ಶ್ರೀರಾಮಮೂರ್ತಿಯ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಪ್ರಗತಿಪರರ ವಿರೋಧ ಹಾಗೂ ನ್ಯಾಯಾಲಯಗಳ ತೀರ್ಪು !

೧. ಶ್ರೀರಾಮಮೂರ್ತಿಯ ಪ್ರಾಣಪ್ರತಿಷ್ಠೆಯ ನಿಮಿತ್ತ ನೀಡಿದ ಸಾರ್ವಜನಿಕ ರಜೆಯ ವಿರುದ್ಧ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

‘೨೨.೧.೨೦೨೪ ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಉದ್ಘಾಟನೆ ಹಾಗೂ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭ ಇತ್ತು. ಅದರ ನಿಮಿತ್ತ ಮಹಾರಾಷ್ಟ್ರ ಸರಕಾರ ಸಾರ್ವಜನಿಕ ರಜೆಯನ್ನು ನೀಡಿತ್ತು. ಈ ರಜೆಯನ್ನು ರದ್ದುಪಡಿಸಬೇಕೆಂದು ‘ಕಾನೂನು ಮಹಾವಿದ್ಯಾಲಯದ ನಾಲ್ಕು ವಿದ್ಯಾರ್ಥಿಗಳು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿಅರ್ಜಿಯನ್ನು ದಾಖಲಿಸಿದ್ದರು. ಈ ಅರ್ಜಿಯಲ್ಲಿ ಆ ವಿದ್ಯಾರ್ಥಿಗಳು, ‘ಭಾರತ ಹಾಗೂ ಮಹಾರಾಷ್ಟ್ರ ರಾಜ್ಯ ಇವು ಜಾತ್ಯತೀತ ತತ್ತ್ವಕ್ಕೆ ಬದ್ಧವಾಗಿವೆ. ಆದ್ದರಿಂದ ಹಿಂದೂ ಮಂದಿರದ ಲೋಕಾರ್ಪಣೆಯ ನಿಮಿತ್ತ ಸರಕಾರ ಸಮಾರಂಭವನ್ನು ಆಚರಿಸುವುದು ಹಾಗೂ ವಿಶಿಷ್ಟ ಧರ್ಮದೊಂದಿಗೆ ತನ್ನನ್ನು ಜೋಡಿಸಿಕೊಳ್ಳುವುದು, ಇದು ಜಾತ್ಯತೀತತತ್ತ್ವಕ್ಕೆ ಆಘಾತ ಮಾಡಿದಂತಾಗುತ್ತದೆ. ಇಂತಹ ರಜೆಯನ್ನು ಯಾವುದಾದರೂ ದೇಶಭಕ್ತ ಅಥವಾ ಐತಿಹಾಸಿಕ ಮಹಾಪುರುಷರಿಗಾಗಿ ಕೊಡುತ್ತಿದ್ದರೆ ಅದು ಯೋಗ್ಯವೆನಿಸುತ್ತಿತ್ತು; ಆದರೆ ಸದ್ಯ ನೀಡಿರುವ ಕಾರಣ, ತಮ್ಮ ಮನಸ್ಸಿಗೆ ಬಂದಂತೆ ಮಾಡಿದಂತಿದೆ. ಇಂತಹ ನಿರ್ಣಯ ತೆಗೆದುಕೊಳ್ಳಲು ಮಹಾರಾಷ್ಟ್ರ ಸರಕಾರಕ್ಕೆ ಅಧಿಕಾರವಿಲ್ಲ’ ಎಂದು ಹೇಳಿದ್ದರು.

೨. ಅರ್ಜಿದಾರರಿಗೆ ಎಚ್ಚರಿಕೆ ನೀಡಿ ಅರ್ಜಿಯನ್ನು ತಳ್ಳಿ ಹಾಕಿದ ಮುಂಬಯಿ ಉಚ್ಚ ನ್ಯಾಯಾಲಯ !

ರವಿವಾರ ರಜೆ ಇದ್ದರೂ ವಿಶೇಷ ನ್ಯಾಯಾಲಯ ಕರೆದು ಈ ಅರ್ಜಿಯ ಆಲಿಕೆಯನ್ನು ಮಾಡಲಾಯಿತು. ದ್ವಿಸದಸ್ಯಪೀಠದ ಮುಂದೆ ಈ ಆಲಿಕೆ ನಡೆಯಿತು. ಇದರಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು, “ಅರ್ಜಿಯಲ್ಲಿನ ಈ ಆರೋಪ ಗಂಭೀರ ಸ್ವರೂಪದ್ದಾಗಿದೆ. ಇಂತಹ ಅರ್ಜಿ ಅಥವಾ ಅದರಲ್ಲಿನ ಲೇಖನವನ್ನು ಓದಿ ನಮಗೆ ಒಂದು ರೀತಿಯ ಆಘಾತವಾಯಿತು. ಕಾನೂನಿನ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಈ ರೀತಿಯಲ್ಲಿ ವಿಚಾರ ಮಾಡಬಹುದೆಂದು ನಮಗೆ ವಿಶ್ವಾಸವೇ ಆಗುವುದಿಲ್ಲ. ಇದು ಅವರ ಕಲ್ಪನಾಶಕ್ತಿಗೆ ಎಟಕುವ ವಿಷಯವಲ್ಲ. ಈ ಅರ್ಜಿ ನಿರರ್ಥಕ ಹಾಗೂ ತಪ್ಪಾಗಿದ್ದು ನಾವು ಅದನ್ನು ತಳ್ಳಿ ಹಾಕುತ್ತಿದ್ದೇವೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಇಂತಹ ರೀತಿಯ ಅರ್ಜಿಯನ್ನು ಸಲ್ಲಿಸಬಾರದು, ಎಂದು ಅವರಿಗೆ ಎಚ್ಚರಿಕೆ ನೀಡುತ್ತೇವೆ. ನ್ಯಾಯಾಲಯಕ್ಕೆ ಬರುವಾಗ ಸ್ವಚ್ಛ ಕೈಯಿಂದಲೇ ಬರಬೇಕು, ಅಷ್ಟೇ ಅಲ್ಲ, ಸ್ವಚ್ಛ ಮನಸ್ಸಿನಿಂದಲೂ ಬರಬೇಕಾಗುತ್ತದೆ, ಎಂಬುದನ್ನು ಅರ್ಜಿದಾರರು ಗಮನದಲ್ಲಿಡಬೇಕು. ರಜೆ ಘೋಷಣೆ ಮಾಡುವುದು ಸರಕಾರದ ಧೋರಣಾತ್ಮಕ ಅಧಿಕಾರವಾಗಿದೆ. ಕೇವಲ ಶ್ರೀರಾಮಮಂದಿರ ಪ್ರಾಣಪ್ರತಿಷ್ಠೆಯ ನಿಮಿತ್ತ ನೀಡಿದ ರಜೆ ಇದು ಮನಸ್ಸಿಗೆ ಬಂದಂತೆ ಮಾಡುವುದು ಆಗಿರಲು ಸಾಧ್ಯವಿಲ್ಲ” ಎಂದು ಹೇಳಿತು.

೩. ಹಿಂದೂದ್ವೇಷಿ ಪ್ರಗತಿಪರರ ಹೊಟ್ಟೆನೋವು

ಒಟ್ಟಾರೆ ಈ ವಿಷಯವನ್ನು ಪ್ರಗತಿಪರರು, ನಿರೀಶ್ವರವಾದಿಗಳು ಮತ್ತು ಜಾತ್ಯತೀತವಾದಿಗಳು ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಸಮಾರಂಭ ನಿಶ್ಚಿತವಾದಾಗಿನಿಂದಲೇ ಅವರ ಕೂಗಾಟ ಆರಂಭವಾಗಿತ್ತು. ಅವರು ವಿವಿಧ ಕಾರಣಗಳಿಂದ ಸರಕಾರವನ್ನು ಟೀಕಿಸಲು ಆರಂಭಿಸಿದ್ದರು. ಈ ವಿಷಯದಲ್ಲಿ ಅವರು ನಾಲ್ಕೂ ಶಂಕರಾಚಾರ್ಯರ ಅಭಿಪ್ರಾಯಗಳನ್ನು ಸರಕಾರದ ಅಭಿಪ್ರಾಯದ ವಿರುದ್ಧ ಅಥವಾ ಲೋಕಾರ್ಪಣೆಯ ಸಮಾರಂಭದ ವಿರುದ್ಧವಿದೆ ಎಂಬ ಚಿತ್ರಣವನ್ನು ಮುಂದಿಟ್ಟರು. ಮೂಲದಲ್ಲಿ ನಾಲ್ವರಲ್ಲಿ ೩ ಶಂಕರಾಚಾರ್ಯರು ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿರುವಾಗ ಪ್ರಾಣಪ್ರತಿಷ್ಠೆಯನ್ನು ಮಾಡಬಹುದು ಹಾಗೂ ಅದಕ್ಕೆ ವೇದಗಳ ಸಮ್ಮತಿ ಇದೆ, ಎಂದು ಒಮ್ಮತದಿಂದ ಹೇಳಿದರು. ಅದೇ ರೀತಿ ಪುಷ್ಯ ಮಾಸದ ಕಾರಣವೂ ತಪ್ಪಾಗಿದೆ ಎಂದು ಒಮ್ಮತದಿಂದ ಹೇಳಿದರು. ‘ಲೋಕಸಭಾ ಚುನಾವಣೆಯ ಮೇಲೆ ದೃಷ್ಟಿಯನ್ನಿಟ್ಟು ಹಿಂದೂಗಳ ಮತ ಗಳಿಸಲು ಭಾಜಪ ಹಾಗೂ ಸಂಘಪರಿವಾರ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ’, ಎಂಬ ಅಪಪ್ರಚಾರವನ್ನೂ ಹಿಂದೂಗಳು ತಳ್ಳಿ ಹಾಕಿದರು. ಈ ಸಮಾರಂಭದಲ್ಲಿ ಅಡಚಣೆಗಳನ್ನುಂಟು ಮಾಡಲು ಮದ್ರಾಸ್ ಹಾಗೂ ಮುಂಬಯಿ ಉಚ್ಚ ನ್ಯಾಯಾಲಯಗಳಲ್ಲಿ ವಿವಿಧ ರೀತಿಯ ಅರ್ಜಿಗಳನ್ನು ಸಲ್ಲಿಸಲಾಯಿತು. ಒಟ್ಟಾರೆ ಹಿಂದೂದ್ವೇಷಿಗಳಲ್ಲಿ ಹಿಂದೂದ್ವೇಷ ಉಕ್ಕಿ ಬಂದಿತ್ತು. ಈ ಜನರ ‘ಇಕೋಸಿಸ್ಟಮ್’ (ವಿರೋಧಿಗಳ ತಂತ್ರಾಂಶ) ಹೇಗೆ ಕಾರ್ಯನಿರತವಾಗಿರುತ್ತದೆ, ಎಂಬುದು ನಿತ್ಯದಂತೆ ಇಲ್ಲಿಯೂ ಅನುಭವಿಸಲು ಸಿಕ್ಕಿತು. ದೇವರ ದಯೆಯಿಂದ ಈ ಬಾರಿ ಅವರಿಗೆ ನ್ಯಾಯಾಲಯದಿಂದ ಯಾವುದೇ ಲಾಭ ಸಿಗಲಿಲ್ಲ. ತದ್ವಿರುದ್ಧ ಇವರು ನಿರರ್ಥಕ ಹಾಗೂ ದ್ವೇಷದಿಂದ ಅರ್ಜಿಗಳನ್ನು ದಾಖಲಿಸಿದ್ದಾರೆ, ಎಂಬುದು ೨-೩ ನಿರ್ಣಯಗಳಿಂದ ಗಮನಕ್ಕೆ ಬಂದಿತು.

೪. ಶ್ರೀರಾಮಮೂರ್ತಿ ಪ್ರಾಣಪ್ರತಿಷ್ಠಾಪನೆ ಸಮಾರಂಭದ ನಿಮಿತ್ತ ಸಾರ್ವಜನಿಕ ಉತ್ಸವಕ್ಕೆ ತಮಿಳುನಾಡಿನಲ್ಲಿ ನಿರ್ಬಂಧ ಹೇರಿದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಶ್ರೀರಾಮಮೂರ್ತಿ ಪ್ರಾಣಪ್ರತಿಷ್ಠಾಪನೆ ಸಮಾರಂಭದ ನಿಮಿತ್ತ ತಮಿಳುನಾಡಿನಲ್ಲಿ ಸಾಮೂಹಿಕ ಪೂಜೆಗಳನ್ನು ಮಾಡುವುದು, ಮೆರವಣಿಗೆಗಳನ್ನು ತೆಗೆಯುವುದು, ಭಜನೆಗಳನ್ನು ಹಾಡುವುದು, ಕಾರ್ಯಕ್ರಮದ ನೇರ ಪ್ರಸಾರ ಇತ್ಯಾದಿಗಳಿಗೆ ತಮಿಳುನಾಡು ಸರಕಾರ ಅಘೋಷಿತ ನಿರ್ಬಂಧ ಹೇರಿತ್ತು. ಈ ನಿರ್ಬಂಧದ ವಿರುದ್ಧ ಕೆಲವು ಹಿಂದೂಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಅನಂತರ ಸರ್ವೋಚ್ಚ ನ್ಯಾಯಾಲಯ ತಮಿಳುನಾಡು ಸರಕಾರಕ್ಕೆ ನೋಟೀಸ್ ನೀಡಿ ಅಭಿಪ್ರಾಯವನ್ನು ಕೇಳಿತು. ತಮಿಳುನಾಡು ಸರಕಾರದ ಮಹಾನ್ಯಾಯವಾದಿ ನ್ಯಾಯಾಲಯದ ಮುಂದೆ, ‘ಇಂತಹ ಯಾವುದೇ ಅಲಿಖಿತ ಆದೇಶ ಅಥವಾ ನಿರ್ಣಯ ತೆಗೆದುಕೊಂಡಿಲ್ಲ, ಆದರೆ ಶ್ರೀರಾಮಮಂದಿರ ಪ್ರತಿಷ್ಠಾಪನೆಯ ನಿಮಿತ್ತ ಮಸೀದಿಯ ಎದುರಿಗೆ ಮೆರವಣಿಗೆ ನಡೆಸುವುದು, ಹಾಗೂ ಕಾನೂನು ಹಾಗೂ ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡುವುದನ್ನು ಸರಕಾರ ಪ್ರೋತ್ಸಾಹಿಸುವುದಿಲ್ಲ’ ಎಂದು ಹೇಳಿತು.

೫. ತಮಿಳುನಾಡು ಸರಕಾರದ ನಿಲುವನ್ನು ಅಮಾನ್ಯಗೊಳಿಸಿದ ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯ ತಮಿಳುನಾಡು ಸರಕಾರದ ಈ ನಿಲುವನ್ನು ನಿರಾಕರಿಸಿತು. ಅದಕ್ಕೆ ಸ್ಪಷ್ಟವಾಗಿ, ‘ಶ್ರೀರಾಮಮಂದಿರದ ಲೋಕಾರ್ಪಣೆ ಸಮಾರಂಭವನ್ನು ನೇರವಾಗಿ ಪ್ರಕ್ಷೇಪಣೆ ಮಾಡ ದಂತೆ ತಮಿಳುನಾಡು ಸರಕಾರ ನಿರ್ಬಂಧ ಹೇರುವ ಹಾಗಿಲ್ಲ. ಮೆರವಣಿಗೆ ನಡೆಸುವುದು, ಪೂಜೆ ಮಾಡುವುದು ಹಾಗೂ ಮಂದಿರಗಳಲ್ಲಿ ಉತ್ಸವ ಮಾಡುವುದು, ಇದು ಹಿಂದೂಗಳ ಅಧಿಕಾರವಾಗಿದೆ. ಮೆರವಣಿಗೆ ಯಾವ ಮಾರ್ಗದಲ್ಲಿ ಹಾಗೂ ಹೇಗೆ ತೆಗೆಯಬೇಕು, ಎಂಬುದನ್ನು ಆಡಳಿತ ನಿರ್ಧರಿಸಬಹುದು; ಆದರೆ ಕೇವಲ ಮಸೀದಿಯ ಭಯವನ್ನು ಹುಟ್ಟಿಸಿ ಇಂತಹ ನಿರ್ಬಂಧ ಹೇರಲು ಸಾಧ್ಯವಿಲ್ಲ’ ಎಂದು ಹೇಳಿತು. ಕೊನೆಗೆ ತಮಿಳುನಾಡಿನ ಮಹಾನ್ಯಾಯವಾದಿ, ‘ರಾಜ್ಯ ಸರಕಾರ ಪೂಜೆ, ಭಜನೆ, ಹಾಡು, ಮೆರವಣಿಗೆ ಅಥವಾ ಮಂದಿರದಲ್ಲಿ ನಡೆಯುವ ಸಾಮೂಹಿಕ ಕಾರ್ಯಕ್ರಮಗಳ ಮೇಲೆ ಯಾವುದೇ ನಿರ್ಬಂಧ ಹಾಕಿಲ್ಲ’ ಎಂದು ಹೇಳಬೇಕಾಯಿತು.

ಸಾಮ್ರಾಟ ವಿಕ್ರಮಾದಿತ್ಯರು ಶ್ರೀರಾಮಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮಮಂದಿರವನ್ನು ನಿರ್ಮಿಸಿದ್ದರು. ಮತಾಂಧ ಆಕ್ರಮಣಕಾರರು ಅದನ್ನು ಕೆಡವಿ ಅದರ ಮೇಲೆ ಬಾಬರಿಯ ಕಟ್ಟಡವನ್ನು ನಿರ್ಮಿಸಿದ್ದರು. ಅದರ ವಿರುದ್ಧ ಹಿಂದೂಗಳು ಕಳೆದ ೫೦೦ ವರ್ಷ ಸಂಘರ್ಷ ಮಾಡಿ ಅದರಲ್ಲಿ ವಿಜಯವನ್ನು ಗಳಿಸಿದರು, ಆದ್ದರಿಂದ ಲೋಕಾರ್ಪಣೆ ಸಮಾರಂಭ ಭವ್ಯ ದಿವ್ಯ ಮತ್ತು ಶ್ರೀರಾಮನಂತಹ ರಾಜನ ಅರ್ಹತೆಗೆ ತಕ್ಕಂತೆ ಇರಬೇಕು ಎಂದು ಹಿಂದೂಗಳಿಗೆ ಅನಿಸಿದರೆ, ಅದರಲ್ಲಿ ತಪ್ಪೇನಿದೆ ?’

(೨೨.೧.೨೦೨೪)

|| ಶ್ರೀಕೃಷ್ಣಾರ್ಪಣಮಸ್ತು ||

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬೈ ಉಚ್ಚ ನ್ಯಾಯಾಲಯ