‘ದಿ ರೆಸಿಸ್ಟೆನ್ಸ್ ಫ್ರಂಟ್’ ಹೆಸರನ್ನು ತೆಗೆದುಹಾಕಲು ಪಾಕಿಸ್ತಾನದ ಒತ್ತಡ!

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರಕರಣದಲ್ಲಿ ವಿಶ್ವಸಂಸ್ಥೆಯ ಖಂಡನಾ ನಿರ್ಣಯ

ನವದೆಹಲಿ – ಪಹಲ್ಗಾಮ್‌ನಲ್ಲಿನ ಭಯೋತ್ಪಾದಕ ದಾಳಿಗೆ ಕಾರಣವಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿ.ಆರ್.ಎಫ್.) ಎಂಬ ಭಯೋತ್ಪಾದಕ ಸಂಘಟನೆಯ ಹೆಸರನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಂಡನಾ ನಿರ್ಣಯದಿಂದ ತೆಗೆದುಹಾಕಲಾಗಿದೆ ಎಂದು ಪಾಕಿಸ್ತಾನದ ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ಡಾರ್ ಅವರು ಪಾಕ್ ಸಂಸತ್ತಿನಲ್ಲಿ ನಾಚಿಕೆಯಿಲ್ಲದೆ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನವು ಪ್ರಸ್ತುತ ವಿಶ್ವ ಸಂಸ್ಥೆಯ ಈ ಮಂಡಳಿಯ 10 ಸದಸ್ಯರಲ್ಲಿ ಒಂದಾಗಿದೆ. ಪ್ರತೀ 2 ವರ್ಷಗಳ ಅವಧಿಗೆ ಈ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಯಾವುದೇ ನಿರ್ಣಯವನ್ನು ಅಂಗೀಕರಿಸಬೇಕಾದರೆ, ಸದಸ್ಯ ರಾಷ್ಟ್ರಗಳ ಒಪ್ಪಿಗೆ ಅಗತ್ಯ. ಭಯೋತ್ಪಾದಕರನ್ನು ರಕ್ಷಿಸುವ ಸಲುವಾಗಿ ಪಾಕಿಸ್ತಾನವು ವಿಶ್ವ ಸಂಸ್ಥೆಯ ಈ ನಿಯಮವನ್ನು ಬಹಳ ಚತುರತೆಯಿಂದ ಬಳಸಿಕೊಂಡಿದೆ.

ಟಿ.ಆರ್.ಎಫ್. ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ಭಯೋತ್ಪಾದಕ ಸಂಘಟನೆಯಾಗಿದೆ. ಈ ಸಂಘಟನೆಯು ಪಹಲ್ಗಾಮ್‌ನಲ್ಲಿನ ಭಯೋತ್ಪಾದಕ ದಾಳಿಯ ಹೊಣೆಯನ್ನು ಮೊದಲು ಹೊತ್ತುಕೊಂಡು ನಂತರ ನಿರಾಕರಿಸಿತು. ಭಾರತವು ಈ ದಾಳಿಗೆ ಟಿ.ಆರ್.ಎಫ್. ಅನ್ನು ಅಧಿಕೃತವಾಗಿ ಇನ್ನೂ ದೂಷಿಸಿಲ್ಲ.

ಪಾಕ್ ಸಂಸತ್ತಿನಲ್ಲಿ ಇಶಾಕ್ ಡಾರ್ ಹೇಳಿದ್ದು:

1. ಪಹಲ್ಗಾಮ್‌ನಲ್ಲಿನ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಖಂಡನಾ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಮಂಡಿಸಿತ್ತು ಮತ್ತು ಅದರಲ್ಲಿ ಜಮ್ಮು-ಕಾಶ್ಮೀರದ ಉಲ್ಲೇಖವಿಲ್ಲದೆ ಕೇವಲ ಪಹಲ್ಗಾಮ್‌ನ ಉಲ್ಲೇಖವಿತ್ತು. ಇದಕ್ಕೆ ಪಾಕಿಸ್ತಾನವು ಆಕ್ಷೇಪ ವ್ಯಕ್ತಪಡಿಸಿತು. ಈ ಪ್ರಸ್ತಾವನೆಯಲ್ಲಿ ಈ ದಾಳಿಗೆ ಟಿ.ಆರ್.ಎಫ್. ಅನ್ನು ಹೊಣೆಗಾರರನ್ನಾಗಿ ಮಾಡಲಾಗಿತ್ತು. ಈ ಪ್ರಸ್ತಾವನೆಯನ್ನು ಪಾಕಿಸ್ತಾನವು ಸ್ವೀಕರಿಸಲಿಲ್ಲ ಮತ್ತು ಈ ಪ್ರಸ್ತಾಪಕ್ಕೆ ಸಹಿ ಹಾಕಲು ನಿರಾಕರಿಸಿತು.

2. ವಿಶ್ವ ಸಂಸ್ಥೆಯಲ್ಲಿನ ನಮ್ಮ ಕಾಯಂ ಪ್ರತಿನಿಧಿಗೆ ಈ ನಿರ್ಣಯವನ್ನು ವಿರೋಧಿಸಲು ಮತ್ತು ಪಹಲ್ಗಾಮ್‌ನೊಂದಿಗೆ ಜಮ್ಮು-ಕಾಶ್ಮೀರದ ಹೆಸರನ್ನು ಸೇರಿಸಲು ಹಾಗೂ ಈ ನಿರ್ಣಯದಿಂದ ಟಿ.ಆರ್.ಎಫ್. ಹೆಸರನ್ನು ತೆಗೆದುಹಾಕಲು ನಾವು ಒತ್ತಾಯಿಸಿದೆವು.

3. ಈ ಕ್ರಮದ ನಂತರ ನಮಗೆ ಅನೇಕ ದೇಶಗಳಿಂದ ದೂರವಾಣಿ ಕರೆಗಳು ಬಂದವು, ‘ನೀವು ಪ್ರಸ್ತಾವನೆಯಲ್ಲಿ ಬದಲಾವಣೆಗಳನ್ನು ಏಕೆ ಮಾಡುತ್ತಿದ್ದೀರಿ?’ ಆದರೆ ಪಾಕಿಸ್ತಾನವು ತನ್ನ ನಿಲುವಿನಲ್ಲಿ ಬದ್ಧವಾಗಿತ್ತು ಮತ್ತು ಪ್ರಸ್ತಾವನೆಯನ್ನು ಬದಲಾಯಿಸುವಂತೆ ಹೇಳಿ ಟಿ.ಆರ್.ಎಫ್. ಹೆಸರನ್ನು ತೆಗೆದುಹಾಕಿತು.

4. ಈ ದಾಳಿಯಲ್ಲಿ ಟಿ.ಆರ್.ಎಫ್. ಭಾಗಿಯಾಗಿದ್ದರೆ, ಅದಕ್ಕೆ ಪುರಾವೆಗಳೇನು? ಪುರಾವೆಗಳಿಲ್ಲದೆ ಸಂಸ್ಥೆಯ ಹೆಸರನ್ನು ಪ್ರಸ್ತಾವನೆಯಲ್ಲಿ ಸೇರಿಸಬಾರದು. ಟಿ.ಆರ್.ಎಫ್. ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

ಸಂಪಾದಕೀಯ ನಿಲುವು

  • ‘ದಿ ರೆಸಿಸ್ಟೆನ್ಸ್ ಫ್ರಂಟ್’ ಒಂದು ಭಯೋತ್ಪಾದಕ ಸಂಘಟನೆಯಾಗಿದ್ದು, ಇದುವರೆಗೆ ಕಾಶ್ಮೀರದಲ್ಲಿ ಅನೇಕ ದಾಳಿಗಳನ್ನು ನಡೆಸಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇಂತಹ ಉಗ್ರ ಸಂಘಟನೆಯ ರಕ್ಷಣೆಗೆ ಮುಂದಾಗಿರುವ ಪಾಕಿಸ್ತಾನವು ಪರೋಕ್ಷವಾಗಿ ಪಹಲ್ಗಾಮ್ ನಂತಹ ಉಗ್ರ ದಾಳಿಗಳ ಹಿಂದಿರುವುದು ಮತ್ತಷ್ಟು ಸ್ಪಷ್ಟವಾಗುತ್ತದೆ!
  • ಭಯೋತ್ಪಾದಕ ಸಂಘಟನೆಯ ಹೆಸರನ್ನು ತೆಗೆದು ಹಾಕಲು ಪಾಕಿಸ್ತಾನ ಒತ್ತಡ ಹೇರಿದ್ದಕ್ಕೆ ಮಂಡಿಯೂರಿದ ವಿಶ್ವಸಂಸ್ಥೆಯು ಎಂದಾದರೂ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಸಾಧ್ಯವೇ? ಜಿಹಾದಿ ದಾಳಿಯಲ್ಲಿ ಸಾವನ್ನಪ್ಪಿರುವ ಭಾರತೀಯರ ಬಗ್ಗೆ ವಿಶ್ವ ಸಂಸ್ಥೆಗೆ ಎಳ್ಳಷ್ಟೂ ಕಾಳಜಿಯಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! ಇಂತಹ ಸಂಸ್ಥೆಯಿಂದ ಭಾರತಕ್ಕೆ ಲಾಭವಾದರೂ ಏನು?