಲಯದ ಸರಕಾರಿ ಗೋದಾಮಿನಿಂದ 4 ಸಾವಿರ ಟನ್ ಕಲ್ಲಿದ್ದಲು ನಾಪತ್ತೆ

ಬೇಜವಾಬ್ದಾರಿತನ ತೋರಿದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ! – ಉಚ್ಚ ನ್ಯಾಯಾಲಯದ ಆದೇಶ

ಶಿಲ್ಲಾಂಗ (ಮೇಘಾಲಯ) – ಮೇಘಾಲಯದ ನೈಋತ್ಯ ಖಾಸಿ ಹಿಲ್ಸ್ ಜಿಲ್ಲೆಯ ರಾಜಾಜು ಮತ್ತು ಡಿಯೆಂಗನಗಾಂವ್ ಗ್ರಾಮಗಳಲ್ಲಿರುವ ಸರಕಾರಿ ಕಲ್ಲಿದ್ದಲು ಡಿಪೋಗಳಿಂದ (ಗೋದಾಮುಗಳಿಂದ) ಸುಮಾರು 4 ಸಾವಿರ ಟನ್ ಕಲ್ಲಿದ್ದಲು ನಾಪತ್ತೆಯಾಗಿದೆ. ಈ ಪ್ರಕರಣದ ಬಗ್ಗೆ ಮೇಘಾಲಯ ಉಚ್ಚ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬೇಜವಾಬ್ದಾರಿತನ ತೋರಿದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ನ್ಯಾಯಮೂರ್ತಿ ಬಿ.ಪಿ. ಕಟಕೆ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ತನಿಖಾ ಸಮಿತಿಯು ಸಲ್ಲಿಸಿದ ವರದಿಯಲ್ಲಿ ಇದನ್ನು ಗಂಭೀರ ಆಡಳಿತಾತ್ಮಕ ವೈಫಲ್ಯ ಎಂದು ಪರಿಗಣಿಸಲಾಗಿದೆ.
ಕಲ್ಲಿದ್ದಲು ನಾಪತ್ತೆಯಾದ ಘಟನೆಯ ಬಗ್ಗೆ ಆಡಳಿತವು ತನಿಖೆ ಆರಂಭಿಸಿದೆ; ಆದರೆ ಇಲ್ಲಿಯವರೆಗೆ ಯಾವುದೇ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ.

‘ಕಲ್ಲಿದ್ದಲು ಮಳೆಯಲ್ಲಿ ಕೊಚ್ಚಿ ಹೋಗಿರಬಹುದು !’ – ಸಚಿವರ ಆಘಾತಕಾರಿ ಹೇಳಿಕೆ

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ ನಾಯಕ ಹಾಗೂ ಮೇಘಾಲಯದ ಅಬಕಾರಿ ಸಚಿವ ಕಿರ್ಮೆನ್ ಶೈಲಾ ಅವರು, ಮೇಘಾಲಯ ದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ರಾಜ್ಯವಾಗಿದೆ. ಆದ್ದರಿಂದ, ಬಹುಶಃ ಭಾರೀ ಮಳೆಯಿಂದಾಗಿ ಈ ಕಲ್ಲಿದ್ದಲು ಅಸ್ಸಾಂ ಅಥವಾ ಬಾಂಗ್ಲಾದೇಶಕ್ಕೆ ಕೊಚ್ಚಿ ಹೋಗಿರಬಹುದು. ಇದು ನನ್ನ ಊಹೆ, ಇದರ ಬಗ್ಗೆ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.