ಆತ್ಮಹತ್ಯೆ !

ತಾನೇ ತನ್ನ ಜೀವಿತಾವಧಿಯನ್ನು ಮುಗಿಸಿ ಬಿಡುವುದಕ್ಕೆ ಆತ್ಮಹತ್ಯೆ ಎನ್ನುತ್ತಾರೆ. ಯಾವಾಗ ಯಾವುದಾದರೊಬ್ಬ ವ್ಯಕ್ತಿಯು ಅವನ ಜೀವನವನ್ನು ಮುಗಿಸುವ ನಿರ್ಣಯವನ್ನು ತೆಗೆದುಕೊಳ್ಳುತ್ತಾನೆಯೋ, ಆಗ ಅವನ ಮನಸ್ಸಿನಲ್ಲಿರುವ ವಿಚಾರ ಮತ್ತು ಭಾವನೆ ಅಥವಾ ನಿರಾಶೆ ಇವುಗಳು ಎಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿರಬಹುದು, ಎಂಬ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ. ಅನೇಕ ದಿನಗಳಿಂದ ನಿರಾಶೆಯ ವಿಚಾರಗಳು, ವೈಫಲ್ಯ, ಒತ್ತಡದ ವಿಚಾರಗಳು, ಅತ್ಯಂತ ನಕಾರಾತ್ಮಕ ವಿಚಾರಗಳಿಂದ ಜೀವನವನ್ನು ಮುಗಿಸುವ ವಿಚಾರವು ವ್ಯಕ್ತಿಯ ಮನಸ್ಸಿನಲ್ಲಿ ಬರುತ್ತವೆ. ತೀವ್ರ ಮತ್ತು ಘೋರ ನಿರಾಶೆಯು, ಆತ್ಮಹತ್ಯೆಯ ಹಿಂದಿನ ಮುಖ್ಯ ಕಾರಣವಾಗಿದೆ. ತಕ್ಷಣ ಮನಸ್ಸಿನ ಸ್ಥಿತಿಯನ್ನು ಜಯಿಸಿದರೆ ಮಾತ್ರ ಆತ್ಮಹತ್ಯೆಯನ್ನು ತಡೆಯಬಹುದು.

ಹಿಂದಿನ ಕಾಲದಲ್ಲಿ ಕೂಡು ಕುಟುಂಬ ಪದ್ಧತಿಯಲ್ಲಿ ಹಿರಿಯರ ಮಾರ್ಗದರ್ಶನವೂ ಲಭಿಸುತ್ತಿತ್ತು. ಎಲ್ಲ ಜನರು ಸುರಕ್ಷಿತರಾಗಿರುತ್ತಿದ್ದರು. ಈಗ ವಿಭಕ್ತ ಕುಟುಂಬಪದ್ಧತಿಯಲ್ಲಿ ಅಸುರಕ್ಷತೆ ಹೆಚ್ಚಳವಾಗಿದೆ. ಸ್ವಾರ್ಥ ಮನೋಭಾವವು  ಸಹ ಹೆಚ್ಚಾಗಿದೆ. ಸಂಬಂಧಿಕರಲ್ಲಿ ನಂಬಿಕೆ ಇರುವುದಿಲ್ಲ. ಸಂಬಂಧದಲ್ಲಿ ಕೃತಕತೆ ಬಂದಿದೆ. ಕುಟುಂಬದಲ್ಲಿ ಮನಃಪೂರ್ವಕ ಮಾತುಕತೆಯು ಸಹ ಕಡಿಮೆಯಾಗಿದೆ ತನ್ನಿಂದ ಅಥವಾ ಇತರರಿಂದ ಇರುವ ಅಪೇಕ್ಷೆಗಳು ಆಗಾಗ ಭಂಗವಾದರೆ ಅದರಿಂದ ನಿರಾಶೆಯಾಗಿ ಅನೇಕ ಜನರು ಆತ್ಮಹತ್ಯೆಗೆ ಬಲಿಯಾಗುತ್ತಾರೆ. ನಗರಗಳಂತಹ ಸ್ಥಳಗಳಲ್ಲಿ ಸ್ಪರ್ಧೆಯಿಂದಲೂ ನಿರಾಶೆ ಬರುವ ಪ್ರಮಾಣವು ಹೆಚ್ಚಾಗಿರುತ್ತದೆ. ವ್ಯಕ್ತಿಗಳು ಜೀವಕ್ಕೆ ಕುತ್ತು ತರುವಂತಹ ಸ್ಪರ್ಧೆಯಲ್ಲಿ ಗೆಲ್ಲದಿದ್ದರೆ, ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳಿಂದ ಹಿಡಿದು ಉದ್ಯಮಿಗಳ ವರೆಗೆ ಪ್ರತಿಯೊಬ್ಬರು ಸ್ಪರ್ಧೆಯ ಏರಿಳಿತದಲ್ಲಿಯೇ ಸುತ್ತುತ್ತಿರುತ್ತಾರೆ. ಅದರಿಂದ ಬಂದಿರುವ ವೈಫಲ್ಯವು ಆತ್ಮಹತ್ಯೆಗೆ ಸ್ಥೂಲದಲ್ಲಿನ ಕಾರಣವಾಗುತ್ತದೆ. ಸ್ಥೂಲದಿಂದಲೂ ಜೈವಿಕ, ಮಾನಸ ಶಾಸ್ತ್ರೀಯ ಮತ್ತು ಸಾಮಾಜಿಕ ಕಾರಣಗಳೂ ಆತ್ಮಹತ್ಯೆಯ ಕಾರಣಗಳೆಂದು ಕಂಡುಬರುತ್ತವೆ. ಎಲ್ಲಕ್ಕಿಂತ ಹೆಚ್ಚು ಮೇಲಿನ ವಿವಿಧ ಕಾರಣಗಳಿಂದ ಬಂದ ನಿರಾಶೆ ಮತ್ತು ಒತ್ತಡಗಳಿಂದ ಶೇ. ೭೦ ರಿಂದ ೮೦ ರಷ್ಟು ಆತ್ಮಹತ್ಯೆಗಳಾಗುತ್ತವೆ.

ಸೂಕ್ತ ಸಮಯಕ್ಕೆ ಯೋಗ್ಯ ಚಿಕಿತ್ಸೆಯನ್ನು ಪ್ರಾರಂಭಿಸಿದರೆ ‘ನಿರಾಶೆಯಿಂದ ಆತ್ಮಹತ್ಯೆ’ ಈ ಪ್ರಯಾಣವನ್ನು ತಡೆಯಬಹುದು

‘ಯಾವುದೇ ವ್ಯಕ್ತಿಯು ಇದ್ದಕ್ಕಿದ್ದಂತೆಯೇ ಆತ್ಮಹತ್ಯೆಯನ್ನು ಮಾಡಿಕೊಳ್ಳುವುದಿಲ್ಲ. ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಅನೇಕ ವ್ಯಕ್ತಿಗಳಲ್ಲಿ ಬದಲಾವಣೆಗಳನ್ನು ಗಮನಿಸಬಹುದು. ಇಂತಹ ಅನೇಕ ವ್ಯಕ್ತಿಗಳು ತಾವು ಆತ್ಮಹತ್ಯೆಯನ್ನು ಮಾಡುವುದಾಗಿ ಆಗಾಗ ಮಾತನಾಡುತ್ತಿರುತ್ತಾರೆ; ಆದರೆ ಅವರತ್ತ ಸಾಮಾನ್ಯವಾಗಿ ದುರ್ಲಕ್ಷಿಸಲಾಗುತ್ತದೆ. ಇಂತಹ ವ್ಯಕ್ತಿಗಳು ಕೇವಲ ಮಾತನಾಡುತ್ತಾರೆ, ಕೃತಿಯನ್ನು ಮಾಡುವುದಿಲ್ಲ, ಎಂಬುದು ತಪ್ಪು ಕಲ್ಪನೆಯಾಗಿದೆ. ಇಂತಹ ವ್ಯಕ್ತಿಗಳ ಎಚ್ಚರಿಕೆಯನ್ನು ಗಾಂಭೀರ್ಯದಿಂದ ತೆಗೆದುಕೊಂಡು ತಕ್ಷಣ ಹೆಜ್ಜೆಯನ್ನಿಡಬೇಕು. ಅವರನ್ನು ಮನಸ್ಸಿನ ವಿಚಾರವನ್ನು ಮುಕ್ತಮನಸ್ಸಿನಿಂದ ಮಾತನಾಡುವಂತೆ ಮಾಡಬೇಕು, ಅಲ್ಲದೇ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ತಿಳಿಸಿ ಹೇಳಬೇಕು ಮತ್ತು ಅವಶ್ಯಕತೆಗನುಸಾರ ಚಿಕಿತ್ಸೆಯನ್ನು ನೀಡಿದರೆ, ಅವರ ಆತ್ಮಹತ್ಯೆಗಳನ್ನು ತಡೆಯಬಹುದು’, ಎಂದು ಹಿರಿಯ ಮನೋವಿಕಾರ ತಜ್ಞ ಡಾ. ಸಂಜೀವ ಸಾವಜಿಯವರು ಹೇಳಿದ್ದಾರೆ. ತಜ್ಞರು ಹೇಳಿದಂತೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ಪ್ರಾರಂಭಿಸಿದರೆ ‘ನಿರಾಶೆಯಿಂದ ಆತ್ಮಹತ್ಯೆ’ ಈ ಪ್ರಯಾಣವನ್ನು ತಡೆಯಬಹುದು !