ASI Completes Bhojshala Survey: ಮಧ್ಯಪ್ರದೇಶದಲ್ಲಿರುವ ಭೋಜಶಾಲೆಯ ಸಮೀಕ್ಷೆ ಪೂರ್ಣಗೊಂಡಿದೆ

ಪುರಾತತ್ವ ಇಲಾಖೆಯು ಸಮೀಕ್ಷೆಯ ವರದಿಯನ್ನು ಉಚ್ಚನ್ಯಾಯಾಲಯಕ್ಕೆ ಸಲ್ಲಿಸಲಿದೆ !

ಧಾರ (ಮಧ್ಯಪ್ರದೇಶ) – ಇಲ್ಲಿನ ಭೋಜಶಾಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆ ಪೂರ್ಣಗೊಂಡಿದೆ. ಸಮೀಕ್ಷೆಯಲ್ಲಿ ಹಿಂದೂಗಳ ದೇವತೆಗಳ ಅನೇಕ ಮೂರ್ತಿಗಳು ಸೇರಿದಂತೆ ನೂರಾರು ಅವಶೇಷಗಳು ಕಂಡುಬಂದಿವೆ. ಈ ಸಮೀಕ್ಷೆಯ ವರದಿಯನ್ನು ಈಗ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ಈ ಪ್ರಕರಣದಲ್ಲಿ ಮುಂದಿನ ವಿಚಾರಣೆಯು ಜುಲೈ 4, 2024 ರಂದು ನಡೆಯಲಿದೆ.

1. ಕಳೆದ 98 ದಿನಗಳಲ್ಲಿ ಪುರಾತತ್ವ ಇಲಾಖೆಯು ಭೋಜಶಾಲೆಯ ಪರಿಸರದಿಂದ 1710 ಅವಶೇಷಗಳನ್ನು ವಶಕ್ಕೆ ಪಡೆದಿದೆ. ಈ ಅವಶೇಷಗಳನ್ನು ಪಡೆಯಲು ಇಲಾಖೆಯು ಭೋಜಶಾಲೆಯಲ್ಲಿ 24 ಕಡೆಗಳಲ್ಲಿ ಉತ್ಖನನ ನಡೆಸಿತು. ಈ ಸಮೀಕ್ಷೆಯಲ್ಲಿ ಇಲ್ಲಿಯವರೆಗೆ ಭೋಜಶಾಲೆಯ ಪರಿಸರದಿಂದ 39 ಮೂರ್ತಿಗಳು ದೊರೆತಿವೆ. ಈ ಮೂರ್ತಿಗಳನ್ನು ಸ್ವಚ್ಛಗೊಳಿಸಿ ಅವುಗಳನ್ನು ಗುರುತಿಸಲಾಗುತ್ತಿದೆ.

2. ಸಮೀಕ್ಷೆಯಲ್ಲಿ ದೊರೆತಿರುವ ಮೂರ್ತಿಗಳು ವಾಗ್ದೇವಿ (ಸರಸ್ವತಿ), ಮಹಿಷಾಸುರ ಮರ್ದಿನಿ, ಶ್ರೀ ಗಣೇಶ, ಶ್ರೀ ಹನುಮಾನ, ಬ್ರಹ್ಮ ಮತ್ತು ಶ್ರೀ ಕೃಷ್ಣರದ್ದಾಗಿವೆ. ಇವುಗಳಲ್ಲಿ ಕೆಲವು ವಿಗ್ರಹಗಳು ಸುಸ್ಥಿತಿಯಲ್ಲಿದ್ದರೆ ಇನ್ನು ಕೆಲವು ಶಿಥಿಲಾವಸ್ಥೆಯಲ್ಲಿವೆ. ಬ್ರಹ್ಮದೇವನ ಮೂರ್ತಿಯು ಸುಸ್ಥಿತಿಯಲ್ಲಿದೆ, ಆದರೆ ದೇವಿಯ ಮೂರ್ತಿ ಭಗ್ನಗೊಂಡಿರುವ ಸ್ಥಿತಿಯಲ್ಲಿ ಸಿಕ್ಕಿದೆ. ಹಾಗೆಯೇ ಅನೇಕ ಕಂಬಗಳು ಮತ್ತು ಶಾಸನಗಳೂ ಕಂಡುಬಂದಿವೆ.

3. ನ್ಯಾಯಾಲಯದಿಂದ ಸಮೀಕ್ಷೆಗಾಗಿ ಪುರಾತತ್ವ ಇಲಾಖೆಗೆ 42 ದಿನಗಳವರೆಗೆ ಅನುಮತಿಯಿತ್ತು; ಆದರೆ ನಂತರ ಅದನ್ನು ಹೆಚ್ಚಿಸಲಾಯಿತು.

4. ಪುರಾತತ್ವ ಇಲಾಖೆಯು ನ್ಯಾಯಾಲಯದಲ್ಲಿ ಸಾದರಪಡಿಸಿರುವ ವರದಿಯಲ್ಲಿ ತಜ್ಞರ ಅಭಿಪ್ರಾಯಗಳೊಂದಿಗೆ ಅವಶೇಷಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಸಮೀಕ್ಷೆಯ ಸಮಯದಲ್ಲಿ, ‘ಕಾರ್ಬನ್ ಡೇಟಿಂಗ್’ (ವಸ್ತು ಎಷ್ಟು ಹಳೆಯದು ಎಂಬುದನ್ನು ನಿರ್ಧರಿಸಲು ನಡೆಸಲಾಗುವ ಪರೀಕ್ಷೆ) ಮಾಡಲಾಗಿದ್ದು, ಈ ವಿಷಯದಲ್ಲಿ ಪ್ರತ್ಯೇಕ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.

5. ಸಮೀಕ್ಷೆಯ ಸಮಯದಲ್ಲಿ ಮುಸಲ್ಮಾನ ಪಕ್ಷದವರು ಪುರಾತತ್ವ ಇಲಾಖೆಯು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿರುವ ಬಗ್ಗೆ ಆರೋಪಿಸಿದ್ದಾರೆ.

6. ಸಮೀಕ್ಷೆಯ ಸಮಯದಲ್ಲಿ ಭೋಜಶಾಲೆಯನ್ನು ಪ್ರವಾಸಿಗರಿಗಾಗಿ ಮುಚ್ಚಲಾಗಿತ್ತು ಮತ್ತು ಅದನ್ನು ಈಗಲೂ ಮುಚ್ಚಿಯೇ ಇಡಲಾಗುವುದು. ಕೇವಲ ಮಂಗಳವಾರದಂದು ಹಿಂದೂ ಪಕ್ಷದವರಿಗೆ ಪೂಜೆ ಮಾಡಲು ಮತ್ತು ಶುಕ್ರವಾರ ಮುಸ್ಲಿಮರಿಗೆ ನಮಾಜ್ ಮಾಡಲು ಅವಕಾಶ ನೀಡಲಾಗಿದೆ.

7. ಮಾರ್ಚ್ 11, 2024 ರಂದು ಮಧ್ಯಪ್ರದೇಶದ ಉಚ್ಚನ್ಯಾಯಾಲಯವು ಭೋಜಶಾಲೆಯ ಸಮೀಕ್ಷೆ ನಡೆಸಲು ಪುರಾತತ್ವ ಇಲಾಖೆಗೆ ಆದೇಶಿಸಿತ್ತು. ಭೋಜಶಾಲೆಯು ಶ್ರೀ ಸರಸ್ವತಿ ದೇವಿಯ ದೇವಾಲಯವಾಗಿದೆ. ಇದನ್ನು 1000-1055 ರ ಕಾಲದಲ್ಲಿ ಭೋಜ ರಾಜನು ನಿರ್ಮಿಸಿದ್ದನು. ಕೆಲವು ಶತಮಾನಗಳ ಹಿಂದೆ, ಮೊಗಲರು ದಾಳಿ ನಡೆಸಿ ಇಲ್ಲಿ ಮೌಲಾನಾ ಕಮಾಲುದ್ದೀನ (ಅವನ ಮೇಲೆ ಅನೇಕ ಹಿಂದೂಗಳನ್ನು ಮೋಸದಿಂದ ಮುಸಲ್ಮಾನರನ್ನಾಗಿ ಮಾಡಿರುವ ಆರೋಪವಿದೆ) ಗೋರಿ ಕಟ್ಟಿದರು. ಆನಂತರ ಮುಸಲ್ಮಾನರು ಇಲ್ಲಿಗೆ ಬಂದು ನಮಾಜ ಪಠಣ ಮಾಡಲು ಪ್ರಾರಂಭಿಸಿದರು.