ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!

  • ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಕ್ತದಲ್ಲಿ ಪತ್ರ ಬರೆದು ಆಗ್ರಹಿಸಿದ ಹಿಂದೂತ್ವನಿಷ್ಠ ದಿನೇಶ ಫಲಾಹಾರಿ

  • ತನಿಖೆ ನಡೆಯದಿದ್ದರೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಎಚ್ಚರಿಕೆ

ಮಥುರಾ (ಉತ್ತರ ಪ್ರದೇಶ) – ಅಯೋಧ್ಯೆಯ ಶ್ರೀರಾಮ ದೇವಸ್ಥಾನದ ದಾನಪೆಟ್ಟಿಗೆಯ ಕಳ್ಳತನದ ಪ್ರಕರಣದ ತನಿಖೆಯು ನಡೆಯುತ್ತಿದೆ. ಇಂತಹ ಸಂದರ್ಭದಲ್ಲೇ, ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಹಿಂದುತ್ವನಿಷ್ಠ ನಾಯಕ ದಿನೇಶ ಫಲಾಹಾರಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ರಕ್ತದಲ್ಲಿ ಪತ್ರ ಬರೆದು ಆಗ್ರಹಿಸಿದ್ದಾರೆ. ‘ಒಂದು ವೇಳೆ ನೀವು ತನಿಖೆ ನಡೆಸದಿದ್ದರೆ, ನಾವು ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇವೆ’, ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ವಿಶೇಷವೆಂದರೆ, ಫಲಾಹಾರಿ ಅವರು ಸ್ವತಃ ‘ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ’ವನ್ನು ಸ್ಥಾಪಿಸಿದ್ದು, ಶ್ರೀಕೃಷ್ಣ ಜನ್ಮಭೂಮಿ ವಿವಾದದಲ್ಲಿ ಕಕ್ಷಿದಾರರಾಗಿ ಮೊಕದ್ದಮೆ ಹೂಡಿದ್ದಾರೆ. ಒಂದಾನೊಂದು ಕಾಲದಲ್ಲಿ ದ್ವಿಚಕ್ರ ವಾಹನದಲ್ಲಿ ತಿರುಗುತ್ತಿದ್ದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಇಂದು ಕೋಟ್ಯಂತರ ರೂಪಾಯಿಯ ಕಾರುಗಳಲ್ಲಿ ತಿರುಗುತ್ತಿದ್ದಾರೆಯೇ?

ಫಲಾಹಾರಿ ಅವರು ಪತ್ರದಲ್ಲಿ, ಯಾವಾಗಲೆಲ್ಲಾ ದೇವಸ್ಥಾನದ ದಾನಪೆಟ್ಟಿಗೆಗಳನ್ನು ತೆರೆಯಲಾಗುತ್ತದೆಯೋ, ಆಗೆಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಬಂದ್ ಮಾಡಲಾಗುತ್ತದೆ. ರೂಪಾಯಿ, ಒಡವೆ, ಚಿನ್ನ, ಬೆಳ್ಳಿ, ವಜ್ರ-ವೈಢೂರ್ಯಗಳನ್ನೆಲ್ಲಾ ಲೂಟಿ ಮಾಡಲಾಗುತ್ತಿದೆ. ಈ ಹಿಂದೆ ದ್ವಿಚಕ್ರ ವಾಹನಗಳಲ್ಲಿ ಬರುತ್ತಿದ್ದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಇಂದು ಕೋಟ್ಯಂತರ ರೂಪಾಯಿಯ ಕಾರುಗಳಲ್ಲಿ ತಿರುಗುತ್ತಿದ್ದಾರೆ. ಅವರ ಬಳಿ ಈಗ ಕೋಟ್ಯಂತರ-ಶತಕೋಟ್ಯಂತರ ರೂಪಾಯಿಯ ಬಂಗಲೆಗಳು, ಕೋಠಿಗಳು ಮತ್ತು ಫಾರ್ಮ್‌ ಹೌಸ್‌ಗಳು (ತೋಟದ ಮನೆಗಳು) ಇವೆ. ಅವರು ಉತ್ತರಾಖಂಡದಲ್ಲೂ ಭೂಮಿಯನ್ನು ಖರೀದಿಸಿದ್ದಾರೆ. ಕೋಟ್ಯಂತರ ಹಿಂದೂಗಳ ಶ್ರದ್ಧೆಯೊಂದಿಗೆ ಈ ಆಟ ನಡೆಯುತ್ತಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ ಎಂದು ಬರೆದಿದ್ದಾರೆ. (ಒಂದು ವೇಳೆ ಈ ದಾವೆಯಲ್ಲಿ ಸತ್ಯಾಂಶವಿದ್ದಲ್ಲಿ ಇದು ಅಕ್ಷಮ್ಯ ಅಪರಾಧವಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಪ್ರಕರಣದಲ್ಲಿ ಆದ್ಯತೆಯ ಮೇರೆಗೆ ತನಿಖೆ ನಡೆಸಬೇಕು ಎನ್ನುವುದೇ ಶ್ರೀಕೃಷ್ಣನ ಭಕ್ತರ ಪ್ರಾರ್ಥನೆಯಾಗಿದೆ ! – ಸಂಪಾದಕರು)