Uttarakhand Helicopter Crash : ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನ 5 ಜನರ ಸಾವು

ಡೆಹ್ರಾಡೂನ್ (ಉತ್ತರಾಖಂಡ) – ರಾಜ್ಯದ ಉತ್ತರಕಾಶಿಯಲ್ಲಿ ಹೆಲಿಕಾಪ್ಟರ್ ಪತನಗೊಂಡು ಐವರು ಪ್ರಯಾಣಿಕರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರಕಾಶಿಯಲ್ಲಿನ ಗಂಗನಿಯಲ್ಲಿರುವ ಭಾಗೀರಥಿ ನದಿಯ ಬಳಿ ಈ ಅಪಘಾತ ಸಂಭವಿಸಿದೆ. ಈ ಹೆಲಿಕಾಪ್ಟರ್ ಗಂಗೋತ್ರಿ ಧಾಮಕ್ಕೆ ಹೋಗುತ್ತಿತ್ತು. ಹೆಲಿಕಾಪ್ಟರ್‌ನಲ್ಲಿ 4 ಪುರುಷರು ಮತ್ತು 2 ಮಹಿಳೆಯರು ಇದ್ದರು ಎಂದು ಆಡಳಿತವು ಹೇಳಿದೆ. ಕ್ಯಾಪ್ಟನ್ ರಾಬಿನ್ ಸಿಂಗ್ ಅದರ ಪೈಲಟ್ ಇದ್ದರು. ಅಪಘಾತಕ್ಕೀಡಾದ ಹೆಲಿಕಾಪ್ಟರ್ ‘ಏರೋಟ್ರಾನ್ಸ್ ಸರ್ವಿಸ್’ ಎಂಬ ಖಾಸಗಿ ಸಂಸ್ಥೆಗೆ ಸೇರಿತ್ತು. ಇದರಲ್ಲಿನ ಪ್ರಯಾಣಿಕರು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದವರಿದ್ದರು.

ಕಳೆದ ಕೆಲವು ದಿನಗಳಿಂದ ಉತ್ತರಾಖಂಡದಲ್ಲಿ ಹವಾಮಾನ ಕೆಟ್ಟದಾಗಿದೆ. ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಮತ್ತು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಾರ್‌ಧಾಮ ಯಾತ್ರೆ ಮಾರ್ಗದಲ್ಲಿ ಹಲವೆಡೆ ಲಘು ಮಳೆಯಾಗುತ್ತಿದ್ದು, ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯು ಬಿದ್ದಿದೆ.