ಸೋಮನಾಥ ದೇವಸ್ಥಾನಕ್ಕೆ 75 ವರ್ಷ ಪೂರ್ತಿ; ಪ್ರಧಾನಿ ಮೋದಿಯವರಿಂದ ಕುಂಭಾಭಿಷೇಕ!

(ಕುಂಭಾಭಿಷೇಕ ಎಂದರೆ ವೈದಿಕ ಮಂತ್ರೋಚ್ಚಾರಗಳೊಂದಿಗೆ 11 ಪವಿತ್ರ ತೀರ್ಥಗಳ ಜಲವನ್ನು ಶಿಖರದ ಮೇಲೆ ಅರ್ಪಿಸುವುದು)

ಜಾಮ್‌ನಗರ (ಗುಜರಾತ್) – 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಗುಜರಾತಿನ ಸೋಮನಾಥ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮೇ 11 ರಂದು 75 ವರ್ಷಗಳು ಪೂರೈಸಿವೆ. 11 ಮೇ 1951 ರಂದು ಸ್ವತಂತ್ರ ಭಾರತದಲ್ಲಿ ಹೊಸದಾಗಿ ನಿರ್ಮಿಸಲಾದ ಸೋಮನಾಥ ದೇವಾಲಯದ ಪ್ರಾಣಪ್ರತಿಷ್ಠಾಪನೆ ನಡೆದಿತ್ತು. ಈ ಐತಿಹಾಸಿಕ ಘಟನೆಯನ್ನು ಸ್ಮರಿಸಲು ‘ಸೋಮನಾಥ ಅಮೃತ ಮಹೋತ್ಸವ’ವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿವಾಭಿಷೇಕ ಮಾಡಿದರು. ತದನಂತರ, ರಿಮೋಟ್ ಮೂಲಕ ದೇವಸ್ಥಾನದ ಕುಂಭಾಭಿಷೇಕವನ್ನು ನೆರವೇರಿಸಿದರು. ವೈದಿಕ ಮಂತ್ರೋಚ್ಚಾರಗಳ ನಡುವೆ 11 ಪವಿತ್ರ ತೀರ್ಥಗಳ ಜಲವನ್ನು ಶಿಖರದ ಮೇಲೆ ಅರ್ಪಿಸಲಾಯಿತು. 90 ಮೀಟರ್ ಎತ್ತರದ ಕ್ರೇನ್ ಸಹಾಯದಿಂದ ಕಳಶವನ್ನು ದೇವಸ್ಥಾನದ ಮೇಲೆ ಇರಿಸಲಾಗಿತ್ತು. ಅಭಿಷೇಕದ ನಂತರ ಚೇತಕ್ ಹೆಲಿಕಾಪ್ಟರ್ ಮೂಲಕ ದೇವಸ್ಥಾನದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು.

ವಾಯುಸೇನೆಯ ಸೂರ್ಯಕಿರಣ್ ವಿಮಾನ ತಂಡವು ದೇವಸ್ಥಾನದ ಮೇಲೆ 15 ನಿಮಿಷಗಳ ಕಾಲ ‘ಏರ್ ಶೋ’ (ವೈಮಾನಿಕ ಪ್ರದರ್ಶನ) ನಡೆಸಿತು.
ಕ್ರಿ.ಶ. 1026 ರಲ್ಲಿ ಮಹಮೂದ್ ಘಜ್ನಿ ಸೋಮನಾಥ ದೇವಸ್ಥಾನದ ಮೇಲೆ ಆಕ್ರಮಣ ಮಾಡಿ ಮೊದಲ ಬಾರಿ ಧ್ವಂಸಗೊಳಿಸಿದ್ದನು. ಆ ದಾಳಿ ನಡೆದು ಈಗ 1,೦೦೦ ವರ್ಷಗಳು ಪೂರ್ಣಗೊಂಡಿವೆ.