ಬಂಗಾಳ ಪೊಲೀಸರಿಂದ ಮಧ್ಯರಾತ್ರಿ ಅಭಿಷೇಕ ಬ್ಯಾನರ್ಜಿ ಅವರ ನಿವಾಸದ ಮೇಲೆ ದಾಳಿ

  • ಆರ್ಥಿಕ ಹಗರಣದ ಪ್ರಕರಣದಲ್ಲಿ ಕ್ರಮ

  • ತಕ್ಷಣವೇ ಸಹಾಯಕ್ಕಾಗಿ ಧಾವಿಸಿದ ಮಮತಾ ಬ್ಯಾನರ್ಜಿ

ಕೊಲಕಾತಾ (ಬಂಗಾಳ) – ಬಂಗಾಳ ಪೊಲೀಸರ ದೊಡ್ಡ ತಂಡವೊಂದು ತೃಣಮೂಲ ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ ಅವರ ಕಾಲಿಘಾಟ್ (ಪಟುಆಪಾಡಾ) ನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದೆ. ಜೂನ 12 ರ ಮಧ್ಯರಾತ್ರಿ 2.30 ಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ದಾಳಿ ನಡೆಸಲು ಬಂದ ಪೊಲೀಸ್ ಅಧಿಕಾರಿಗಳು ಆರಂಭದಲ್ಲಿ ದೀರ್ಘಕಾಲದವರೆಗೆ ಅಭಿಷೇಕ ಬ್ಯಾನರ್ಜಿ ಅವರ ಮನೆಯ ಬಾಗಿಲು ತಟ್ಟಿದರು; ಆದರೆ ಬಾಗಿಲು ತೆರೆಯದ ಕಾರಣ ಪೊಲೀಸರು ಚಿಲಕವನ್ನು ಮುರಿದು ಮನೆಗೆ ಪ್ರವೇಶಿಸಿದರು ಮತ್ತು ಸುಮಾರು 5 ಗಂಟೆಗಳ ಕಾಲ ಮನೆಯನ್ನು ತೀವ್ರವಾಗಿ ಶೋಧಿಸಿದರು. ಈ ಕಾರ್ಯಾಚರಣೆಯ ಸಮಯದಲ್ಲಿ ಕೇಂದ್ರ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸೀಲ್ ಮಾಡಿದ್ದವು.

ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ಅವರು ಮುಂಜಾನೆ ಸೋದರಳಿಯ ಅಭಿಷೇಕ ಬ್ಯಾನರ್ಜಿ ಅವರ ಮನೆಗೆ ತಲುಪಿದರು. ಇದರಿಂದಾಗಿ ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡಿತು. ಈ ವೇಳೆ ಅಭಿಷೇಕ ಬ್ಯಾನರ್ಜಿ ಅವರು ಮಾತನಾಡಿ, ಪೊಲೀಸರು ಚಿಲಕ ಮುರಿದು ಇಡೀ ಮನೆಯನ್ನು ಶೋಧಿಸಿದ್ದಾರೆ. ನಮ್ಮ ಬಳಿ ಇದರ ಸಂಪೂರ್ಣ ಚಿತ್ರೀಕರಣವಿದೆ. ಆದಾಗ್ಯೂ ನಾವು ತನಿಖಾ ಸಂಸ್ಥೆಗಳಿಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದರು. ರಾಜ್ಯ ಅಪರಾಧ ತನಿಖಾ ಇಲಾಖೆಯು ಇತ್ತೀಚೆಗಷ್ಟೇ ನಕಲಿ ಸಹಿ ಪ್ರಕರಣದಲ್ಲಿ ಅಭಿಷೇಕ ಅವರನ್ನು 5 ಗಂಟೆ 30 ನಿಮಿಷಗಳ ಕಾಲ ವಿಚಾರಣೆ ನಡೆಸಿತ್ತು. ಇದೇ ಪ್ರಕರಣದ ವಿಚಾರಣೆಗಾಗಿ ಅವರನ್ನು ಜೂನ್ 14 ರಂದು ಮತ್ತೊಮ್ಮೆ ಕರೆಯಲಾಗಿದೆ.

ತೃಣಮೂಲ ಕಾಂಗ್ರೆಸ್ ನಾಯಕನ ದೂರಿನ ಮೇರೆಗೆ ಕ್ರಮ!

ಶಾಲಬನಿಯ ತೃಣಮೂಲ ಕಾಂಗ್ರೆಸ್ಸಿನ ಸ್ಥಳೀಯ ನಾಯಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ದೂರಿನಲ್ಲಿ ಅಭಿಷೇಕ ಬ್ಯಾನರ್ಜಿ ಅವರ ವೈಯಕ್ತಿಕ ಸಹಾಯಕ ಸುಮಿತ ರಾಯ್ ಅವರು ಚುನಾವಣಾ ಟಿಕೆಟ್ ಕೊಡಿಸುವ ಹೆಸರಿನಲ್ಲಿ ಆರ್ಥಿಕ ಹಗರಣ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್ಸಿನ ಅಧಿಕಾರಾವಧಿಯಲ್ಲಿ ನಡೆದ ಭ್ರಷ್ಟಾಚಾರದ ಒಂದೊಂದೇ ಪ್ರಕರಣಗಳು ಈಗ ಬಹಿರಂಗಗೊಳ್ಳುತ್ತಿವೆ. ಆದ್ದರಿಂದ ಸರಕಾರವು ಇಂತಹ ಭ್ರಷ್ಟರನ್ನು ಜೈಲಿಗೆ ತಳ್ಳಿ ಅವರ ರಾಜಕೀಯ ಪಕ್ಷವನ್ನು ನಿಷೇಧಿಸಬೇಕು!