ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದ ಮುಂಬೈ ಉಚ್ಚ ನ್ಯಾಯಾಲಯದ ನಿರ್ಧಾರದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ!

2006 ಮುಂಬೈ ರೈಲು ಸರಣಿ ಬಾಂಬ್ ಸ್ಫೋಟ ಪ್ರಕರಣ

ನವ ದೆಹಲಿ – ಮುಂಬೈ ಉಪನಗರ ರೈಲುಗಳಲ್ಲಿ (ಲೋಕಲ್ ರೈಲುಗಳಲ್ಲಿ) 2006 ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ಪ್ರಕರಣದಲ್ಲಿ ಭಯೋತ್ಪಾದನಾ ವಿರೋಧಿ ದಳ 28 ಮುಸ್ಲಿಮರು  ಆರೋಪಿಗಳೆಂದು ಹೇಳಿತ್ತು. 13 ಜನರನ್ನು ಬಂಧಿಸಿದ ನಂತರ, ಕಳೆದ ವರ್ಷ ಜುಲೈನಲ್ಲಿ ಮುಂಬೈ ಉಚ್ಚ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು. ಈ ನಿರ್ಧಾರವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತ್ತು; ಆದರೆ ಸುಪ್ರೀಂ ಕೋರ್ಟ್ ಕೂಡ ಆರೋಪಿಗಳ ದೋಷರಹಿತತೆ ಮತ್ತು ಅವರ ಬಿಡುಗಡೆಯ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಸ್ಪಷ್ಟವಾಗಿ ನಿರಾಕರಿಸಿತು.

ಸೆಪ್ಟೆಂಬರ್ 2015 ರಲ್ಲಿ ವಿಶೇಷ ಮಕೋಕಾ (ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನ್ಯಾಯಾಲಯವು ಈ ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಆಗ ನ್ಯಾಯಾಲಯವು 5 ಆರೋಪಿಗಳಿಗೆ ಮರಣದಂಡನೆ ಮತ್ತು 7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ಒಬ್ಬರನ್ನು ದೋಷಮುಕ್ತಗೊಳಿಸಿತ್ತು. ಇದರ ನಂತರ ಮಹಾರಾಷ್ಟ್ರ ಸರ್ಕಾರ ಮರಣದಂಡನೆ ಅನುಮೋದಿಸಲು ಮುಂಬೈ ಉಚ್ಚ ನ್ಯಾಯಾಲಯದ ಮೊರೆ ಹೋಗಿತ್ತು. ಮತ್ತೊಂದೆಡೆ ದೋಷಿಗಳು ಈ ಶಿಕ್ಷೆಯ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಬಳಿಕ ಜುಲೈ 2025 ರಲ್ಲಿ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು.

ಸಂಪಾದಕೀಯ ನಿಲುವು

ಒಂದು ವೇಳೆ ಎಲ್ಲಾ ಆರೋಪಿಗಳು ನಿರಪರಾಧಿಗಳಾಗಿದ್ದರೆ, ಈ ಸ್ಫೋಟಗಳನ್ನು ನಡೆಸಿದ್ದು ಯಾರು?, ಇದಕ್ಕೆ ಉತ್ತರ ಯಾರು ಮತ್ತು ಯಾವಾಗ ನೀಡುತ್ತಾರೆ?