Pak Air Defense System Destroyed : ಭಾರತದಿಂದ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ಧ್ವಂಸ

 

  • ಆಪರೇಷನ್ ಸಿಂಧೂರ್ ಮುಂದುವರಿಕೆ !

  • ಪಾಕಿಸ್ತಾನವು ಭಾರತದ 15 ಸೇನಾ ನೆಲೆಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿಯನ್ನು ಭಾರತವು ಆಕಾಶದಲ್ಲೇ ನಾಶಪಡಿಸಿತು

  • ಭಾರತದ ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ದೊಡ್ಡ ಯಶಸ್ಸು

  • ಭಾರತವು ಪಾಕಿಸ್ತಾನದ 9 ನಗರಗಳಲ್ಲಿ ಡ್ರೋನ್‌ಗಳ ಮೂಲಕ ದಾಳಿ ನಡೆಸಿತು

ನವದೆಹಲಿ – ಭಾರತವು ಮೇ 6 ರ ರಾತ್ರಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಕ್ರಮ ಕೈಗೊಂಡ ನಂತರ, ಪಾಕಿಸ್ತಾನವು ಇದಕ್ಕೆ ಪ್ರತೀಕಾರ ತೀರಿಸಲು ಪ್ರಯತ್ನಿಸಿತು; ಆದರೆ ಭಾರತವು ಅದಕ್ಕೂ ಮುಂಚಿತವಾಗಿ ಪಾಕಿಸ್ತಾನದ ಕ್ಷಿಪಣಿಗಳನ್ನು ಆಕಾಶದಲ್ಲೇ ಧ್ವಂಸಗೊಳಿಸಿತು ಎಂದು ಭಾರತದ ರಕ್ಷಣಾ ಸಚಿವಾಲಯವು ತಿಳಿಸಿದೆ. ಮೇ 7 ರ ರಾತ್ರಿ ಪಾಕಿಸ್ತಾನವು ಭಾರತದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳ 15 ಸೇನಾ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಲು ಪ್ರಯತ್ನಿಸಿತು. ಭಾರತದ ‘ಎಸ್-400’ ಕ್ಷಿಪಣಿ ವಿರೋಧಿ ವ್ಯವಸ್ಥೆಯು ಪಾಕಿಸ್ತಾನದ ಕ್ಷಿಪಣಿಗಳನ್ನು ಆಕಾಶದಲ್ಲೇ ನಾಶಪಡಿಸಿತು. ನಂತರ ಮೇ 8 ರ ಬೆಳಿಗ್ಗೆ ಡ್ರೋನ್‌ಗಳ ಮೂಲಕ ಭಾರತವು ಪಾಕಿಸ್ತಾನದ 9 ನಗರಗಳಿಗೆ ನುಗ್ಗಿ 27 ಕಡೆಗಳಲ್ಲಿ ಪಾಕಿಸ್ತಾನದ ‘HQ-9’ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿತು. ಇದರಿಂದ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ಬಗ್ಗೆ ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ್ ಷರೀಫ್ ಅವರು ತುರ್ತು ಸಭೆ ಕರೆದಿದ್ದಾರೆ.

1. ರಕ್ಷಣಾ ಸಚಿವಾಲಯವು, ಮೇ 8 ರ ಬೆಳಿಗ್ಗೆ ಪಾಕಿಸ್ತಾನವು ನಡೆಸಿದ ದಾಳಿಯ ನಂತರ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಅನೇಕ ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್ ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಲು ‘ಹಾರ್ಪಿ ಡ್ರೋನ್’ಗಳನ್ನು ಬಳಸಿದವು. ಭಾರತದ ಕಾರ್ಯಾಚರಣೆಯನ್ನು ಪಾಕಿಸ್ತಾನದ ಪ್ರದೇಶದಲ್ಲೇ ಮತ್ತು ಅದೇ ವೇಗದಲ್ಲಿ ನಡೆಸಲಾಯಿತು.

2. ಇಸ್ಲಾಮಾಬಾದ್, ಲಾಹೋರ್, ಸಿಯಾಲ್ಕೋಟ್, ರಾವಲ್ಪಿಂಡಿ, ಗುಜ್ರಾನ್‌ವಾಲಾ, ಕರಾಚಿಯ ವಾಯು ರಕ್ಷಣಾ ವ್ಯವಸ್ಥೆ ನಾಶವಾಯಿತು. ರಾವಲ್ಪಿಂಡಿಯ ಕ್ರೀಡಾಂಗಣಕ್ಕೆ ಹಾನಿಯಾಗಿದೆ ಎಂಬ ವರದಿಯಿದೆ.

3. ಪಂಜಾಬ್‌ನ ಅಮೃತಸರದಲ್ಲಿ ಮೇ 7 ರ ರಾತ್ರಿ ಸ್ಫೋಟದ ಶಬ್ದಗಳು ಕೇಳಿಬಂದವು. ಮೇ 8 ರ ಬೆಳಿಗ್ಗೆ ಇಲ್ಲಿನ ದುಧಾಲಾ, ಜೆಠುವಾಲ್ ಮತ್ತು ಪಂಧೇರ್ ಎಂಬ 3 ಗ್ರಾಮಗಳ ಹೊಲಗಳಲ್ಲಿ ಈ ರಾಕೆಟ್‌ನ ಅವಶೇಷಗಳು ಬಿದ್ದಿರುವುದು ಕಂಡುಬಂದಿದೆ. ಈ ರಾಕೆಟ್ ಅನ್ನು ಪಾಕಿಸ್ತಾನದಿಂದ ಹಾರಿಸಲಾಗಿತ್ತು ಮತ್ತು ಭಾರತೀಯ ರಕ್ಷಣಾ ವ್ಯವಸ್ಥೆಯು ಅದನ್ನು ಹೊಡೆದುರುಳಿಸಿತ್ತು.

 

ಶ್ರೀನಗರ, ಜಮ್ಮು, ಅವಂತಿಪೋರಾ, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲೂಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಾಲ್, ಫಲೋದಿ, ಉತ್ತರ್‌ಲೈ ಮತ್ತು ಭುಜ್ ಈ 15 ಸ್ಥಳಗಳಲ್ಲಿರುವ ಭಾರತೀಯ ಸೇನಾ ನೆಲೆಗಳ ಮೇಲೆ ಪಾಕ್ ದಾಳಿ ನಡೆಸಲು ಯೋಜಿಸಿತ್ತು.

 

ರಷ್ಯಾ ಮತ್ತು ಅಮೆರಿಕಾದ ತಂತ್ರಜ್ಞಾನವನ್ನು ಕದ್ದು ಚೀನಾ ‘HQ-9’ ರಕ್ಷಣಾ ವ್ಯವಸ್ಥೆಯನ್ನು ತಯಾರಿಸಿತು.

ಭಾರತವು ನಾಶಪಡಿಸಿದ HQ-9 ವಾಯು ರಕ್ಷಣಾ ವ್ಯವಸ್ಥೆಯನ್ನು ಚೀನಾವು ರಷ್ಯಾ ಮತ್ತು ಅಮೆರಿಕಾದ ತಂತ್ರಜ್ಞಾನವನ್ನು ಕದ್ದು ತಯಾರಿಸಿದೆ. ಚೀನಾ ರಷ್ಯಾದ ಎಸ್-300 ವ್ಯವಸ್ಥೆ ಮತ್ತು ಅಮೆರಿಕಾದ ‘ಪೇಟ್ರಿಯಟ್’ ವ್ಯವಸ್ಥೆಯ ತಂತ್ರಜ್ಞಾನವನ್ನು ಕದ್ದು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. HQ-9 ರ ಮಾರಕ ಸಾಮರ್ಥ್ಯವು 120 ರಿಂದ 250 ಕಿಲೋಮೀಟರ್ ಎಂದು ಚೀನಾ ಹೇಳಿಕೊಂಡಿದೆ.

 

‘ಎಸ್-400’ ವ್ಯವಸ್ಥೆಯು 600 ಕಿ.ಮೀ. ದೂರದ ಗುರಿಯನ್ನು ನಾಶಪಡಿಸಬಲ್ಲದು!

ಭಾರತವು ರಷ್ಯಾದಿಂದ ಖರೀದಿಸಿದ ‘ಎಸ್-400’ ವಾಯು ರಕ್ಷಣಾ ವ್ಯವಸ್ಥೆಯು ಆಕಾಶದಿಂದ ಬರುವ ದಾಳಿಗಳನ್ನು ಆಕಾಶದಲ್ಲೇ ತಡೆದು ನಾಶಪಡಿಸುತ್ತದೆ. ಈ ವ್ಯವಸ್ಥೆಯ ಮೂಲಕ ಕ್ಷಿಪಣಿಗಳು, ಡ್ರೋನ್‌ಗಳು, ರಾಕೆಟ್ ಲಾಂಚರ್‌ಗಳು ಮತ್ತು ಯುದ್ಧ ವಿಮಾನಗಳ ಮೂಲಕ ನಡೆಯುವ ದಾಳಿಗಳನ್ನು ತಡೆಯಬಹುದು. ಈ ವ್ಯವಸ್ಥೆಯು 600 ಕಿ.ಮೀ. ದೂರದ ಗುರಿಯನ್ನು ಪತ್ತೆಹಚ್ಚಬಲ್ಲದು ಮತ್ತು ಅದರ ಗುರಿ ಮುಟ್ಟುವ ವ್ಯಾಪ್ತಿ 400 ಕಿ.ಮೀ. ಆಗಿದೆ. ಇದು ವಿಶ್ವದ ಅತ್ಯಂತ ಆಧುನಿಕ ವಾಯು ರಕ್ಷಣಾ ವ್ಯವಸ್ಥೆಯಾಗಿದೆ. ಭಾರತವು ಇದನ್ನು ಗಡಿಯಲ್ಲಿ ನಿಯೋಜಿಸಿದೆ.

ಹಾರ್ಪಿ ಡ್ರೋನ್ ಎಂದರೇನು?

‘ಹಾರ್ಪಿ ಡ್ರೋನ್’ ಇಸ್ರೇಲ್ ನಿರ್ಮಿತ ಮಾನವರಹಿತ ವೈಮಾನಿಕ ವಾಹನವಾಗಿದ್ದು, ಇದನ್ನು ‘ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್’ ಅಭಿವೃದ್ಧಿಪಡಿಸಿದೆ. ಇದನ್ನು ಮುಖ್ಯವಾಗಿ ಶತ್ರುಗಳ ರಾಡಾರ್ ವ್ಯವಸ್ಥೆ ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಲು ತಯಾರಿಸಲಾಗಿದೆ. ಈ ಡ್ರೋನ್ ಕಣ್ಗಾವಲು ಇಡಲು ಮತ್ತು ನಿಖರ ದಾಳಿ ನಡೆಸಲು ಸಮರ್ಥವಾಗಿದೆ, ಇದು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಪರಿಣಾಮಕಾರಿ ಅಸ್ತ್ರವಾಗಿದೆ. ಹಾರ್ಪಿ ಡ್ರೋನ್ ಅನ್ನು ‘ಫೈರ್ ಅಂಡ್ ಫರ್ಗೆಟ್ ಮಿಸೈಲ್’ ಎಂದೂ ಕರೆಯುತ್ತಾರೆ; ಏಕೆಂದರೆ ದಾಳಿ ಮಾಡಿದ ನಂತರ ಈ ಡ್ರೋನ್ ನಾಶವಾಗುತ್ತದೆ. ಭಾರತವು 2000 ರಲ್ಲಿ ಇಸ್ರೇಲ್‌ನಿಂದ ಈ ಡ್ರೋನ್‌ಗಳನ್ನು ಖರೀದಿಸಿದೆ.

ಪಂಜಾಬ್‌ನಲ್ಲಿ ಸೈನಿಕರಿಂದ ನುಸುಳುಕೋರನ ಹತ್ಯೆ

ಮೇ 7 ರ ರಾತ್ರಿ ಕತ್ತಲೆಯ ಲಾಭ ಪಡೆದು ಪಾಕಿಸ್ತಾನದಿಂದ ಭಾರತದ ಪಂಜಾಬ್‌ನ ಫಿರೋಜ್‌ಪುರ ಗಡಿಯ ಮೂಲಕ ಒಳನುಗ್ಗಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಗಡಿ ಭದ್ರತಾ ಪಡೆಯ ಸೈನಿಕರು ಗುಂಡಿಕ್ಕಿ ಕೊಂದರು.

ನೇಪಾಳ ಗಡಿಯಲ್ಲಿ 4 ಚೀನೀ ಪ್ರಜೆಗಳ ಬಂಧನ

ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ರಕ್ಸೌಲ್ ಗಡಿಯಲ್ಲಿ 4 ಚೀನೀ ಪ್ರಜೆಗಳನ್ನು ಬಂಧಿಸಲಾಗಿದೆ. ಅವರು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಅವರ ಬಳಿ ವೀಸಾ ಇರಲಿಲ್ಲ. ಸಶಸ್ತ್ರ ಗಡಿ ಪಡೆ ಅವರನ್ನು ಬಂಧಿಸಿದೆ.