ಇಂದು ಆಶ್ವಯುಜ ಹುಣ್ಣಿಮೆಯ ಖಂಡಗ್ರಾಸ ಚಂದ್ರಗ್ರಹಣದ ರಾಶಿ ಫಲ

ಇಂದು ಭಾರತ ಸೇರಿ ಎಲ್ಲಡೆ ಖಂಡಗ್ರಾಸ ಚಂದ್ರಗ್ರಹಣ ಗೋಚರಿಸಲಿದೆ. (ಸೂರ್ಯ ಮತ್ತು ಚಂದ್ರನ ನಡುವೆ ಪೃಥ್ವಿ ಬಂದಾಗ ಚಂದ್ರನು ಪೃಥ್ವಿಯ ನೆರಳಿನಲ್ಲಿ ಬಂದು ಚಂದ್ರಗ್ರಹಣ ಕಾಣಿಸುತ್ತದೆ. ಚಂದ್ರನ ಸ್ವಲ್ಪವೇ ಭಾಗ ಪೃಥ್ವಿಯ ನೆರಳಿನಲ್ಲಿದ್ದರೆ ಆ ಭಾಗಶಃ ಗ್ರಹಣವನ್ನು ಖಂಡಗ್ರಾಸ ಚಂದ್ರಗ್ರಹಣ [partial lunar eclipse] ಎನ್ನುತ್ತಾರೆ. ಇಂತಹ ಸಮಯದಲ್ಲಿ ರಕ್ತಚಂದ್ರ ಗೋಚರಿಸುತ್ತದೆ.)

೧. ಭಾರತದಾದ್ಯಂತ ಗೋಚರಿಸಲಿದೆ ಖಂಡಗ್ರಾಸ ಚಂದ್ರಗ್ರಹಣ

ಈ ಗ್ರಹಣವು ಭಾರತದಾದ್ಯಂತ ಮಾತ್ರವಲ್ಲ ಏಷ್ಯಾ ಖಂಡ, ಯುರೋಪ್, ಆಫ್ರಿಕಾ ಖಂಡ, ರಶಿಯಾ, ಆಸ್ಟ್ರೇಲಿಯಾದಲ್ಲಿಯೂ ಗೋಚರಿಸಲಿದೆ.

೨. ಗ್ರಹಣದ ವೇಧಕಾಲ

ವೇಧಕಾಲದ ಅರ್ಥ

ಗ್ರಹಣದ ಮೊದಲು ಚಂದ್ರನು ಪೃಥ್ವಿಯ ನೆರಳಿನಲ್ಲಿ ಬರುವುದರಿಂದ ಚಂದ್ರನ ಪ್ರಕಾಶವು ನಿಧಾನವಾಗಿ ಕ್ಷೀಣಿಸುತ್ತದೆ. ಇದನ್ನೇ ‘ವೇಧ’ ಎಂದು ಕರೆಯುತ್ತಾರೆ.

ಅ. ಅವಧಿ : ಈ ಚಂದ್ರಗ್ರಹಣವು ರಾತ್ರಿಯ 3ನೇ ಪ್ರಹರದಲ್ಲಿ ಇರುವುದರಿಂದ ಅದಕ್ಕಿಂತ 3 ಪ್ರಹರ ಮೊದಲು, ಅಂದರೆ ಶನಿವಾರ 28.10.2023 ರಂದು ಮಧ್ಯಾಹ್ನ 3.14 ಗಂಟೆಯಿಂದ ವೇಧಕಾಲದ ನಿಯಮಗಳನ್ನು ಪಾಲಿಸಬೇಕು.

(ಒಂದು ಪ್ರಹರ ಎಂದರೆ 3 ಗಂಟೆಗಳ ಸಮಯ. ಒಂದು ದಿನದಲ್ಲಿ 4 ಪ್ರಹರ ಮತ್ತು ಒಂದು ರಾತ್ರಿಯಲ್ಲಿ 4 ಪ್ರಹರಗಳು ಇರುತ್ತವೆ.)

ಆ. ಮಕ್ಕಳು, ವೃದ್ಧರು, ನಿಶ್ಶಕ್ತರು, ಗರ್ಭಿಣಿಯರು ಶನಿವಾರ ಸಂಜೆ 7.41 ರಿಂದ ವೇಧ ನಿಯಮಗಳನ್ನು ಪಾಲಿಸಬೇಕು.

ಇ. ಸ್ನಾನ, ಜಪ, ದೇವರ ಪೂಜೆ, ಮತ್ತು ಶ್ರಾದ್ಧಕರ್ಮಗಳನ್ನು ಮಾಡಬಹುದು. ನೀರು ಕುಡಿಯುವುದು, ನಿದ್ದೆ ಮಾಡುವುದು ಮತ್ತು ಮಲಮೂತ್ರ ವಿಸರ್ಜನೆ ಈ ಕರ್ಮಗಳನ್ನು ಮಾಡಬಹುದು. ವೇಧ ಕಾಲದಲ್ಲಿ ಊಟ ಮಾಡುವುದು ನಿಷಿದ್ಧವಾಗಿದೆ.

ಈ. ಗ್ರಹಣ ಪರ್ವಕಾಲದಲ್ಲಿ, ಅಂದರೆ ರಾತ್ರಿ 1.05 ದಿಂದ 2.23 ರ ವರೆಗೆ ನೀರು ಕುಡಿಯುವುದು, ನಿದ್ದೆ ಮಾಡುವುದು ಮತ್ತು ಮಲಮೂತ್ರ ವಿಸರ್ಜನೆ ನಿಷಿದ್ಧವಾಗಿವೆ.

೩. ಚಂದ್ರಗ್ರಹಣ ಸಮಯ (ಭಾರತದಾದ್ಯಂತ)

೩ ಅ. ಸ್ಪರ್ಶ (ಆರಂಭ)

ರಾತ್ರಿ 1.05 (28.10.2023 ರಂದು ಉತ್ತರ ರಾತ್ರಿ 1.05)

೩ ಆ. ಮಧ್ಯ

ರಾತ್ರಿ 1.44 (28.10.2023 ರಂದು ಉತ್ತರ ರಾತ್ರಿ 1.44)

೩ ಇ. ಮೋಕ್ಷ (ಗ್ರಹಣ ಸಮಾಪ್ತಿ ಅಥವಾ ಕೊನೆಯ ಗಳಿಗೆ)

ರಾತ್ರಿ 2.23 (28.10.2023 ರಂದು ಉತ್ತರ ರಾತ್ರಿ 2.23)

೩ ಈ. ಗ್ರಹಣಪರ್ವ (ಟಿಪ್ಪಣಿ ೧) (ಗ್ರಹಣದ ಆರಂಭದಿಂದ ಸಮಾಪ್ತಿಯವರೆಗಿನ ಒಟ್ಟು ಕಾಲಾವಧಿ)

1 ಗಂಟೆ 18 ನಿಮಿಷಗಳು (ಮೇಲಿನ ಸಮಯವು ಸಂಪೂರ್ಣ ಭಾರತಕ್ಕೆ ಅನ್ವಯಿಸುತ್ತದೆ.)

ಟಿಪ್ಪಣಿ ೧ : ಪರ್ವ ಎಂದರೆ ಪರ್ವಣಿ ಅಥವಾ ಪುಣ್ಯಕಾಲ. ಗ್ರಹಣಸ್ಪರ್ಶದಿಂದ ಗ್ರಹಣ ಮೋಕ್ಷದವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಈ ಕಾಲದಲ್ಲಿ ಈಶ್ವರನ ಅನುಸಂಧಾನದಲ್ಲಿದ್ದರೆ ಆಧ್ಯಾತ್ಮಿಕ ಲಾಭವಾಗುತ್ತದೆ, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

೪. ಗ್ರಹಣ ಕಾಲದಲ್ಲಿ ಯಾವ ಕರ್ಮಗಳನ್ನು ಮಾಡಬೇಕು ?

೧. ಗ್ರಹಣಸ್ಪರ್ಶವಾದ ಕೂಡಲೆ ಸ್ನಾನ ಮಾಡಬೇಕು.

೨. ಪರ್ವಕಾಲದಲ್ಲಿ ದೇವರ ಪೂಜೆ, ತರ್ಪಣ, ಶ್ರಾದ್ಧ, ಜಪ, ಹೋಮ ಮತ್ತು ದಾನ ಮಾಡಬೇಕು.

೩. ಹಿಂದೆ ಯಾವುದಾದರೊಂದು ಕಾರಣದಿಂದ ಸ್ಥಗಿತಗೊಂಡ ಮಂತ್ರದ ಪುರಶ್ಚರಣೆಯನ್ನು ಈ ಕಾಲಾವಧಿಯಲ್ಲಿ ಆರಂಭಿಸಿದರೆ ಅದರ ಫಲ ಅನಂತಪಟ್ಟುಗಳಲ್ಲಿ ಸಿಗುತ್ತದೆ.

೪. ಗ್ರಹಣಮೋಕ್ಷ (ಗ್ರಹಣ ಮುಗಿದ ನಂತರ) ಆದಾಗ ಸ್ನಾನ ಮಾಡಬೇಕು .

೫. ಯಾರಿಗಾದರೂ ಅಶೌಚ (ಸೂತಕ ಇತ್ಯಾದಿ) ಇದ್ದರೆ ಗ್ರಹಣ ಕಾಲದಲ್ಲಿ ಗ್ರಹಣ ಸಂಬಂಧಿತ ಸ್ನಾನ ಮತ್ತು ದಾನ ಮಾಡುವ ಮಟ್ಟಿಗೆ ಅವರಿಗೆ ಶುದ್ದಿ ಇರುತ್ತದೆ .

೫. ರಾಶಿಗಳಿಗನುಸಾರ ಚಂದ್ರಗ್ರಹಣದ ಫಲ

೬ ಅ. ಶುಭಫಲ : ಮಿಥುನ, ಕರ್ಕಾಟಕ, ವೃಶ್ಚಿಕ ಮತ್ತು ಕುಂಭ

೬ ಆ. ಅಶುಭ ಫಲ : ಮೇಷ, ವೃಷಭ, ಕನ್ಯಾ ಮತ್ತು ಮಕರ

೬ ಇ. ಮಿಶ್ರಫಲ : ಸಿಂಹ, ತುಲಾ, ಧನು ಮತ್ತು ಮೀನ

ಯಾವ ರಾಶಿಗಳಿಗೆ ಅಶುಭ ಫಲವಿದೆಯೋ, ಆ ರಾಶಿಯ ವ್ಯಕ್ತಿಗಳು ಮತ್ತು ಗರ್ಭಿಣಿ ಮಹಿಳೆಯರು ಈ ಚಂದ್ರಗ್ರಹಣ ನೋಡಬಾರದು.

(ಆಧಾರ : ದಾತೆ ಪಂಚಾಂಗ)

೬. ಕೋಜಾಗರ ಹುಣ್ಣಿಮೆ ಮತ್ತು ಚಂದ್ರಗ್ರಹಣ

ಈ ವರ್ಷ ಶನಿವಾರ, 28.10.2023 ರಂದು ಕೋಜಾಗರ ಹುಣ್ಣಿಮೆಯ ದಿನದಂದೇ ಚಂದ್ರಗ್ರಹಣ ಇರಲಿದ್ದು ಉತ್ತರ ರಾತ್ರಿ 1.05 ರಿಂದ 2.23 ವರೆಗೆ ಗ್ರಹಣದ ಪರ್ವಕಾಲ ಇರಲಿದೆ. ಆದುದರಿಂದ ಅದಕ್ಕಿಂತ ಮೊದಲೇ, ಅಂದರೆ ವೇಧಕಾಲದಲ್ಲಿ ವರ್ಷಂಪ್ರತಿಯಂತೆ ಲಕ್ಷ್ಮೀ ಮಾತೆ ಮತ್ತು ಇಂದ್ರದೇವರನ್ನು ಪೂಜಿಸಿ ಹಾಲು-ಸಕ್ಕರೆಯ ನೈವೇದ್ಯವನ್ನು ಅರ್ಪಿಸಬಹುದು. ಆದರೆ ಪ್ರಸಾದವೆಂದು ಕೇವಲ ಒಂದು ಚಮಚ ಹಾಲು ಸೇವಿಸಬೇಕು. ಉಳಿದಿರುವ ಪ್ರಸಾದವನ್ನು ಮರುದಿನ ಸೇವಿಸಬಹುದು.

– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದೆ, ಕುಡಾಳ, ಮಹಾರಾಷ್ಟ್ರ