ತೆಲಂಗಾಣದಲ್ಲಿ ಪೊಲೀಸ್ ಉಪ ಅಧೀಕ್ಷಕನ ೨೦೦ ಕೋಟಿ ರೂಪಾಯಿಗಳ ಅಕ್ರಮ ಆಸ್ತಿ : Telangana DSP Corruption

ಪೊಲೀಸ್ ಉಪ ಅಧೀಕ್ಷಕನಿಗೆ ಸಂಬಂಧಿಸಿದ ೧೬ ಸ್ಥಳಗಳ ಮೇಲೆ ದಾಳಿ

ಪೊಲೀಸ್ ಉಪ ಅಧೀಕ್ಷಕ ಸಂಕಿರಡ್ಡಿ ಭೀಮ್ ರೆಡ್ಡಿ (ಒಳಚಿತ್ರದಲ್ಲಿ)

ಭಾಗ್ಯನಗರ – ಇಲ್ಲಿನ ಲಂಚ ಮತ್ತು ಭ್ರಷ್ಟಾಚಾರ ನಿಗ್ರಹ ದಳವು ನಗರದ ಪೊಲೀಸ್ ಪಡೆಯ ‘ಕಂಪ್ಯೂಟರ್ ಸರ್ವಿಸ್’ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಸಂಕೀರೆಡ್ಡಿ ಭೀಮ ರೆಡ್ಡಿ ಅವರ ಮನೆ ಸೇರಿದಂತೆ ೧೬ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಇದರಲ್ಲಿ ರೆಡ್ಡಿ ಅವರ ಮನೆ ಹಾಗೂ ಅವರ ಸಂಬಂಧಿಕರು, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಸೇರಿದ ಆಸ್ತಿಗಳು ಸೇರಿವೆ. ಭ್ರಷ್ಟಾಚಾರ ನಿಗ್ರಹ ದಳದ ಪ್ರಕಾರ, ‘ರೆಡ್ಡಿ ಅವರ ಬಳಿ ೨೦೦ ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಮೌಲ್ಯದ ಆಸ್ತಿ ಇದೆ. ಇವರ ಬಳಿ ಆದಾಯದ ಮೂಲಕ್ಕಿಂತ ಹೆಚ್ಚಿನ ಸಂಪತ್ತು ಇದೆ. ಈ ಅಧಿಕಾರಿಯು ತನ್ನ ಸೇವಾ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಇತರ ಅಕ್ರಮ ಮಾರ್ಗಗಳ ಮೂಲಕ ಅಪಾರ ಪ್ರಮಾಣದ ಸಂಪತ್ತನ್ನು ಗಳಿಸಿದ್ದಾನೆ.’ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳವು ಜುಲೈ ೨ ರಂದು ಏಕಕಾಲದಲ್ಲಿ ೧೬ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ.

. ಈ ದಾಳಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ರೆಡ್ಡಿ ಅವರ ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿರುವ ಅಪಾರ ಆಸ್ತಿಗೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳು ಪತ್ತೆಯಾಗಿವೆ.

. ರೆಡ್ಡಿ ಅವರ ಮಾಲೀಕತ್ವದ ೨ ಐಷಾರಾಮಿ ಬಂಗಲೆಗಳು, ಗಾಚಿಬೌಲಿ ಮತ್ತು ತೆಲ್ಲಾಪುರದಲ್ಲಿ ೪ ಫ್ಲಾಟ್‌ಗಳು, ನಾಗೋಲೆ ಮತ್ತು ಪಟಾಣಚೆರುವಿನಲ್ಲಿ ೩ ನಿವೇಶನಗಳು, ಮಣಿಕೊಂಡದ ವಾಣಿಜ್ಯ ಸಂಕೀರ್ಣದಲ್ಲಿ ಪಾಲುದಾರಿಕೆ ಮುಂತಾದ ವಿಷಯಗಳು ಬೆಳಕಿಗೆ ಬಂದಿವೆ.

. ಕರ್ನಾಟಕ, ಹಾಗೆಯೇ ತೆಲಂಗಾಣದ ಸಂಗಾರೆಡ್ಡಿ, ವಿಕಾರಾಬಾದ ಮತ್ತು ಮುಚಿಂತಾಲಾದಲ್ಲಿ ೫೦ ಎಕರೆಗಿಂತಲೂ ಅಧಿಕ ಕೃಷಿ ಭೂಮಿಯೂ ಅವರ ಮಾಲೀಕತ್ವದಲ್ಲಿದೆ.

. ಅಧಿಕಾರಿಗಳು ನಡೆಸಿದ ಶೋಧದ ವೇಳೆ ರೆಡ್ಡಿ ಅವರ ಮನೆಯಿಂದ ೩ ಲಕ್ಷದ ೬ ಸಾವಿರ ರೂಪಾಯಿ ನಗದು ಮತ್ತು ಸಂಬಂಧಿಕರೊಬ್ಬರ ಮನೆಯಿಂದ ೪೦ ಲಕ್ಷ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ೨ ಕೆಜಿ ಚಿನ್ನದ ಆಭರಣಗಳು ಮತ್ತು ೨೦ ಕೆಜಿ ಬೆಳ್ಳಿಯ ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ.

. ಲಂಚ ಮತ್ತು ಭ್ರಷ್ಟಾಚಾರ ನಿಗ್ರಹ ದಳವು ನೀಡಿರುವ ಮಾಹಿತಿಯ ಪ್ರಕಾರ, ಜಪ್ತಿ ಮಾಡಲಾದ ಸ್ಥಿರಾಸ್ತಿಯ ಮಾರುಕಟ್ಟೆ ಮೌಲ್ಯ ೨೦೦ ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿದೆ.

ಸಂಪಾದಕೀಯ ನಿಲುವು

ಇಂತಹ ಭ್ರಷ್ಟ ಪೊಲೀಸ್ ಅಧಿಕಾರಿಯು ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿರಬಹುದು?, ಇದರ ಬಗ್ಗೆ ಯೋಚಿಸದಿರುವುದೇ ಒಳಿತು! ಭ್ರಷ್ಟಾಚಾರದಿಂದ ತುಂಬಿರುವ ಪೊಲೀಸ್ ಪಡೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೇಗೆ ತಾನೇ ಕಾಪಾಡಲು ಸಾಧ್ಯ?