ಸರಸಂಘಚಾಲಕರನ್ನು ‘ರಾಷ್ಟ್ರಪಿತಾ’ ಎಂದು ಸಂಬೋಧಿಸಿಸ ಇಮಾಮರಿಗೆ ಇಂಗ್ಲೆಂಡ್ ಮತ್ತು ಪಾಕಿಸ್ತಾನದಿಂದ ಶಿರಚ್ಛೇದದ ಬೆದರಿಕೆಗಳು

(ಇಮಾಮ್ ಎಂದರೆ ಮಸೀದಿಯಲ್ಲಿ ಪ್ರಾರ್ಥನೆ ನಡೆಸುವವನು)

ನವ ದೆಹಲಿ – ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಇವರನ್ನು ಕೆಲ ದಿನಗಳ ಹಿಂದೆ ‘ರಾಷ್ಟ್ರಪಿತಾ’ ಎಂದು ಸಂಬೋದಿಸಿದ್ದ ‘ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ’ ನ ಮುಖ್ಯಸ್ಥರಾದ ಉಮರ್ ಅಹ್ಮದ್ ಇಲಿಯಾಸಿ ಅವರಿಗೆ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಸೆಪ್ಟೆಂಬರ್ ೨೩ ರಿಂದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಸೇರಿದಂತೆ ಭಾರತದ ವಿವಿಧ ಭಾಗಗಳಿಂದ ನೂರಾರು ದೂರವಾಣಿ ಕರೆಗಳ ಮೂಲಕ ಈ ಬೆದರಿಕೆಗಳನ್ನು ನೀಡಲಾಗಿದೆ. ಈ ಸಂಬಂಧ ಅವರು ನೀಡಿದ ದೂರಿನ ಮೇರೆಗೆ ದೆಹಲಿಯ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಈ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ ಅಥವಾ ತಲೆಬಾಗುವುದಿಲ್ಲ’, ಎಂದು ಇಲಿಯಾಸಿ ಅವರು ಸ್ಪಷ್ಟಪಡಿಸಿದ್ದಾರೆ.

ಸರಸಂಘಚಾಲಕರು ಸಹಸರ್ಕಾರ್ಯವಾಹರಾದ ಡಾ. ಕೃಷ್ಣ ಗೋಪಾಲ್, ಅಖಿಲ ಭಾರತ ಸಂವಹನ ಮುಖ್ಯಸ್ಥ ರಾಮ್ ಲಾಲ್ ಮತ್ತು ಹಿರಿಯ ಪ್ರಚಾರಕ ಇಂದ್ರೇಶ್ ಕುಮಾರ್ ಅವರೊಂದಿಗೆ ಮಸೀದಿಗೆ ತೆರಳಿ ಉಮರ್ ಅಹಮದ್ ಇಲಿಯಾಸಿ ಅವರನ್ನು ಭೇಟಿಯಾಗಿದ್ದರು. ಅಂದಿನಿಂದ ಇಮಾಮ್ ಉಮರ್ ಅಹಮದ್ ಇಲಿಯಾಸಿ ಅವರಿಗೆ ಬೆದರಿಕೆಗಳು ಬರುತ್ತಿವೆ. ಹಾಗಾಗಿ ಭದ್ರತಾ ಕಾರಣಗಳಿಂದಾಗಿ ಅವರು ತಮ್ಮ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನೂ ರದ್ದುಗೊಳಿಸಿದ್ದಾರೆ.