ಪಾಕಿಸ್ತಾನದ ೨೩ ವ್ಯಕ್ತಿಗಳು ‘ಭಯೋತ್ಪಾದಕರು’ ಎಂದು ಘೋಷಣೆ

​ಗೃಹ ಸಚಿವಾಲಯದ ಕ್ರಮ

​ನವ ದೆಹಲಿ – ಭಾರತದ ಗೃಹ ಸಚಿವಾಲಯವು ಪಾಕಿಸ್ತಾನದ ೨೩ ವ್ಯಕ್ತಿಗಳನ್ನು ‘ಭಯೋತ್ಪಾದಕರು’ ಎಂದು ಘೋಷಿಸಿದೆ. ಈ ಕ್ರಮವನ್ನು ‘ಅನ್‌ ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್’ (ಯುಎಪಿಎ) ಅಂದರೆ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ಯಡಿ ತೆಗೆದುಕೊಳ್ಳಲಾಗಿದೆ. ಸರಕಾರಿ ಆದೇಶದ ಪ್ರಕಾರ, ಈ ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಮತ್ತು ಇತರ ಸಂಘಟನೆಗಳಿಗೆ ಸಂಬಂಧಿಸಿದವರಾಗಿದ್ದಾರೆ. ಈ ೨೩ ಜನರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿರುವುದರಿಂದ, ಸಂಘಟನೆಯ ಒಟ್ಟು ಭಯೋತ್ಪಾದಕರ ಸಂಖ್ಯೆ ೮೦ಕ್ಕೆ ಏರಿದೆ.

​೧. ಈ ೨೩ ಭಯೋತ್ಪಾದಕರ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಜನರನ್ನು ನೇಮಕ ಮಾಡಿಕೊಳ್ಳುವುದು, ಅಕ್ರಮ ವಲಸೆ, ತರಬೇತಿ, ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ತಲುಪಿಸುವುದು ಮತ್ತು ದಾಳಿ ನಡೆಸಲು ಪಿತೂರಿ ನಡೆಸುವುದು ಮುಂತಾದ ಆರೋಪಗಳಿವೆ.

​೨. ಈ ೨೩ ಭಯೋತ್ಪಾದಕರಲ್ಲಿ ಅಬ್ದುಲ್ ರೌಫ್, ಹಫೀಜ್ ಖಾಲಿದ್ ವಲಿದ್ ಮತ್ತು ರಾಣಾ ಇಫ್ತಿಕಾರ್ ಇವರನ್ನು ಲಷ್ಕರ್-ಎ-ತೊಯ್ಬಾದ ಸಂಸ್ಥಾಪಕ ಹಫೀಜ್ ಸಯೀದ್‌ ನ ಆಪ್ತ ಸಹಚರರು ಎಂದು ಹೇಳಲಾಗುತ್ತಿದೆ. ಮೂವರು ವ್ಯಕ್ತಿಗಳು ೨೦೧೬ ರಲ್ಲಿ ನಗ್ರೋಟಾದಲ್ಲಿನ ಭಾರತೀಯ ಸೇನೆಯ ಶಿಬಿರದ ಮೇಲೆ ನಡೆಸಲಾದ ಭಯೋತ್ಪಾದಕ ದಾಳಿಯಲ್ಲಿ, ಹಾಗೂ ಇಬ್ಬರು ೨೦೧೮ ರಲ್ಲಿ ಸುಂಜವಾನ್‌ ನಲ್ಲಿನ ಸೇನಾ ನೆಲೆಯ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದರು.

​೩. ಭಯೋತ್ಪಾದಕರ ಪಟ್ಟಿಯಲ್ಲಿ ಈ ವ್ಯಕ್ತಿಗಳನ್ನು ಸೇರಿಸಿರುವುದರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಅವರ ನಿಧಿಯನ್ನು ತಡೆಯಲು, ಶಸ್ತ್ರಾಸ್ತ್ರ ಮಾರಾಟದ ಮೇಲೆ ನಿಷೇಧ ಹೇರಲು ಮತ್ತು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂತಾದ ಅಧಿಕಾರ ಸಿಗಲಿವೆ.

​೪. ೨೦೧೯ ರಲ್ಲಿ ಭಯೋತ್ಪಾದಕ ವಿರೋಧಿ ಕಾಯ್ದೆಯ ತಿದ್ದುಪಡಿಯ ಮೂಲಕ ವೈಯಕ್ತಿಕ ಭಯೋತ್ಪಾದಕರ ಪಟ್ಟಿಯನ್ನು ಸಿದ್ಧಪಡಿಸುವ ನಿಬಂಧನೆಯನ್ನು ಮಾಡಲಾಗಿತ್ತು. ಈ ಕಾಯ್ದೆಯಲ್ಲಿ ಮೊದಲು ಕೇವಲ ‘ಭಯೋತ್ಪಾದಕ ಸಂಘಟನೆ’ ಎಂದು ಮಾತ್ರ ಪಟ್ಟಿ ಮಾಡಬಹುದಾಗಿತ್ತು.