ಶ್ರೀರಾಮಮಂದಿರದಲ್ಲಿನ ಶ್ರೀರಾಮನ ವಿಗ್ರಹಕ್ಕೆ ನೇಪಾಳದ ಗಂಡಕಿ ನದಿಯಲ್ಲಿನ ಶಾಲಿಗ್ರಾಮ ಶಿಲೆ !

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮ ಜನ್ಮಭೂಮಿಯಲ್ಲಿನ ಭವ್ಯವಾದ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹಕ್ಕಾಗಿ ನೇಪಾಳದ ಗಂಡಕಿ ನದಿ ಪ್ರದೇಶದಿಂದ 7*5 ಅಡಿ ಆಕಾರದ ಶಾಲಿಗ್ರಾಮ್ ವನ್ನು ಹುಡುಕಿ ತೆಗೆಯಲಾಗಿದೆ. ದೇವಾಲಯದ ಟ್ರಸ್ಟ್‌ನ ಸದಸ್ಯರಾದ ಕಾಮೇಶ್ವರ ಚೌಪಾಲ್ ಅವರನ್ನು ನೇಪಾಳದ ಗಂಡಕಿ ನದಿ ಪರಿಸರದಲ್ಲಿ ವಿಗ್ರಹಕ್ಕಾಗಿ ಶಿಲೆಯನ್ನು ಹುಡುಕಲು ಕಳುಹಿಸಲಾಗಿತ್ತು. ಜನಕಪುರದಲ್ಲಿ ಜನವರಿ 27 ರಂದು ವಸಂತ ಪಂಚಮಿಯ ದಿನ ಶಿಲೆಯನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಗುವದು. ಅದರ ನಂತರ, ಈ ಶಿಲೆಯನ್ನು ಫೆಬ್ರವರಿ 2 ರವರೆಗೆ ಮಧುಬನಿ-ದರಭಂಗಾ ಮಾರ್ಗವಾಗಿ ಜನಕ್‌ಪುರದಿಂದ ಅಯೋಧ್ಯೆಗೆ ತರಲಾಗುವುದು. ಈ ಶಿಲೆಯ ಮೂಲಕ ಐದೂವರೆ ಅಡಿ ಎತ್ತರದ ಶ್ರೀರಾಮನ ವಿಗ್ರಹವನ್ನು ನಿಂತಿರುವ ಭಂಗಿಯಲ್ಲಿ ಕೆತ್ತಲಾಗುವುದು.

ಶಾಲಿಗ್ರಾಮ ಶಿಲೆಯಿಂದ ಕೆತ್ತಲಾದ ವಿಗ್ರಹದ 6 ಲಾಭ !

ಕಾಮೇಶ್ವರ ಚೌಪಾಲ್ ಇವರು, ಅಯೋಧ್ಯೆಯಲ್ಲಿ ರಾಮಲಲಾ ವಿಗ್ರಹವನ್ನು ಈ ಶಿಲೆಯಿಂದ ಮಾಡಲಾಗುವುದು ಎಂದು ನೇಪಾಳದಲ್ಲಿರುವ ಭಕ್ತರಿಗೆ ತಿಳಿದಾಗ, ಆಗಲಿಂದಲೇ ಈ ಶಿಲೆಯನ್ನು ಪೂಜಿಸಲು ಮತ್ತು ಸ್ವಾಗತಿಸಲು ಅವರು ತುಂಬಾ ಉತ್ಸುಕರಾಗಿದ್ದಾರೆ ಎಂದು ಹೇಳಿದರು. ಈ ಶಾಲಿಗ್ರಾಮ ಶಿಲೆ ಅತ್ಯಂತ ದುಬಾರಿ; ಆದರೆ ನೇಪಾಳ ಸರಕಾರದ ನೆರವಿನಿಂದ ಇದನ್ನು ಪಡೆಯಲಾಗಿದೆ. ಗಂಡಕಿ ನದಿಯಿಂದ ಈ ಶಿಲೆಯನ್ನು ಆಯ್ಕೆ ಮಾಡಲು ನೇಪಾಳದ ಪುರಾತತ್ವ ಇಲಾಖೆಯ ತಜ್ಞರ ಸಹಾಯ ಪಡೆಯಲಾಗಿತ್ತು. ಈ ಶಾಲಿಗ್ರಾಮ ಶಿಲೆಗೆ ಧಾರ್ಮಿಕ ಮಹತ್ವ ಇದೆ. ಈ ಶಿಲೆಗೆ ವಿಷ್ಣುವಿನ ವಾಸಸ್ಥಾನ ಎಂದು ನಂಬಲಾಗಿದೆ. ಶಾಲಿಗ್ರಾಮದ ಶಿಲೆಯಿಂದ ಮಾಡಿದ ವಿಗ್ರಹವು 6 ಪ್ರಯೋಜನಗಳನ್ನು ತರುತ್ತದೆ, ಸಂತೋಷದ ಜೀವನ, ಸಮೃದ್ಧಿ, ದುಷ್ಟ ಶಕ್ತಿಗಳಿಂದ ರಕ್ಷಣೆ, ಉತ್ತಮ ಆರೋಗ್ಯ, ಸಾರ್ವತ್ರಿಕ ಆನಂದ ಮತ್ತು ದೇವರ ಅನುಗ್ರಹ ಎಂದು ನಂಬಲಾಗಿದೆ.

ಶ್ರೀರಾಮ ನವಮಿಯ ದಿನದಂದು ಮಧ್ಯಾಹ್ನ 12 ಗಂಟೆಗೆ ವಿಗ್ರಹದ ಮೇಲೆ ಸೂರ್ಯನ ಕಿರಣಗಳು ಬೀಳುತ್ತವೆ ! – ಶ್ರೀರಾಮ ಮಂದಿರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ‌

ಶ್ರೀರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ ಅವರ ಪ್ರಕಾರ, ದೇಶದ ಹೆಸರಾಂತ ಕುಶಲಕರ್ಮಿಗಳ 3 ಸದಸ್ಯರ ತಂಡವು ಶ್ರೀರಾಮನ ವಿಗ್ರಹದ ವಿನ್ಯಾಸ ಮತ್ತು ಪ್ರತಿಕೃತಿಯನ್ನು ಅಂತಿಮಗೊಳಿಸಲು ಕೆಲಸ ಮಾಡುತ್ತಿದೆ. ನಿಂತಿರುವ ವಿಗ್ರಹದ ಅನೇಕ ಸಣ್ಣ ಪ್ರತಿಕೃತಿಗಳನ್ನು ಇಲ್ಲಿಯವರೆಗೆ ಮಾಡಲಾಗಿದೆ. ದೇವಾಲಯದ ಟ್ರಸ್ಟ್ ಅವುಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡುತ್ತದೆ. ಈ ವಿಗ್ರಹವು ಐದೂವರೆ ಅಡಿ ಎತ್ತರ ಇರಲಿದೆ. ಇದರ ಕೆಳಗೆ ಅಂದಾಜು 3 ಅಡಿ ಎತ್ತರದ ವೇದಿಕೆ ಇರಲಿದೆ. ಶ್ರೀರಾಮ ನವಮಿಯ ದಿನದಂದು ಮಧ್ಯಾಹ್ನ 12 ಗಂಟೆಗೆ ರಾಮನ ಜನನವಾದಾಗ ಸೂರ್ಯನ ಕಿರಣಗಳು ರಾಮಲಲಾನ ಹಣೆಯ ಮೇಲೆ ಬಿದ್ದು ಪ್ರಕಾಶಿಸುವಂತೆ ಖಗೋಳಶಾಸ್ತ್ರಜ್ಞರು ದೇವಾಲಯದ ವಿನ್ಯಾಸಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಮಕರ ಸಂಕ್ರಾಂತಿಯ ಶುಭ ಮುಹೂರ್ತದಲ್ಲಿ ಶ್ರೀರಾಮ ಮಂದಿರದಲ್ಲಿ ರಾಮಲಲಾ ಅಭಿಷೇಕದ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ.