ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅತ್ಯಾವರ್ಶಯಕತೆ ಇದೆ : ಮುಖ್ಯ ನ್ಯಾಯಮೂರ್ತಿ ಭೂಷಣ ಗವಯಿ

ವಿಳಂಬವಾಗಿ ಸಿಗುವ ನ್ಯಾಯ ಗಂಭೀರ ವಿಷಯ

ಭಾಗ್ಯನಗರ (ತೆಲಂಗಾಣ) – ಹತ್ತು ವರ್ಷಗಳಿಗೂ ಹೆಚ್ಚು ಕಾಲ ನಡೆಯುವ ಮೊಕದ್ದಮೆಗಳು ಮತ್ತು ವಿಳಂಬವಾಗಿ ಸಿಗುವ ನ್ಯಾಯವು ಗಂಭೀರ ವಿಷಯವಾಗಿದ್ದು, ಇವುಗಳಲ್ಲಿ ಬದಲಾವಣೆ ಆಗದಿದ್ದರೆ, ನಾಗರಿಕರ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಅಲುಗಾಡಬಹುದು. ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅನಿವಾರ್ಯತೆ ಇದೆ; ಏಕೆಂದರೆ ಪ್ರಸ್ತುತ ವ್ಯವಸ್ಥೆಯು ಹಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಭೂಷಣ ರಾಮಕೃಷ್ಣ ಗವಯಿ ಖಡಾಖಂಡಿತವಾಗಿ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ಗವಯಿ ಅವರು ನಗರದ ‘ನಾಲ್ಸರ್ ಕಾನೂನು ವಿಶ್ವವಿದ್ಯಾಲಯ’ದ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಗವಯಿ ಅವರು,

1. ಕೆಲವು ಪ್ರಕರಣಗಳಲ್ಲಿ ಎಷ್ಟು ವಿಳಂಬವಾಗುತ್ತಿದೆ ಎಂದರೆ, ಅವು ದಶಕಗಳವರೆಗೆ ನಡೆಯುತ್ತವೆ. ಅನೇಕ ಪ್ರಕರಣಗಳಲ್ಲಿ ಆರೋಪಿಗಳು ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುತ್ತಾರೆ ಮತ್ತು ಅಂತಿಮವಾಗಿ ಅವರನ್ನು ನಿರ್ದೋಷಿ ಎಂದು ಘೋಷಿಸಲಾಗುತ್ತದೆ. ಈ ಪರಿಸ್ಥಿತಿಯು ದುರದೃಷ್ಟಕರವಾಗಿದ್ದು, ಇದರಲ್ಲಿ ಬದಲಾವಣೆ ಆಗಬೇಕು.

2. ಭವಿಷ್ಯದಲ್ಲಿ ಈ ಪರಿಸ್ಥಿತಿ ಬದಲಾಗುವ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ. ನಮ್ಮ ದೇಶದ ನಾಗರಿಕರು ಈ ಸವಾಲುಗಳನ್ನು ಖಂಡಿತವಾಗಿಯೂ ಎದುರಿಸುತ್ತಾರೆ ಮತ್ತು ಅಗತ್ಯ ಸುಧಾರಣೆಗಳನ್ನು ತರುತ್ತಾರೆ. ಈ ಬದಲಾವಣೆಯನ್ನು ತರುವ ಜವಾಬ್ದಾರಿ ಕಾನೂನು ಅಧ್ಯಯನ ಮಾಡುತ್ತಿರುವ ಯುವ ವಿದ್ಯಾರ್ಥಿಗಳ ಮೇಲಿದೆ.

3. ವಿದ್ಯಾರ್ಥಿಗಳು ವಿದೇಶದಲ್ಲಿ ಶಿಕ್ಷಣ ಪಡೆಯಲು ಪೋಷಕರ ಮೇಲೆ ಆರ್ಥಿಕ ಹೊರೆಯನ್ನು ಹಾಕದೆ, ವಿದ್ಯಾರ್ಥಿವೇತನದ ಮಾರ್ಗವನ್ನು ಆರಿಸಿಕೊಳ್ಳಬೇಕು. ಕಾನೂನು ಕಲಿಯುವ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ‘ಯಾವ ವ್ಯಕ್ತಿ ನಿಮ್ಮ ಮೇಲೆ ಎಷ್ಟು ಪ್ರಭಾವ ಬೀರುತ್ತಾರೆ?’ ಎಂಬ ಆಧಾರದ ಮೇಲೆ ಆಯ್ಕೆ ಮಾಡದೆ, ಪ್ರಾಮಾಣಿಕತೆಯ ಆಧಾರದ ಮೇಲೆ ಗುರುಗಳನ್ನು ಆಯ್ಕೆ ಮಾಡಬೇಕು.