ಜನರು ಮಾಸ್ಕಅನ್ನು ಸರಿಯಾಗಿ ಧರಿಸದಿದ್ದರೆ, ಮಾರ್ಗಸೂಚಿಗಳ ಉಪಯೋಗ ಏನು ? – ಸರ್ವೋಚ್ಚ ನ್ಯಾಯಾಲಯ

ಸ್ವಾತಂತ್ರ್ಯ ಬಂದ ೭೪ ವರ್ಷಗಳಲ್ಲಿ ಜನರಿಗೆ ಶಿಸ್ತು ಕಲಿಸಲಾಗಿಲ್ಲ ಮತ್ತು ಆರೋಗ್ಯದ ಬಗ್ಗೆ ಗಾಂಭೀರ್ಯ ಬಿಂಬಿಸದೇ ಇದ್ದರಿಂದ ಇಂದು ಕೊರೋನಾದ ವಿಪತ್ತಿನಿಂದ ದುಷ್ಪರಿಣಾಮಗಳು ಎದ್ದು ಕಾಣಿಸುತ್ತಿವೆ. ಇದಕ್ಕೆ ಇಲ್ಲಿಯವರೆಗೆ ಎಲ್ಲಾ ಪಕ್ಷದ ಆಡಳಿತಗಾರರು ಕಾರಣಕರ್ತರಾಗಿದ್ದಾರೆ !

ನವ ದೆಹಲಿ : ಹೆಚ್ಚಿನ ಜನರು ಮಾಸ್ಕ್‌ಗಳನ್ನು ಸರಿಯಾಗಿ ಧರಿಸದಿದ್ದರೆ, ಇಂತಹ ಮಾರ್ಗಸೂಚಿಗಳ ಉಪಯೋಗ ಏನು ?, ಎಂಬ ಕಟುವಾದ ಶಬ್ಧಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತು. ಗುಜರಾತಿನ ರಾಜಕೋಟದಲ್ಲಿ ಕೊರೋನಾ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ ೬ ರೋಗಿಗಳ ಸಾವನ್ನಪ್ಪಿದ ಪ್ರಕರಣದ ವಿಚಾರಣೆ ನಡೆಸುತ್ತಿರುವಾಗ ನ್ಯಾಯಾಲಯ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಲಯವು ಈ ವಿಷಯವನ್ನು ಸ್ವತಃ ಹಸ್ತಕ್ಷೇಪ ಮಾಡಿ ವಿಚಾರಣೆಯನ್ನು ಆರಂಭಿಸಿದೆ. ನವೆಂಬರ್ ೨೭ ರಂದು ಆಸ್ಪತ್ರೆಯಲ್ಲಿ ಬೆಂಕಿ ತಗಲಿತ್ತು.

೧. ನ್ಯಾಯಾಲಯವು, ನಾವು ಮದುವೆ ಸಮಾರಂಭ ಮತ್ತು ರಾಜಕೀಯ ಸಭೆಗಳು ನೋಡುತ್ತಿದ್ದೇವೆ. ಅದರಲ್ಲಿ ಶೇ. ೬೦% ಕ್ಕಿಂತ ಹೆಚ್ಚು ಜನರು ಮಾಸ್ಕಗಳನ್ನು ಧರಿಸುವುದಿಲ್ಲ. ಯಾರು ಧರಿಸುತ್ತಾರೆ, ಅವರ ಮಾಸ್ಕಗಳು ಕುತ್ತಿಗೆಗೆ ತೂಗಾಡುತ್ತಿರುತ್ತದೆ. ಇದು ಕರೋನಾದ ಎರಡನೇ ಅಲೆಯಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇದು ಮುಂದುವರಿದರೆ, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಹೇಳಿದೆ.

೨. ಕೇಂದ್ರ ಸರಕಾರದ ನ್ಯಾಯವಾದಿ ತುಷಾರ್ ಮೆಹತಾ ಮಾತನಾಡಿ, “ಬೆಂಕಿ ಘಟನೆಗಳ ಬಗ್ಗೆ ಈಗಾಗಲೇ ರಾಜ್ಯ ಸರಕಾರಗಳಿಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ಇದೀಗ ಅದನ್ನು ಹೊಸದಾಗಿ ಜಾರಿಗೆ ತರಲಾಗುವುದು” ಎಂದು ಹೇಳಿದರು. ಈ ಬಗ್ಗೆ ನ್ಯಾಯಾಲಯವು, “ಕೇವಲ ಮಾರ್ಗಸೂಚಿಗಳನ್ನು ತಯಾರಿಸುವುದು ಮಾತ್ರವಲ್ಲ, ಅವುಗಳನ್ನು ಅನುಸರಿಸುವುದು ಸಹ ಅಗತ್ಯವಾಗಿರುತ್ತದೆ. ಇದಕ್ಕಾಗಿ ಕೇಂದ್ರವು ಮುಂದಾಳತ್ವ ತೆಗೆದುಕೊಳ್ಳಬೇಕು.” ಎಂದು ಹೇಳಿದೆ (ನ್ಯಾಯಾಲಯ ಇದನ್ನು ಏಕೆ ಹೇಳಬೇಕಾಗುತ್ತಿದೆ ? ಕೇಂದ್ರ ಸರಕಾರಕ್ಕೆ ಇದು ಅರ್ಥವಾಗುವುದಿಲ್ಲವೇ ? ಅಥವಾ ‘ಮಾರ್ಗಸೂಚಿ ನೀಡಿದರೆ, ನಮ್ಮ ಕೆಲಸ ಮುಗಿಯಿತು’, ಎಂದು ಸರಕಾರಕ್ಕೆ ಅನಿಸುತ್ತದೆಯೇ ? – ಸಂಪಾದಕ)