ಮಹಾಕುಂಭನಗರಿಯಲ್ಲಿ ಸಾಧ್ವಿ ಋತುಂಭರಾ ರವರು ಕ್ಷಾತ್ರತೇಜವನ್ನು ಜಾಗೃತಗೊಳಿಸಿದರು !

ಪ್ರಯಾಗರಾಜ, ಜನವರಿ 19 (ಸುದ್ದಿ) – ಮಹಾಕುಂಭಮೇಳದಲ್ಲಿ ಹಲವು ಸಂಪ್ರದಾಯಗಳಿವೆ. ಕೆಲವರು ಮಹಾಪ್ರಸಾದವನ್ನು ವಿತರಿಸುತ್ತಿದ್ದಾರೆ. ಕೆಲವರು ಸಾಹಿತ್ಯವನ್ನು ವಿತರಿಸುತ್ತಿದ್ದಾರೆ, ಕೆಲವರು ಪ್ರವಚನಗಳು- ಕಥೆಗಳ ಮೂಲಕ ಜ್ಞಾನಾಮೃತವನ್ನು ವಿತರಿಸುತ್ತಿದ್ದಾರೆ. ಇದೆಲ್ಲವೂ ಆವಶ್ಯಕವಾಗಿದೆ; ಆದರೆ ಸದ್ಯಕ್ಕೆ ಹಿಂದೂ ಸಮಾಜಕ್ಕೆ ಶೌರ್ಯವನ್ನು ಹಂಚುವುದು ಆವಶ್ಯಕವಾಗಿದೆ. ಶೌರ್ಯಕ್ಕಾಗಿ ಧೈರ್ಯವು ಅವಶ್ಯಕವಾಗಿರುತ್ತದೆ. ಶೌರ್ಯ- ಧೈರ್ಯವಿದ್ದರೆ, ಅನುಕೂಲತೆಯಲ್ಲಿ ಹಾಗೂ ಪ್ರತಿಕೂಲತೆಯಲ್ಲಿಯೂ ಸ್ಥಿರವಾಗಿರಲು ಸಾಧ್ಯವಾಗುತ್ತದೆ. ಇದೇ ಶೌರ್ಯ ಮತ್ತು ಗುರಿಯೊಂದಿಗೆ ಪ್ರಯತ್ನಿಸಿದ್ದರಿಂದ ಶ್ರೀರಾಮಮಂದಿರವು ಪೂರ್ಣಗೊಂಡಿತು. ಮಹಿಳೆಯರು ಮತ್ತು ಹುಡುಗಿಯರಲ್ಲಿ ಶ್ರೀ ದುರ್ಗಾದೇವಿಯ ತತ್ತ್ವವಿದೆ. ಆದ್ದರಿಂದ, ಶ್ರೀ ರಾಮ ಮಂದಿರದ ನಂತರ, ನಾವು ಈಗ ಭಾರತದ ಪ್ರತಿಯೊಂದು ಹಳ್ಳಿಯಲ್ಲೂ ಭಗವಾಧ್ವಜವನ್ನು ಹಾರಿಸುವ ಗುರಿಯನ್ನು ಹೊಂದಿರಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ಮಂಟಪದಲ್ಲಿ ಸಾಧ್ವಿ ಋತುಂಭರಾ ರವರು ಉದ್ಗರಿಸಿದರು. ಅವರು ಮಹಾಕುಂಭನಗರಿಯ ಸೆಕ್ಟರ್ 18 ರಲ್ಲಿರುವ ವಿಶ್ವ ಹಿಂದೂ ಪರಿಷತ ಮಂಟಪದಲ್ಲಿ ‘ದುರ್ಗಾವಾಹಿನಿ’ಯ ಮೀರತ ಮತ್ತು ಲಖನೌ ಶಾಖೆಗಳ ಶಕ್ತಿ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ದುರ್ಗಾವಾಹಿನಿ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಧ್ವಿ ಋತುಂಭರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅದೇ ರೀತಿ, ಕ್ರೀಡಾಪಟು ಪದ್ಮಶ್ರೀ ಸುಧಾ ಸಿಂಹರವರನ್ನು ದುರ್ಗಾವಾಹಿನಿಯ ಪರವಾಗಿ ಸನ್ಮಾನಿಸಲಾಯಿತು. ಸುಧಾ ಸಿಂಹರವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಾಧ್ವಿ ಋತುಂಭರಾ ರವರು ತಮ್ಮ ಮಾರ್ಗದರ್ಶನದಲ್ಲಿ ಮಾತನಾಡುತ್ತಾ, ಮಹಿಳೆಯರು ಮತ್ತು ಹುಡುಗಿಯರು ತಾವು ತೆಗೆದುಕೊಂಡಿರುವ ಗುರಿಗಳನ್ನು ಸಾಧಿಸುವ ಬಗ್ಗೆ ಯಾವುದೇ ಅನುಮಾನಗಳನ್ನು ಹೊಂದಿರಬಾರದು. ‘ಸೌಗಂಧ್ ಮಿಟ್ಟಿ ಕಿ ಖಾತೇ ಹೈ ಮಂದಿರ್ ವಹಿ ಬನಾಯೇಂಗೆ |’ (ದೇವಸ್ಥಾನವನ್ನು ಅಲ್ಲಿಯೇ ನಿರ್ಮಿಸುತ್ತೇವೆ ಎಂದು ನಾವು ಮಣ್ಣಿನ ಮೇಲೆ ಪ್ರಮಾಣ ಮಾಡುತ್ತೇವೆ) ಎಂದು ಘೋಷಣೆ ನೀಡಿ ಕಷ್ಟಕರವೆನಿಸಿದ ಶ್ರೀ ರಾಮಮಂದಿರದ ನಿರ್ಮಾಣವು ಸಾಧ್ಯವಾಯಿತು. ಶ್ರೀರಾಮನು ಆ ಕಾರ್ಯವನ್ನು ನಮ್ಮನ್ನು ನೆಪವಾಗಿಟ್ಟುಕೊಂಡು ಸಾಧಿಸಿದನು. ಇದರ ವರ್ಷಪೂರ್ತಿ ಆಗುತ್ತಿದೆ. ಮಹಿಳೆಯರಲ್ಲಿ ಸಾಮರ್ಥ್ಯವಿರುತ್ತದೆ. ಅವರು ಯಾವುದೇ ಪರಿಸ್ಥಿತಿಯನ್ನು ಅನುಕೂಲಕರವಾಗಿಸಬಲ್ಲರು.

ಸಾಧು- ಸಂತರು ಮತ್ತು ಅವತಾರಗಳಿಗೆ ಜನ್ಮ ನೀಡುವವರು ಮಹಿಳೆಯರೇ ಆಗಿದ್ದಾರೆ. ಶಾಸ್ತ್ರಗಳು, ಧರ್ಮಗ್ರಂಥಗಳನ್ನು ನಿರ್ಮಿಸುವ ಜೀವಿಗಳನ್ನು ಮಹಿಳೆಯರೇ ನಿರ್ಮಿಸಿದ್ದಾರೆ. ಸ್ತ್ರೀಗೆ ಆಕೆಯ ಆಚಾರಣೆಗಳಿಂದಲೇ ಗೌರವ ದೊರೆಯುತ್ತದೆ. ಅದೇ ಸ್ತ್ರೀ ಈಗ ನೀತಿಭ್ರಷ್ಟಳಾಗುತ್ತಿದ್ದಾಳೆ, ಇದು ದುರದೃಷ್ಟಕರ. ತುಂಡುಡುಗೆ ಧರಿಸುವ ಹುಡುಗಿಯರು ಮತ್ತು ಮಹಿಳೆಯರಲ್ಲಿ ದುರ್ಗಾವಾಹಿನಿಯ ಹುಡುಗಿಯರು ಮತ್ತು ಮಹಿಳೆಯರು ತಿಳುವಳಿಕೆ ಮತ್ತು ಅರಿವು ಮೂಡಿಸಬೇಕು.