ಕೇರಳ: ಕಾಂಗ್ರೆಸ್ ಮುಖ್ಯಮಂತ್ರಿಯ ಆಯ್ಕೆ ಇನ್ನು ಅಂತಿಮವಾಗಿಲ್ಲ !

ತಿರುವನಂತಪುರಂ (ಕೇರಳ) – ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಅಧಿಕಾರ ಸಿಕ್ಕಿದ್ದರೂ ಕೂಡ, ಇದುವರೆಗೆ ಯಾರನ್ನೂ ಮುಖ್ಯಮಂತ್ರಿಯೆಂದು ಘೋಷಿಸಿಲ್ಲ. ಯಾವ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಬಗ್ಗೆ ಕಾಂಗ್ರೆಸ್ ಪಕ್ಷ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ಸಿಗೆ ಕೇವಲ ೧೧ ದಿನಗಳ ಕಾಲಾವಕಾಶವಿದೆ; ಏಕೆಂದರೆ ಕೇರಳ ವಿಧಾನಸಭೆಯ ಅವಧಿಯು ಮೇ ೨೩ ರಂದು ಕೊನೆಗೊಳ್ಳಲಿದೆ. ಒಂದು ವೇಳೆ ವಿವಿಧ ಕಾರಣಗಳಿಂದ ಸರಕಾರ ರಚಿಸಲು ಸಾಧ್ಯವಾಗದಿದ್ದರೆ, ಆಗ ಸಂವಿಧಾನದ ಕಲಂ ೩೫೬ ರ ಅಡಿಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುವುದು.

ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಯಲ್ಲಿ ಕಾಂಗ್ರೆಸ್‌ ಗೆ ವಿಳಂಬವೇಕೆ ಆಗುತ್ತಿದೆ?

ಕೇರಳ ವಿಧಾನಸಭೆಯ ಒಟ್ಟು ೧೪೦ ಸ್ಥಾನಗಳಲ್ಲಿ ಕಾಂಗ್ರೆಸ್ ೬೩ ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ನೇತೃತ್ವದ ‘ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್’ (ಯು.ಡಿ.ಎಫ್.) ಮೈತ್ರಿಕೂಟವು ಕೇರಳದಲ್ಲಿ ೯೨ ಸ್ಥಾನಗಳೊಂದಿಗೆ ಬಹುಮತವನ್ನು ಪಡೆದಿದೆ. ಇದರಿಂದಾಗಿ ಕಾಂಗ್ರೆಸ್ ಸರಕಾರವನ್ನು ರಚಿಸುವುದು ನಿಶ್ಚಿತವಾಗಿದೆ; ಆದರೆ ಕೇರಳದಲ್ಲಿ ಕಾಂಗ್ರೆಸ್ಸಿನ ಮೂವರು ಪ್ರಮುಖ ನಾಯಕರ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗಿದೆ. ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಅವರು ಸ್ಥಳೀಯ ಕಾರ್ಯಕರ್ತರಲ್ಲಿ ಜನಪ್ರಿಯರಾಗಿದ್ದಾರೆ. ಕೆ.ಸಿ. ವೇಣುಗೋಪಾಲ್ ಅವರು ನೂತನವಾಗಿ ಆಯ್ಕೆಯಾದ ಶಾಸಕರಲ್ಲಿ ಪ್ರಭಾವ ಹೊಂದಿದ್ದಾರೆ, ಇನ್ನು ರಮೇಶ ಚೆನ್ನಿತ್ತಲ ಅವರು ಕೇರಳ ಕಾಂಗ್ರೆಸ್ಸಿನ ಅತ್ಯಂತ ಹಿರಿಯ ನಾಯಕರಾಗಿದ್ದಾರೆ. ಕೆ.ಸಿ. ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದರೆ ಒಂದು ಸಣ್ಣ ತಾಂತ್ರಿಕ ಅಡಚಣೆಯೂ ಎದುರಾಗಲಿದೆ, ಅದೇನೆಂದರೆ ವೇಣುಗೋಪಾಲ್ ಅವರು ಪ್ರಸ್ತುತ ಕೇರಳ ವಿಧಾನಸಭೆಯ ಶಾಸಕರಲ್ಲ. ಅವರು ಅಧಿಕಾರ ವಹಿಸಿಕೊಂಡ ೬ ತಿಂಗಳೊಳಗೆ ಶಾಸಕರಾಗಿ ಆಯ್ಕೆಯಾಗಬೇಕಾಗುತ್ತದೆ. ಈ ಮೂವರಲ್ಲಿ ಯಾರನ್ನು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂರಿಸಬೇಕೆಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಅಧ್ಯಕ್ಷರಿಂದ ವಿಳಂಬವಾಗುತ್ತಿದೆ.