ರಾಜ್ಯಸಭೆಯಲ್ಲೂ ವಕ್ಫ್ ಸುಧಾರಣಾ ಮಸೂದೆ ಅಂಗೀಕಾರ

ನವದೆಹಲಿ – ಲೋಕಸಭೆಯಲ್ಲಿ ಏಪ್ರಿಲ್ 2 ರಂದು 12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ನಂತರ ರಾತ್ರಿ 2.30ಕ್ಕೆ ವಕ್ಫ್ ಸುಧಾರಣಾ ಮಸೂದೆ ಅಂಗೀಕಾರಗೊಂಡಿತು. ರಾಜ್ಯಸಭೆಯಲ್ಲಿ ಏಪ್ರಿಲ್ 3 ರಂದು 12 ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆಯ ನಂತರ ಈ ಮಸೂದೆ 128 ವಿರುದ್ಧ 95 ಮತಗಳಿಂದ ಅಂಗೀಕಾರವಾಯಿತು. ಈಗ ಈ ಮಸೂದೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮೂ ಅವರಿಗೆ ಕಳುಹಿಸಲಾಗುವುದು. ರಾಷ್ಟ್ರಪತಿ ದ್ರೌಪದಿ ಮುರ್ಮೂ ಅವರು ಈ ಮಸೂದೆಗೆ ಸಹಿ ಹಾಕಿದ ನಂತರ, ಈ ಮಸೂದೆಯು ಕಾನೂನಾಗಿ ಪರಿವರ್ತನೆಯಾಗಲಿದೆ.

ರಾಜ್ಯಸಭೆಯಲ್ಲಿ ರಾತ್ರಿ 2.30 ರ ನಂತರ ವಕ್ಫ್ ಸುಧಾರಣಾ ಮಸೂದೆ ಅಂಗೀಕಾರಗೊಂಡ ನಂತರವೂ ರಾಜ್ಯಸಭೆಯ ಕಲಾಪಗಳು ಬೆಳಿಗ್ಗೆ 4 ಗಂಟೆಯವರೆಗೆ ಮುಂದುವರೆಯಿತು. ನಂತರ ಅದನ್ನು ಮುಂದೂಡಲಾಯಿತು ಮತ್ತು ಬೆಳಗ್ಗೆ 11 ಗಂಟೆಗೆ ಕಲಾಪವನ್ನು ಪುನಃ ಪ್ರಾರಂಭಿಸಲಾಯಿತು. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕಡ್ ಅವರು ಇದೊಂದು ಅಪರೂಪದ ಘಟನೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಮಸೂದೆ ಅಂಗೀಕಾರವು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಪ್ರಯತ್ನದಲ್ಲಿ ಒಂದು ಮಹತ್ವದ ಕ್ಷಣವಾಗಿದೆ! – ಪ್ರಧಾನಿ ಮೋದಿ

ವಕ್ಫ್ ಸುಧಾರಣಾ ಮಸೂದೆ ಎರಡೂ ಸದನಗಳಲ್ಲಿ ಅಂಗೀಕಾರವಾದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ‘ಸಂಸತ್ತಿನ ಎರಡೂ ಸದನಗಳು ವಕ್ಫ್ ಸುಧಾರಣಾ ಮಸೂದೆಯನ್ನು ಅಂಗೀಕರಿಸುವುದು ಸಾಮಾಜಿಕ, ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಪ್ರಯತ್ನದಲ್ಲಿ ಒಂದು ಮಹತ್ವದ ಕ್ಷಣವಾಗಿದೆ. ಈ ಮಸೂದೆಯು ವಿಶೇಷವಾಗಿ ದೀರ್ಘಕಾಲದಿಂದ ಮೂಲೆಗುಂಪಾದ ಜನರಿಗೆ ಸಹಾಯಕವಾಗಲಿದೆ. ದಶಕಗಳಿಂದ ವಕ್ಫ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯ ಕೊರತೆಯಿತ್ತು. ಇದರಿಂದ ವಿಶೇಷವಾಗಿ ಮುಸ್ಲಿಂ ಮಹಿಳೆಯರು, ಬಡ ಮುಸ್ಲಿಮರು, ಮುಸ್ಲಿಮರ ಹಿತಕ್ಕೆ ಹಾನಿಯಾಗಿದೆ. ಸಂಸತ್ತು ಅಂಗೀಕರಿಸಿದ ಕಾನೂನುಗಳು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ ಮತ್ತು ಜನರ ಹಕ್ಕುಗಳನ್ನು ರಕ್ಷಿಸುತ್ತವೆ. ಸಂಸದೀಯ ಸಮಿತಿಯ ಚರ್ಚೆಯಲ್ಲಿ ಭಾಗವಹಿಸಿದ ಮತ್ತು ತಮ್ಮ ದೃಷ್ಟಿಕೋನವನ್ನು ಮಂಡಿಸಿದ ಹಾಗೂ ಕಾನೂನುಗಳನ್ನು ಬಲಪಡಿಸಲು ಕೊಡುಗೆ ನೀಡಿದ ಎಲ್ಲಾ ಸಂಸದೀಯ ಸದಸ್ಯರಿಗೆ ಧನ್ಯವಾದಗಳು.