ತೃಣಮೂಲ ಕಾಂಗ್ರೆಸ್ ವಿರುದ್ಧ ಹಾಗೂ ಬಿಜೆಪಿಗೆ ಮತ ನೀಡಿದರೆ ರಕ್ತಪಾತ ಹರಿಯುತ್ತದೆ ! – ಬಂಗಾಲದಲ್ಲಿ ಗೋಡೆಯ ಮೇಲೆ ಬೆದರಿಕೆ !

ಬಂಗಾಲದಲ್ಲಿ ಪ್ರಜಾಪ್ರಭುತ್ವವು ಹದಗೆಟ್ಟಿದೆ, ಎಂಬುದು ಈ ಬೆದರಿಕೆಯಿಂದ ಬಹಿರಂಗವಾಗುತ್ತದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಶೋಚನೀಯ ಸ್ಥಿತಿಯನ್ನು ಗಮನಿಸಿದರೆ, ನಾಳೆ ಈ ಬೆದರಿಕೆಯಂತೆ ಏನಾದರೂ ಸಂಭವಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ; ಆದ್ದರಿಂದ ಹಾಗಾಗುವ ಮೊದಲೇ ಇಲ್ಲಿನ ಸರಕಾರವನ್ನು ವಿಸರ್ಜಿಸಬೇಕು ಮತ್ತು ರಾಷ್ಟ್ರಪತಿಗಳ ಆಡಳಿತವನ್ನು ಜಾರಿಗೆ ತರಬೇಕು !

ಕೋಲಕಾತಾ (ಬಂಗಾಲ) – ಬಂಗಾಲದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ; ಆದರೆ ಅದಕ್ಕೂ ಮುಂಚೆಯೇ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ರಾಜಕೀಯ ಘರ್ಷಣೆಯು ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ನಾಡಿಯಾ ಜಿಲ್ಲೆಯ ಒಂದು ಗೋಡೆಯ ಮೇಲೆ ನಾಗರಿಕರಿಗೆ ಬೆದರಿಕೆ ಹಾಕುವ ಒಂದು ಸೂಚನೆಯನ್ನು ಬರೆದಿರುವುದು ಕಂಡುಬಂದಿದೆ. ‘ತೃಣಮೂಲ ಕಾಂಗ್ರೆಸ್‌ನ ವಿರುದ್ಧ ಒಂದೇಒಂದು ಮತ ಚಲಾಯಿಸಿದರೂ ರಕ್ತದ ಹೊಳೆ ಹರಿಯಲಿದೆ. ಬಿಜೆಪಿಗೆ ಒಂದೇಒಂದು ಮತ ನೀಡಿದ್ದಲ್ಲಿ, ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ’ ಎಂದು ಬಂಗಾಲಿ ಭಾಷೆಯಲ್ಲಿ ಬರೆಯಲಾಗಿದೆ. ಬೆದರಿಕೆಯನ್ನು ಯಾರು ಬರೆದಿದ್ದಾರೆ ಎಂಬುದು ಇಲ್ಲಿವರೆಗೆ ಸ್ಪಷ್ಟವಾಗಿಲ್ಲ. ಬಿಜೆಪಿಯ ಜಗನ್ನಾಥ ಸರಕಾರ್ ಹಾಗೂ ತೃಣಮೂಲದ ಅರಿಂದಮ ಭಟ್ಟಾಚಾರ್ಯ ಇವರು ಅನುಕ್ರಮವಾಗಿ ಈ ಕ್ಷೇತ್ರದ ಸಂಸದರು ಮತ್ತು ಶಾಸಕರಾಗಿದ್ದಾರೆ.

೧. ನಾಡಿಯಾದಲ್ಲಿ ಈ ಬೆದರಿಕೆಯ ಮೊದಲು ಡಿಸೆಂಬರ್ ೧೯ ರಂದು ರಾತ್ರಿ ಉತ್ತರ ೨೪ ಪರಗನಾ ಜಿಲ್ಲೆಯ ಬರೇಕಪುರದಲ್ಲಿ ಬಿಜೆಪಿ ಕಚೇರಿಗೆ ಕೆಲವು ಜನರು ಬೆಂಕಿ ಹಚ್ಚಿದ್ದರು. ಆದ್ದರಿಂದ ಈ ಪ್ರದೇಶದಲ್ಲೂ ಉದ್ವಿಗ್ನ ಪರಿಸ್ಥಿತಿಯು ಉಂಟಾಗಿತ್ತು. ತೃಣಮೂಲ ಶಾಸಕ ಶೀಲಭದ್ರ ದತ್ತ ಅವರು ಗೃಹ ಸಚಿವ ಅಮಿತ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ ನಂತರ ಈ ಘಟನೆ ನಡೆದಿದೆ.

೨. ಪ್ರಸ್ತುತ ಬಿಜೆಪಿ ಮುಖಂಡ ಮತ್ತು ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಕಾಲ ಬಂಗಾಲದ ಪ್ರವಾಸದಲ್ಲಿದ್ದಾರೆ. ಅವರು ಮಿದನಾಪುರದಲ್ಲಿ ಸಭೆಯನ್ನು ಉದ್ದೇಶಿಸಿ ಮಾರ್ಗದರ್ಶನವನ್ನೂ ಮಾಡಿದ್ದಾರೆ.