Kerala to Keralam: ‘ಕೇರಳ’ ದ ಹೆಸರನ್ನು `ಕೇರಳಮ್’ ಎಂದು ಬದಲಾಯಿಸುವ ಮಸೂದೆಗೆ ವಿಧಾನಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ !

ತಿರುವನಂತಪುರಂ (ಕೇರಳ) – ಕೇರಳ ರಾಜ್ಯದ ಹೆಸರನ್ನು ಬದಲಾಯಿಸಿ` ಕೇರಳಮ್’ ಎಂದು ಮರುನಾಮಕರಣ ಮಾಡಬೇಕು ಎಂಬ ಬೇಡಿಕೆಯ ಮಸೂದೆಯನ್ನು ಕೇರಳ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ. ರಾಜ್ಯದ ಹೆಸರನ್ನು ಕೇರಳಮ್ ಮಾಡಬೇಕು ಎಂಬುದು ಕೇರಳದ ಎಲ್ಲಾ ರಾಜಕೀಯ ಪಕ್ಷಗಳ ಬೇಡಿಕೆಯಾಗಿದೆ. ಈ ಬೇಡಿಕೆಗೆ ಯಾರ ವಿರೋಧವೂ ಇಲ್ಲ. ಕಳೆದ ವರ್ಷವೂ ಇಂತಹ ಮಸೂದೆಯನ್ನು ಅಂಗೀಕರಿಸಲಾಗಿತ್ತು, ಹಾಗೆಯೇ ‘ರಾಜ್ಯದ ಹೆಸರನ್ನು ಬದಲಾಯಿಸಬೇಕು’ ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿತ್ತು.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನರವರು ಮಸೂದೆಯನ್ನು ಮಂಡಿಸುವಾಗ, ಮಲಯಾಳಂ ಭಾಷೆಯಲ್ಲಿ ನಮ್ಮ ರಾಜ್ಯದ ಹೆಸರು `ಕೇರಳಮ್’ ಎಂದು ಇದೆ; ಆದರೆ ಸಂವಿಧಾನದಲ್ಲಿ ಮೊದಲ ಅನುಸೂಚಿಯಲ್ಲಿ ಮಾತ್ರ ರಾಜ್ಯದ ಹೆಸರನ್ನು ‘ಕೇರಳ’ ಎಂದು ನಮೂದಿಸಲಾಗಿದೆ. ಆದುದರಿಂದ, ರಾಜ್ಯದ ಈ ವಿಧಾನಸಭೆಯು ಒಮ್ಮತದಿಂದ ಕೇಂದ್ರ ಸರಕಾರಕ್ಕೆ `ಸಂವಿಧಾನದ ಕಲಂ 3 ರ ಅನುಸಾರ ತಕ್ಷಣ ಕ್ರಮ ಕೈಕೊಂಡು ರಾಜ್ಯದ ಹೆಸರನ್ನು ‘ಕೇರಳಮ್’ ಎಂದು ಬದಲಾಯಿಸಬೇಕು’ ಎಂದು ವಿನಂತಿಸುತ್ತದೆ ಎಂದು ಹೇಳಿದ್ದಾರೆ.

ಏಕೆ ‘ಕೇರಳಮ್’ ಎಂಬ ಹೆಸರು ?

ಸಾಮ್ರಾಟ ಅಶೋಕನ ಪ್ರಮುಖ 14 ಶಿಲಾಶಾಸನಗಳಲ್ಲಿ ಎರಡನೇ ಶಿಲಾಶಾಸನದಲ್ಲಿ ‘ಕೇರಳಮ್’ ಎಂಬ ಉಲ್ಲೇಖ ಕಂಡುಬರುತ್ತದೆ. ಇದು ಕ್ರಿ.ಪೂ 257 ರ ಹಿಂದಿನ ಶಿಲಾಶಾಸನವಾಗಿದೆ. ಈ ಶಿಲಾಶಾಸನದ ಮೇಲೆ ‘ಕೇತಳಪುತ್ರ’ (ಕೇರಳಪುತ್ರ) ಎಂಬ ಪದವನ್ನು ನಮೂದಿಸಲಾಗಿದೆ. ‘ಕೇರಳಪುತ್ರ’ ಎಂಬ ಸಂಸ್ಕೃತ ಪದದ ಅರ್ಥವು ‘ಕೇರಳದ ಸುಪುತ್ರ’ ಎಂದು ಆಗುತ್ತದೆ. ಇದರಲ್ಲಿ ಚೇರಾ ರಾಜವಂಶದ ಸಂದರ್ಭವನ್ನು ನೀಡಲಾಗಿದೆ. ‘ಚೇರಾ’ವು ದಕ್ಷಿಣ ಭಾರತದ ಮೂರು ಪ್ರಮುಖ ರಾಜವಂಶಗಳಲ್ಲಿ ಒಂದಾಗಿದೆ. ಜರ್ಮನ ಭಾಷಾಶಾಸ್ತ್ರಜ್ಞರಾದ ಡಾ.ಹರ್ಮನ್ ಗುಂಡರ್ಟ್ ರವರು ‘ಚೇರಮ್’ನ್ನು ಕನ್ನಡದಲ್ಲಿ ‘ಕೇರಮ್’ ಪದದಂತೆಯೇ ಬಳಸಲಾಗುತ್ತಿತ್ತು, ಎಂದು ನಮೂದಿಸಿದ್ದಾರೆ. ಕರ್ನಾಟಕದ ಗೋಕರ್ಣ ಮತ್ತು ತಮಿಳುನಾಡಿನ ಕನ್ಯಾಕುಮಾರಿಯ ನಡುವಿನ ಕರಾವಳಿ ಪ್ರದೇಶವನ್ನು ಉಲ್ಲೇಖಿಸಲು ಈ ಶಬ್ದವನ್ನು ಬಳಸಲಾಗುತ್ತಿತ್ತು. ಬಹುಶಃ ಈ ಪದದ ಉತ್ಪತ್ತಿಯು `ಚೇರ’ ಎಂಬ ಪದದಿಂದಲೇ ಆಗಿರಬಹುದು, ಎಂದು ಭಾಷಾಶಾಸ್ತ್ರಜ್ಞರ ಊಹೆಯಾಗಿದೆ. ‘ಚೆರ’ ಈ ಪದದ ತಮಿಳು ಭಾಷೆಯಲ್ಲಿನ ಹಳೆಯ ಅರ್ಥವು ‘ಸೇರಿಸುವುದು’ ಎಂದಾಗಿದೆ.

ಹೆಸರು ಬದಲಾಯಿಸುವ ಪ್ರಕ್ರಿಯೆ!

ಯಾವುದೇ ರಾಜ್ಯದ ಅಥವಾ ನಗರದ ಹೆಸರನ್ನು ಬದಲಾಯಿಸಲು, ಮೊದಲು ಕೇಂದ್ರದ ಗೃಹ ಮಂತ್ರಾಲಯದಿಂದ ಅನುಮೋದನೆ ಪಡೆಯುವುದು ಅಗತ್ಯವಾಗಿರುತ್ತದೆ ಹಾಗೆಯೇ ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿಯ ಪ್ರಕ್ರಿಯೆಯನ್ನು ನಡೆಸಬೇಕಾಗುತ್ತದೆ. ಇದಕ್ಕಾಗಿ ರಾಜ್ಯದ ಹೆಸರನ್ನು ಬದಲಾಯಿಸುವ ಮನವಿಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಬೇಕಾಗುತ್ತದೆ. ಅನಂತರ ದೇಶದ ರೈಲ್ವೆ ಮಂತ್ರಾಲಯ, ಗುಪ್ತಚರ ಇಲಾಖೆ, ಅಂಚೆ ಇಲಾಖೆ, ಭಾರತೀಯ ಸಮೀಕ್ಷಾ ವಿಭಾಗ ಇತ್ಯಾದಿ ಇಲಾಖೆಗಳು ‘ನಿರಪೆಕ್ಷಣಾ ಪ್ರಮಾಣ ಪತ್ರ’ವನ್ನು ನೀಡಿದ ನಂತರವೇ ಕೇಂದ್ರ ಗೃಹಮಂತ್ರಾಲಯವು ರಾಜ್ಯದ ಹೆಸರನ್ನು ಬದಲಾಯಿಸಲು ಸಮ್ಮತಿಸುತ್ತದೆ.