ಕನ್ನಡವೇ ನಿತ್ಯ, ಕನ್ನಡವೇ ಸತ್ಯ… ಮತ್ಯಾಕೆ ಕನ್ನಡಿಗರೇ ನಿಮಗೆ ಆಂಗ್ಲದ ದಾಸ್ಯ ?

ಹಚ್ಚೇವು ಕನ್ನಡದ ದೀಪ .. ನವೆಂಬರ್‌ ೧ ರಂದು ಇರುವ ಕನ್ನಡ ರಾಜ್ಯೋತ್ಸವದ ಪ್ರಯುಕ್ತ

ಇಂದು ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡುವುದು, ಓದುವುದು, ಚಲನಚಿತ್ರ ನೋಡುವುದು ಮತ್ತು ಆಂಗ್ಲ ಸಂಸ್ಕೃತಿಗನುಸಾರ ವರ್ತಿಸುವುದು ಇವುಗಳು ಅಲ್ಲಲ್ಲಿ ಮೊಳಕೆಯೊಡೆಯುತ್ತಿದೆ. ನನ್ನ ಮಗ ಅಥವಾ ಮಗಳು ಆಂಗ್ಲದಲ್ಲಿ ನಿರರ್ಗಳವಾಗಿ ಮಾತನಾಡಬೇಕು, ನಾಲ್ಕು ಜನರ ಮುಂದೆ ಎದ್ದು ಕಾಣಬೇಕು, ಎಂಬ ಕಲ್ಪನೆಗಳನ್ನು ಇಟ್ಟುಕೊಂಡು ಆಂಗ್ಲ ಮಾಧ್ಯಮದ ವೈಭವೋಪೇತ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಕಲಿಸುವುದರಲ್ಲಿ ಶ್ರೇಷ್ಠವೆಂದು ತಿಳಿಯುತ್ತಿದ್ದಾರೆ. ಎಲ್ಲೆಡೆ ಆಂಗ್ಲ ಮಾಧ್ಯಮದಿಂದ ಪಾಶ್ಚಾತ್ಯದ ಭೂಮಿಯ ಡಾಂಭಿಕ ಶಾಲೆಗಳ ರೆಂಬೆ-ಟೊಂಗೆ ಹಬ್ಬಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡ ಶಾಲೆಗಳೂ ಆಂಗ್ಲ ಮಾಧ್ಯಮಗಳ ಶಾಲೆಗಳನ್ನು ಆರಂಭಿಸುತ್ತಿವೆ. ರಾಜಕಾರಣಿಗಳೂ ಅದರಲ್ಲೇನು ಕಡಿಮೆಯಿಲ್ಲ. ಒಟ್ಟಾರೆ ನೋಡಿದಾಗ ಆಂಗ್ಲ ಭಾಷೆಯ ಈ ಅತಿರೇಕ ಮತ್ತು ಭ್ರಮೆಯ ಪ್ರೀತಿಯಿಂದ ಕನ್ನಡ ಭಾಷೆಯು ಇಲ್ಲದಂತಾಗುವುದು ಅಥವಾ ಅದರ ಮಹತ್ವ ನಾಶವಾಗುತ್ತದೆಯೋ ಏನೋ, ಎಂಬ ಹೆದರಿಕೆ ಉತ್ಪನ್ನವಾಗಿದೆ. ಕನ್ನಡ ಭಾಷೆಯ ವೈಶಿಷ್ಟ್ಯಗಳು, ಆಂಗ್ಲ ಭಾಷೆಯಲ್ಲಿರುವ ಕೊರತೆ, ಆಂಗ್ಲ ಭಾಷೆಯಿಂದ ಸಂಸ್ಕೃತಿಯ ಹಾನಿ ಮತ್ತು ಅದಕ್ಕೆ ಉಪಾಯಗಳ ಬಗ್ಗೆ ಈ ಲೇಖನದಲ್ಲಿ ವಿಮರ್ಶೆ ಮಾಡಲಾಗಿದೆ. ಈ ಲೇಖನದ ಹಿಂದಿನ ಉದ್ದೇಶವು ಆಂಗ್ಲ ಭಾಷೆಯನ್ನು ಅವಮಾನಿಸುವುದಲ್ಲ, ಸ್ವಭಾಷೆಯ ಬಗ್ಗೆ ಮತ್ತು ಪರಿಣಾಮವಾಗಿ ಸ್ವಧರ್ಮದ ಬಗ್ಗೆ ಹಾಗೂ ರಾಷ್ಟ್ರದ ಬಗ್ಗೆ ಅಭಿಮಾನ ಹೆಚ್ಚಿಸುವುದಾಗಿದೆ.

೧. ಅಪೂರ್ಣ ಆಂಗ್ಲ ಭಾಷೆ ಮತ್ತು ಪರಿಪೂರ್ಣ ಕನ್ನಡ ಭಾಷೆ

ಭಾಷಾ ಶಾಸ್ತ್ರದಂತೆ ಸಂಸ್ಕೃತ ಭಾಷೆಯನ್ನು ದೇವಭಾಷೆ ಎಂದು ಸಂಬೋಧಿಸಲಾಗುತ್ತದೆ. ಅದೇ ರೀತಿ ಕನ್ನಡ ಭಾಷೆಗೂ ಐತಿಹಾಸಿಕ ಮಹತ್ವವಿದೆ. ಕನ್ನಡದ ಪರಿಪೂರ್ಣತೆಯ ದೃಷ್ಟಿಯಿಂದ ಆಂಗ್ಲ ಭಾಷೆಯು ಹೇಗೆ ಅಪೂರ್ಣವಿದೆ, ಎಂಬುದನ್ನು ನೋಡೋಣ. ಶಬ್ದಗಳ ರಚನೆಗೆ ಯಾವುದೇ ನಿಯಮ ಇಲ್ಲದಿರುವುದರಿಂದ ಶಬ್ದ ರಚನೆಯನ್ನು ಬಾಯಿಪಾಠ ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಒಳ್ಳೆಯ ಉದಾಹರಣೆಯೆಂದರೆ; Do ಉಚ್ಚಾರ ‘ಡು’ ಎಂದಾದರೆ Go ಉಚ್ಚಾರ ‘ಗೋ’ ಹಾಗೂ Put ಉಚ್ಚಾರ ‘ಪುಟ್’ ಎಂದಾದರೆ But ಎಂಬುದರ ಉಚ್ಚಾರ ‘ಬಟ್’ ಇವೆಲ್ಲ ತರ್ಕವಿಸಂಗತವಾಗಿದೆ. ಹೀಗೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಇದರಂತೆ ಯಾವ ಶಬ್ದದ ಉಚ್ಚಾರ ಹೇಗೆ ಯಾವಾಗ ಮಾಡಬೇಕು, ಎಂಬುದರ ಬಗ್ಗೆ ಯಾವುದೇ ಶಾಸ್ತ್ರವಿಲ್ಲ. ಉದಾ. ‘C’ ಈ ಶಬ್ದದ ಉಚ್ಚಾರವು ಕೆಲವೊಮ್ಮೆ ‘ಸ’ ಎಂದಾಗುತ್ತದೆ, ಕೆಲವೊಮ್ಮೆ ‘ಕ’ ಎಂದಾಗುತ್ತದೆ. ಇದರ ಉದಾಹರಣೆ ಕೊಡುವುದಿದ್ದರೆ Ice ಈ ಶಬ್ದದಲ್ಲಿ ‘ಸ’ ಮತ್ತು Cream ಈ ಶಬ್ದದಲ್ಲಿ ‘ಕ’ ಎಂದಾಗುತ್ತದೆ. ಇದರ ಬಗ್ಗೆಯೂ ಎಷ್ಟೋ ಉದಾಹರಣೆಗಳನ್ನು ಕೊಡಬಹುದು. ಯಾವಾಗ ಯಾವ ಶಬ್ದದ ಉಚ್ಚಾರ ಸ್ಪಷ್ಟ ಮಾಡಬೇಕು, ಯಾವಾಗ ಅಸ್ಪಷ್ಟ ಎಂಬುದರ ಬಗ್ಗೆ ಯಾವುದೇ ಶಾಸ್ತ್ರವಿಲ್ಲ. ಉದಾ. Watchman ಈ ಶಬ್ದದಲ್ಲಿ ‘t’ ಇದರ ಉಚ್ಚಾರ ಮಾಡಲಿಕ್ಕಿಲ್ಲ, Action ಈ ಶಬ್ದದಲ್ಲಿ ‘ಶ’ ಎಂದು ಮಾಡಬೇಕು ಮತ್ತು Cat ಈ ಶಬ್ದದಲ್ಲಿ ಮಾತ್ರ ‘ಟ’ ಎಂದು ಮಾಡಬೇಕು. ಹೀಗೆ ಶಾಸ್ತ್ರವಿಸಂಗತ ಮತ್ತು ತರ್ಕವಿಸಂಗತ ಭಾಷೆಯ ಬಗ್ಗೆ ಏಕೆ ಅಭಿಮಾನವಿಡಬೇಕು, ಎಂಬುದು ತಿಳಿಯದು. ಆದರೆ ನಮ್ಮ ಕನ್ನಡದಲ್ಲಿ, ನಾವು ಹೇಗೆ ಬರೆಯು ತ್ತೇವೆಯೋ, ಉಚ್ಚಾರವೂ ಅದೇ ರೀತಿಯಿರುತ್ತದೆ. ಹಾಗಾಗಿ ಬೆಳೆಯುವ ಮಕ್ಕಳಿಗಿರಲಿ, ಹೊಸದಾಗಿ ಕನ್ನಡವನ್ನು ಕಲಿಯುವವರಿಗಿರಲಿ ಭಾಷೆ ಕಲಿಯುವಾಗ ಯಾವುದೇ ಅಡಚಣೆ ಬರುವುದಿಲ್ಲ.

೨. ಗೌರವಾಸ್ಪದವಲ್ಲದ ಭಾಷೆ

ಯಾವುದೇ ವ್ಯಕ್ತಿಗೆ ಅವರು ಎಷ್ಟೇ ಗೌರವಾನ್ವಿತರಾದರೂ ಏಕವಚನದಿಂದ ಸಂಬೋಧಿಸಲಾಗುತ್ತದೆ. ಉದಾಹರಣಾರ್ಥ ದೇವರಿದ್ದರೂ ‘He’ ಪ್ರಾಣಿಯಿದ್ದರೂ ‘He’, ಭಿಕ್ಷುಕನಾಗಿದ್ದರೂ ‘He’ ಮತ್ತು ರಾಜನಿದ್ದರೂ ‘He’ ನೇ. ಈ ಕೊರತೆಯಿಂದಾಗಿ ಮಾತನಾಡುವಾಗ ಯೋಗ್ಯ ಭಾವ ವ್ಯಕ್ತವಾಗುವುದಿಲ್ಲ. ಭಾಷೆಯಲ್ಲಿ ಸ್ಥಿತಿಸ್ಥಾಪಕತೆ (flexibility) ಇಲ್ಲದಿರುವುದರಿಂದ ಭಾಷೆಯಲ್ಲಿ ರುಚಿ ಇರುವುದಿಲ್ಲ. ಕ್ರಿಯಾಪದದ ಲಿಂಗವು ಕರ್ತೃವಿಗನುಸಾರ ಬದಲಾಗದಿರುವುದರಿಂದ ಕರ್ತೃ ವಿಷಯದ ಭಾವವು ವ್ಯಕ್ತವಾಗುವುದಿಲ್ಲ ಹಾಗೂ ಕರ್ತೃವಿನ ಲಿಂಗ ಯಾವುದು ಎಂದು ಹೊಸ ವ್ಯಕ್ತಿಗಳಿಗೆ ತಿಳಿಯುವು ದಿಲ್ಲ. ಉದಾ. ಕನ್ನಡದಲ್ಲಿ ಸೀತಾ ನಡೆಯುತ್ತಾಳೆ ಮತ್ತು ರಾಮ ನಡೆಯುತ್ತಾನೆ ಆದರೆ ಆಂಗ್ಲದಲ್ಲಿ ಮಾತ್ರ Sita walks, Ram also walks ಹೊಸ ವ್ಯಕ್ತಿಗೆ ರಾಮ ಪುರುಷನೋ ಸ್ತ್ರೀಯೋ ಎಂಬುದು ತಿಳಿಯುವುದಿಲ್ಲ.

೩. ಜೋಡಿ ಅಕ್ಷರಗಳ ಬಗ್ಗೆ ಯಾವುದೇ ನಿಯಮವಿಲ್ಲದಿರುವುದು

ಕನ್ನಡ ಭಾಷೆಯ ನಿಯಮದಂತೆ ಜೋಡಿ ಅಕ್ಷರವೆಂದರೆ ಒಂದು ಅಕ್ಷರ ಪೂರ್ಣ ಮತ್ತು ಮತ್ತೊಂದು ಅಕ್ಷರ ಅರ್ಧವಿರುತ್ತದೆ. ಆಂಗ್ಲದಲ್ಲಿ ಮಾತ್ರ ಹಾಗಿಲ್ಲ. ಆಂಗ್ಲದಲ್ಲಿ ಜೋಡಿ ಅಕ್ಷರಗಳಲ್ಲಿನ ಎರಡೂ ಅಕ್ಷರಗಳು ಪೂರ್ಣವಿರುತ್ತವೆ. ಉದಾ. Deccan, Friction ನಂತಹ ಶಬ್ದಗಳಂತೆ ಎಷ್ಟೋ ಕೊರತೆಗಳನ್ನು ತೋರಿಸಬಹುದು. ಇಲ್ಲ್ಲಿ ಸ್ಥಳದ ಅಭಾವದಿಂದ ಇಲ್ಲಿ ಹೇಳಲು ಸಾಧ್ಯವಿಲ್ಲ. ತದ್ವಿರುದ್ಧ ಕನ್ನಡ ಭಾಷೆಯಲ್ಲಿ ಒಂದು ರೀತಿಯಲ್ಲಿ ಲಯಬದ್ಧತೆ ಇದೆ, ಗೌರವಸೂಚಿಸುವ ಕ್ಷಮತೆಯಿದೆ, ಶಾಸ್ತ್ರಶುದ್ಧತೆ ಇದೆ, ಕಡಿಮೆ ಶಬ್ದಗಳಲ್ಲಿ ಭಾವನೆ ಯನ್ನು ವ್ಯಕ್ತಪಡಿಸುವ ಕ್ಷಮತೆ ಇದೆ. ಆದುದರಿಂದ ಕನ್ನಡ ಭಾಷೆಯಲ್ಲಿ ಆಂಗ್ಲ ಭಾಷೆಗಿಂತ ಹೆಚ್ಚು ಚೈತನ್ಯವಿದೆ.

೪. ಆಂಗ್ಲ ಭಾಷೆಯ ಬಗ್ಗೆ ಸಮಾಜದ ತಪ್ಪು ತಿಳುವಳಿಕೆ ಮತ್ತು ಅಜ್ಞಾನ

ಆಂಗ್ಲದಲ್ಲಿ ಮಾತನಾಡಲು ಬರುವುದೆಂದರೆ ಘನತೆಯ ಲಕ್ಷಣ ಮತ್ತು ಆಂಗ್ಲ ಬರುವುದಿಲ್ಲ ಎಂದರೆ ಹಿಂದುಳಿಯುವಿಕೆ ಎಂದು ಆಂಗ್ಲಭಾಷಾಪ್ರೇಮಿಗಳಿಗೆ ಅನಿಸುತ್ತದೆ. ಆಂಗ್ಲ ದಿನಪತ್ರಿಕೆ, ಮಾಸಿಕ ಮತ್ತು ಕಾದಂಬರಿಗಳನ್ನು ಓದುವುದು ಎಂದರೆ ಒಂದು ಪ್ರತಿಷ್ಠೆಯೆಂದು ಅನಿಸುತ್ತದೆ. ಆಂಗ್ಲ ಭಾಷೆ ಕಲಿಯದಿದ್ದರೆ ಪ್ರಗತಿಯಾಗುವುದಿಲ್ಲ, ಎಂದು ಬಹಳಷ್ಟು ಜನರಿಗೆ ತಪ್ಪುಕಲ್ಪನೆ ಇದೆ. ಆಂಗ್ಲ ಭಾಷೆ ಓದಲು ಬಾರದಿದ್ದರೆ ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಹಿಂದೆ ಬೀಳುತ್ತೇವೆ ಎಂದು ಹೆದರಿಕೆ ಬಹಳಷ್ಟು ಜನರ ಮನಸ್ಸಿನಲ್ಲಿರುತ್ತದೆ. ನಿಜವಾಗಿ ನೋಡಿದರೆ ವ್ಯಾಪಾರಕ್ಷೇತ್ರದಲ್ಲಿ ಕೇವಲ ಗುಣ ವಂತರಿಗೆ ಪ್ರಾಧಾನ್ಯತೆಯಿರುತ್ತದೆ. ಆದರೆ ಇಂದಿನ ಕೃತಕ ಮಾರಾಟವ್ಯವಸ್ಥಾಪನೆಯ (ಮಾರ್ಕೆಟಿಂಗ್) ಯುಗದಲ್ಲಿ ಮಾತ್ರ ಯಾರಿಗೆ ಆಂಗ್ಲ ಭಾಷೆ ಬರುತ್ತದೆಯೋ, ಅವರು ತಮ್ಮ ಸಾಧಾರಣ ದರ್ಜೆಯ ವಸ್ತುಗಳನ್ನು ಕೇವಲ ಆಂಗ್ಲ ಭಾಷೆಯಿಂದ ಮಾರಬಹುದು, ಎಂಬುದು ಕಟುಸತ್ಯ. ಇದಕ್ಕೆ ಕಾರಣವೆಂದರೆ ಆಂಗ್ಲ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವವನು ಎಂದರೆ ದೊಡ್ಡ ಮಹಾನುಭಾವರೆಂಬ ಗುಲಾಮಗಿರಿಯ ಮಾನಸಿಕತೆ ನಮ್ಮ ಸಮಾಜದಲ್ಲಿದೆ. ಈ ಕೀಳರಿಮೆಯಿಂದ ಇಂದು ಕನ್ನಡಿಗನು ಇಂತಹ ಮಾರಾಟ ಪ್ರತಿನಿಧಿಗಳಿಗೆ ಮೋಸ ಹೋಗುತ್ತಾನೆ. ಇಂತಹ ವಸ್ತುಸ್ಥಿತಿಯಿಂದ ಬುದ್ಧಿ ಸಾಧಾರಣವಿದ್ದವರಿಗೂ ಕೇವಲ ಆಂಗ್ಲ ಭಾಷೆ ಬರುತ್ತದೆ ಎಂದರೆ ನೌಕರಿ ದೊರಕುತ್ತದೆ ಎಂದು ಖಚಿತವಾಗಿರುವುದರಿಂದ ಸಮಾಜವು ಆಂಗ್ಲ ಭಾಷೆಯೆಡೆಗೆ ತಿರುಗುತ್ತಿದೆ, ಎಂದು ಅನಿಸುತ್ತದೆ. ಇದರಿಂದ ನಿಜವಾದ ವಿದ್ವತ್ತು ಇವರಿಗೆ ಕೇವಲ ಆಂಗ್ಲ ಬರುವುದಿಲ್ಲವೆಂಬ ಕಾರಣದಿಂದ ಅವಕಾಶದಿಂದ ವಂಚಿತರಾಗುವ ಸಾಧ್ಯತೆಯಿದೆ. ಇಂದು ಇಂತಹದ್ದೇ ಮಾರಾಟ ಪ್ರತಿನಿಧಿಗಳು ಎಲ್ಲೆಡೆ ಹರಡಿ ದ್ದಾರೆ. ಇಂತಹ ಸಮಯದಲ್ಲಿ ಆಂಗ್ಲ ಭಾಷೆ ಬರುವುದು ಆವಶ್ಯಕವೆನಿಸುತ್ತಿದ್ದರೂ ಅದರ ಮೇಲೆ ಅವಲಂಬಿಸಿರುವುದು ಮತ್ತು ಅದನ್ನು ಅನಾವಶ್ಯಕ ಉಪಯೋಗಿಸುವುದು ಮಾನಸಿಕ ಗುಲಾಮಗಿರಿಯಲ್ಲವೇ ?

೫. ಆಂಗ್ಲ ಭಾಷೆಯಿಂದ ಆಗುವ ಸಾಂಸ್ಕೃತಿಕ ಹಾನಿ

ಆಂಗ್ಲ ಭಾಷೆಯಲ್ಲಿ ಶಿಕ್ಷಣ ಪಡೆಯುವಾಗ ಯಾವ ವಾಙ್ಮಯವನ್ನು ಆಧಾರಕ್ಕಾಗಿ ಉಪಯೋಗಿಸಿದ್ದಾರೆಯೋ, ಅದು ಪಾಶ್ಚಾತ್ಯ ಸಂಸ್ಕೃತಿಯೊಂದಿಗೆ ಸಂಬಂಧಿತವಿರುವುದರಿಂದ ಸಹಜವಾಗಿ ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಪರಿಚಯವಾಗುವುದಿಲ್ಲ. ಇಂದು ವಿಭಕ್ತ ಕುಟುಂಬ ಪದ್ಧತಿ ಯಿಂದ ಮನೆಯಲ್ಲಿಯೂ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಲು ಯಾರು ಇರುವುದಿಲ್ಲ. ಪ್ರಸಾರಮಾಧ್ಯಮದಿಂದ ಮತ್ತು ಸಮಾಜದಿಂದಲೂ ಇಂತಹ ವಾಙ್ಮಯದ ಪ್ರಚಾರ ವಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಆಕರ್ಷಣೆಯು ಹೆಚ್ಚಾಗುತ್ತದೆ. (ಉದಾ. ಹ್ಯಾರಿ ಪಾಟರ್, ದೂರಚಿತ್ರವಾಹಿನಿಯಲ್ಲಿ ವ್ಯಂಗ್ಯಚಿತ್ರ ಮಾಲಿಕೆ ಇತ್ಯಾದಿ) ಆದುದರಿಂದಲೇ ಭಾರತೀಯ ಇತಿಹಾಸದ ರಾಷ್ಟ್ರಪುರುಷರು, ಸಂತರು, ಧರ್ಮಗ್ರಂಥ ಇತ್ಯಾದಿಗಳಿಂದ ಯುವಪೀಳಿಗೆ ದೂರವಾಗುತ್ತಿದೆ. ಸ್ವಧರ್ಮ ಮತ್ತು ಸ್ವಭಾಷೆಯ ಬಗ್ಗೆ ಪ್ರೀತಿ ಮೂಡದ ಕಾರಣ ಹಿಂದೂ ಸಂಸ್ಕೃತಿಯ ಮೇಲಿನ ಶ್ರದ್ಧೆ ಮತ್ತು ಅಭಿಮಾನ ಹೆಚ್ಚಾಗುವುದಿಲ್ಲ. ಆಂಗ್ಲ ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟ ಹಿಂಸಾತ್ಮಕ ಮತ್ತು ವಿಕೃತ ಲೈಂಗಿಕತೆಯಿರುವ ಕಾದಂಬರಿಗಳನ್ನು ಓದುವ ಯುವಪೀಳಿಗೆಯ ಮೇಲೆ ದುಷ್ಪರಿಣಾಮವಾಗುತ್ತದೆ. ಇವೆಲ್ಲವುಗಳಿಂದ ಯುವಪೀಳಿಗೆ ಹಾಗೂ ಸಂಪೂರ್ಣ ಸಮಾಜದ ಆಚಾರ ಮತ್ತು ವಿಚಾರಗಳಲ್ಲಾದ ಆಘಾತಕಾರಿ ಬದಲಾವಣೆಗಳನ್ನು ನಾವು ಎಲ್ಲೆಡೆ ನೋಡುತ್ತಿದ್ದೇವೆ. ವರ್ಷದಲ್ಲಿ ಕೇವಲ ಒಂದೇ ದಿನ (Mother’s Day) ತಾಯಿಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಪೀಳಿಗೆ ಇಂದಿನ ತಂದೆ-ತಾಯಿಯರಿಗೆ ಇಷ್ಟವಾಗುತ್ತದೆ. ಪಾಶ್ಚಾತ್ಯ ಹಬ್ಬ, ಉಡುಗೆ-ತೊಡುಗೆ, ಸಭ್ಯತೆ ಇವುಗಳ ಬಗ್ಗೆ ಆಕರ್ಷಣೆಯು ಸಮಾಜದಲ್ಲಿ ಹೆಚ್ಚಾಗಿ ಭಾರತೀಯ ಸಂಸ್ಕೃತಿಯು ಹಿಂದುಳಿಯುತ್ತಿದೆ. ಇವುಗಳ ಪರಿಣಾಮವಾಗಿ ಎಲ್ಲೆಡೆ ಭೋಗವಾದ ಮತ್ತು ಹಣದ ವ್ಯಾಮೋಹ ಕಾಣಸಿಗುತ್ತಿದೆ.

೬. ಆಂಗ್ಲ ಭಾಷೆಯ ಮೇಲಿನ ಅತಿಯಾದ ಪ್ರೀತಿಯಿಂದ ಸಮಾಜದ ಮೇಲಾಗುವ ದುಷ್ಪರಿಣಾಮ

ಭಾಷೆಯೇ ಸಮಾಜವನ್ನು ಒಂದೆಡೆ ಸೇರಿಸುವ ಪ್ರಭಾವೀ ಮಾಧ್ಯಮವಾಗಿದೆ. ಭಾಷೆಯಿಂದಲೇ ಆತ್ಮೀಯತೆ ಬೆಳೆಯಲು ಸಹಾಯವಾಗುತ್ತದೆ. ಆಂಗ್ಲ ಭಾಷೆ ಮಾತನಾಡುವ ಉಚ್ಚ ವರ್ಗ ಮತ್ತು ಇತರ ಸಾಮಾನ್ಯ ಜನರ ವರ್ಗವೆಂದು ವಿಭಾಗಿಸಲ್ಪಟ್ಟಿರುವುದರಿಂದ ಸಮಾಜದಲ್ಲಿ ಆಳ ಕಂದರ ನಿರ್ಮಾಣ ವಾಗುತ್ತಿದೆ. ಒಂದೇ ವರ್ಗದವರ ಆರ್ಥಿಕ ಪ್ರಗತಿಯಾಗುತ್ತದೆ ಮತ್ತು ಇತರ ಸಮಾಜ ಹಿಂದುಳಿಯುತ್ತದೆ ಮತ್ತು ಕೀಳರಿಮೆಯ ಭಾವನೆ ನಿರ್ಮಾಣವಾಗುತ್ತದೆ.

೭. ಇಚ್ಛೆಯಿಲ್ಲದಿದ್ದರೂ ಸಮಾಜದ ಇನ್ನೊಂದು ವರ್ಗ ಸೆಳೆಯಲ್ಪಡುವುದು

ಇದರಿಂದ ಉಚ್ಚ ವರ್ಗದ ಸಮಾಜವು ಇನ್ನೊಂದು ವರ್ಗದ ಜನರನ್ನು ತುಚ್ಚವೆಂದು ಪರಿಗಣಿಸುತ್ತದೆ. ಇದರ ಪರಿಣಾಮವೆಂದು ಕೇವಲ ಸ್ಪರ್ಧೆಯಲ್ಲಿ ಉಳಿಯಲು ಉಪಾಯವಿಲ್ಲದೇ ಮತ್ತು ಆಕರ್ಷಣೆಯೆಂದು ಈ ಮತ್ತೊಂದು ವರ್ಗವೂ ಈ ಸ್ಪರ್ಧೆಯಲ್ಲಿ ಸೆಳೆಯಲ್ಪಟ್ಟು ಪಾಶ್ಚಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿದೆ. ಸಮಾಜದಲ್ಲಿ ಇಂದು ಇಂತಹ ಜನರ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಸಮಾಜದಲ್ಲಿನ ಸಂಪೂರ್ಣ ಮಧ್ಯಮ ವರ್ಗ ಮತ್ತು ಉಚ್ಚ ಮಧ್ಯಮವರ್ಗವು ಇದಕ್ಕೆ ಬಲಿಯಾಗುತ್ತಿದೆ.

೮. ಆಂಗ್ಲ ಭಾಷೆಗೆ ಬಲಿಯಾಗದೇ ಪ್ರಗತಿಯನ್ನು ಸಾಧಿಸಿರುವ ರಾಷ್ಟ್ರ ಜಪಾನಿನ ಉದಾಹರಣೆ ನೋಡೋಣ.

ಜಪಾನಿನ ರಾಜಕಾರಣಿಗಳು ಎಂದಿಗೂ ಆಂಗ್ಲ ಭಾಷೆಯನ್ನು ಅವ ಲಂಬಿಸಿರಲಿಲ್ಲ. ಬದಲಾಗಿ ಅವರು ಪಾಶ್ಚಾತ್ಯ ದೇಶಗಳ ಎಲ್ಲ ಜ್ಞಾನವನ್ನು ಜಪಾನಿ ಭಾಷೆಯಲ್ಲಿ ಅನುವಾದ ಮಾಡಿಸಿ ಕೊಂಡಿದ್ದಾರೆ. ದೇಶದಲ್ಲಿನ ಎಲ್ಲ ಶಿಕ್ಷಣ ಮಾತೃಭಾಷೆ ಯಲ್ಲಿ ನೀಡುತ್ತಿದ್ದಾರೆ, ಹೀಗಿದ್ದೂ ಇಂದು ಜಪಾನ ಎಲ್ಲ ಕ್ಷೇತ್ರಗಳಲ್ಲಿ ಒಂದು ಪ್ರಗತ ರಾಷ್ಟ್ರವಾಗಿದೆ. ಅದರ ಹೊರತಾಗಿ ಜಗತ್ತಿನ ಎಲ್ಲ ವ್ಯವಹಾರಗಳನ್ನು ಮಾತೃಭಾಷೆಯಲ್ಲಿಯೇ ನಡೆಸುತ್ತಾರೆ. ಅವರ ಪ್ರಗತಿಯಲ್ಲಿ ಎಲ್ಲಿಯೂ ಯಾವುದೇ ಅಡಚಣೆ ಬಂದದ್ದು ಕಾಣಿಸುವುದಿಲ್ಲ, ಅಂತಾರಾಷ್ಟ್ರೀಯ ವ್ಯವಹಾರದಲ್ಲಿಯೂ ಯಾರೂ ಹಿಂದಿರುವುದು ಕಾಣಲು ದೊರಕುವುದಿಲ್ಲ. ಬದಲಾಗಿ ಜಪಾನ, ಕೊರಿಯಾ, ಜರ್ಮನ್‌ ಮುಂತಾದ ರಾಷ್ಟ್ರಗಳ ವ್ಯಾಪಾರ ಹೆಚ್ಚಾಗುತ್ತಿದೆ.

೯. ಸಮಾಜದ ಕರ್ತವ್ಯ

ಇತರರಿಗೆ ತಿಳಿಯದ ಭಾಷೆಯಲ್ಲಿ ಮಾತನಾಡುವುದನ್ನು ವಿದೇಶದಲ್ಲಿ ಅಶಿಷ್ಟಾಚಾರ ಎಂದು ತಿಳಿಯಲಾಗುತ್ತಿದೆ. ಅದಕ್ಕಾಗಿ ಎಲ್ಲಿ ಆವಶ್ಯಕವಿದೆಯೋ ಅಲ್ಲಿ ಅನಿವಾರ್ಯವಾಗಿ ಆಂಗ್ಲ ಭಾಷೆಯನ್ನು ಉಪಯೋಗಿಸುವುದು ಯೋಗ್ಯವಾಗಿದೆ. ಕೇವಲ ತಮ್ಮ ವಿದ್ವತ್ತನ್ನು ತೋರಿಸಲು ಆಂಗ್ಲ ಭಾಷೆಯನ್ನು ಉಪಯೋಗಿಸಬಾರದು. ಕೇವಲ ಆಂಗ್ಲ ಭಾಷೆಯಲ್ಲಿ ಮಾತನಾಡಲು ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸುತ್ತಿದ್ದರೆ, ಅದು ಅಯೋಗ್ಯವಾಗಿದೆ. ಆಂಗ್ಲದಲ್ಲಿ ಮಾತನಾಡಿದರೆ ಆಗುವ ಲಾಭದೊಂದಿಗೆ ಅದರಿಂದಾಗುವ ಸಾಂಸ್ಕೃತಿಕ ಹಾನಿಯನ್ನು ಕೂಡ ವಿಚಾರ ಮಾಡಬೇಕು. ಆಂಗ್ಲದಲ್ಲಿ ಮಾತನಾಡುವ ಕಲೆಯನ್ನು ಇತರ ಪ್ರಕಾರದಿಂದಲೂ ಸಾಧಿಸಬಹುದು, ಎಂಬುದನ್ನು ಗಮನದಲ್ಲಿಡಬೇಕು. ಇತರ ಭಾಷೆ ಕಲಿಯುತ್ತಿರುವಾಗಲೂ (ಉದಾ: ಜರ್ಮನ್, ಫ್ರೆಂಚ್‌ ಇತ್ಯಾದಿ) ನಾವು ಇದೇ ದೃಷ್ಟಿಕೋನವಿಡುತ್ತೇವೆ. ನಮ್ಮ ಮಕ್ಕಳು ಇಂದು ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಕಲಿಯುತ್ತಿದ್ದರೆ, ಅವರ ಮೇಲೆ ನಮ್ಮ ಸಂಸ್ಕೃತಿಯ ಸಂಸ್ಕಾರವನ್ನು ಇತರ ಮಾಧ್ಯಮಗಳಿಂದ ಹೇಗೆ ಮಾಡಬಹುದು, ಎಂಬುದರ ಕಡೆಗೆ ಗಮನ ನೀಡುವುದು ಆವಶ್ಯಕವಾಗಿದೆ. ತಮ್ಮ ಭಾಷೆಯ ಬಗ್ಗೆ ಅಭಿಮಾನವಿಡುವುದು ಎಂದರೆ ನಮ್ಮ ರಾಷ್ಟ್ರದ ಬಗ್ಗೆ ಮತ್ತು ಸ್ವಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಇಡುವುದಾಗಿದೆ. (ಆಧಾರ : ಜಾಲತಾಣ www.hindujagruti.org)